‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎನ್.ಪಿ.ಎಸ್ ಅವೈಜ್ಞಾನಿಕ ಯೋಜನೆಯ ವಿರುದ್ಧ ಮಹಾ ರಕ್ತದಾನ
ಭಟ್ಕಳ: ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘ ಬೆಂಗಳೂರು (ರಿ) ತಾಲೂಕು ಘಟಕ ಭಟ್ಕಳ ದ ವತಿಯಿಂದ ಬುಧವಾರ ತಾಲೂಕು ಆಸ್ಪತ್ರೆ, ಭಟ್ಕಳ ದಲ್ಲಿ ತಾಲೂಕು ಆಸ್ಪತ್ರೆ ಭಟ್ಕಳ, ರಕ್ತ ನಿಧಿ ಘಟಕ ಕುಮಟಾ ಹಾಗೂ ರಕ್ತ ನಿಧಿ ಘಟಕ ಉಡುಪಿ ಇವರ ಸಹಯೋಗದೊಂದಿಗೆ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೋಷಣೆಯೊಂದಿಗೆ ಎನ್.ಪಿ.ಎಸ್ ಎಂಬ ಅವೈಜ್ಞಾನಿಕ ಯೋಜನೆಯ ವಿರುದ್ಧ ಮಹಾ ರಕ್ತದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತಾಲೂಕಾ ಆರೋಗ್ಯಾಧಿಕಾರಿ ಮೂರ್ತಿರಾಜ್ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎನ್.ಪಿ.ಎಸ್ ಯೋಜನೆಯ ವಿರುದ್ಧ ಸಾಮಾಜಿ ಕಳಕಳಿ ಇರುವ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕು ಆಸ್ಪತ್ರೆಯ ವೈದ್ಯ ಲಕ್ಷೀಶ ನಾಯ್ಕ, ರಕ್ತದಾನದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್.ಪಿ.ಎಸ್ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ ಹೆಗಡೆ ಮಾತನಾಡಿ, ಸರ್ಕಾರಿ ನೌಕರರ ದುಡಿತವನ್ನು ವಿಮಾ ಕಂಪನಿಗಳಿಗೆ ಮಾರಾಟ ಮಾಡುತ್ತಿರುವ ವ್ಯವಸ್ಥೆಯ ವಿರುದ್ಧ ಕಿಡಿ ಕಾರಿದರು. ಎನ್.ಪಿ.ಎಸ್ ಯೋಜನೆಯು ನೌಕರ ಸಂಧ್ಯಾ ಕಾಲದ ಬದುಕನ್ನು ಕತ್ತಲೆಯ ಕೂಪಕ್ಕೆ ತಳ್ಳುವಂತಹುದಾಗಿದ್ದು, ಶೀಘ್ರವೇ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಎನ್.ಪಿ.ಎಸ್ ಅನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿದರು.
ಸ್ವಇಚ್ಛೆಯಿಂದ ರಕ್ತ ನೀಡಿದ ಎಲ್ಲಾ ಎನ್.ಪಿ ಎಸ್ ನೌಕರರಿಗೆ ಪ್ರಶಾಂತ ಕಾಯ್ಕಿಣಿ ಹಾಗೂ ವಿಲ್ಸನ್ ರೋಡ್ರೀಗಸ್ ಜ್ಯೂಸ್ ಹಾಗೂ ಸೇಬು ಹಣ್ಣು ವಿತರಿಸಿದರು.
ಸುಮಾರು ನೂರೈವತ್ತು ಹೆಚ್ಚು ನೌಕರರು ಭಾಗವಿಹಿಸಿದ್ದ ಕಾರ್ಯಕ್ರಮದಲ್ಲಿ 60 ನೌಕರರು ಸ್ವ ಇಚ್ಛೆಯಿಂದ ರಕ್ತ ನೀಡಿ ಹೋರಾಟಕ್ಕೆ ಬೆಂಬಲ ನೀಡಿದರು.
ಕಾರ್ಯಕ್ರಮದಲ್ಲಿ ಪುಟ್ಟರಾಜು, ರವಿಕಾಂತ ಮೇಟ್ರೆ, ಈಶ್ವರ ನಾಯ್ಕ, ವಾಸು ಮೊಗೇರ, ರಾಘವೇಂದ್ರ ಅಡಿಗ, ಪ್ರವೀಣ ಕುಮಾರ ರಾಥೋಡ್, ಚಿದಾನಂದ ಪಟಗಾರ, ಶ್ರೀಮತಿ ಗಾಯಿತ್ರಿ ನಾಯ್ಕ, ಶ್ರೀಮತಿ ನಿರ್ಮಲಾ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಆನಂದ ಕೆ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು.