ಭಟ್ಕಳ: ದಿನದಿಂದ ದಿನಕ್ಕೆ ಬೆಲೆ ಏರಿಕೆ ಹೆಚ್ಚಾಗುತ್ತಿರುವುದರಿಂದ ಅಕ್ಷರ ದಾಸೋಹ ಬಿಸಿಯೂಟ ನೌಕರರು ತಮ್ಮ ಜೀವನವನ್ನು ಸಾಗಿಸಲು ಕಷ್ಟ ಸಾಧ್ಯವಾಗುತ್ತಿದ್ದು, ಎಲ್ಲಾ ನೌಕರರಿಗೆ ಕೆಲಸದ ಫಲಿತಾಂಶದ ಆಧಾರದಲ್ಲಿ ಕನಿಷ್ಠ ವೇತನ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕಾ ಘಟಕವೂ ತಾ.ಪಂ. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರ ಮೂಲಕ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರವಾರ ಇವರಿಗೆ ಮನವಿಯನ್ನು ಸಲ್ಲಿಸಿದರು.
ಮನವಿಯಲ್ಲಿ ಎಲ್ಲರಿಗೂ ಶಿಕ್ಷಣ ಎನ್ನುವ ಘೋಷಣೆಯಡಿ ಸುಪ್ರೀಂಕೋರ್ಟನ ಸಲಹೆಯ ಮೇರೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ 2002ರಲ್ಲಿ ಪ್ರಾರಂಭವಾಗಿ ಇಂದಿಗೆ 16 ವರ್ಷ ಕಳೆದಿದೆ. ಈ ಯೋಜನೆ ಮೂಲತಃ ಕೇಂದ್ರ ಸರಕಾರದ್ದಾಗಿದ್ದು ಜನರ ಕಲ್ಯಾಣ ಕಾರ್ಯಕ್ರಮಗಳ ಭಾಗವಾಗಿದ್ದು, ಯೋಜನಾ ಆಯೋಗವನ್ನು ರದ್ದು ಮಾಡಿ ನೀತಿ ಆಯೋಗವನ್ನು ರಚಿಸಿದೆ. ಈ ನೀತಿ ಆಯೋಗ ಆಹಾರ, ಆರೋಗ್ಯ ಮತ್ತು ಆಹಾರಕ್ಕೆ ಸಂಬಂಶಿದಿದ ಎಲ್ಲಾ ಯೋಜನೆಗಳಿಂದಲೂ ಅನುದಾನವನ್ನು ಕಡಿತ ಮಾಡುತ್ತಿದೆ. ಇದರಿಂದಾಗಿ ಯೋಜನೆಯ ಮೇಲೆ ಕರಾಳ ಛಾಯೆ ಆವರಿಸುತ್ತಿದೆ. ಈ ಯೋಜನೆಯನ್ನು ಖಾಸಗಿ ಸ್ವಯಂ ಸೇವಾ ಸಂಘಟನೆಗಳಿಗೆ ಕೋಡುವ ಸಲುವಾಗಿ ಕೇಂದ್ರಿಕೃತ ಅಡುಗೆಯನ್ನು ಮಾಡಲು ನಿರ್ದೇಶನವನ್ನು ನೀಡಿದೆ. ಮಕ್ಕಳ ಅಪೌಷ್ಠಿಕತೆಯನ್ನು ಹೋಗಲಾಡಿಸಲು ದುಡಿಯುವ ಈ ಮಹಿಳೆಯರು ಕೇವಲ 2000 ಮತ್ತು 2200 ರೂ.ಗಳ ತಿಂಗಳ ಸಂಭಾವನೆ ಬಿಟ್ಟರೆ ಬೇರ್ಯಾವ ಸವಲತ್ತುಗಳು ಇವರಿಗೆ ಇಲ್ಲ. ನಿರುದ್ಯೋಗ, ಬಡತನದ ಕಾರಣಗಳಿಂದಾಗಿ ಹಳ್ಳಿಗಾಡಿನ ಸಾಧಾರಣ ಮಹಿಳೆಯರು ದುಡಿಯುತ್ತಿದ್ದಾರೆ. ಇಷ್ಟು ಕಡಿಮೆ ಸಂಬಳವಿದ್ದು ಯೋಜನೆಯ ಯಶಸ್ವಿಗೆ ದುಡಿಯುತ್ತಿದ್ದರು ಕೂಡಾ ಈ ಮಹಿಳೆಯರ ಮೇಲಿನ ದಾಳಿ-ದಬ್ಬಾಳಿಕೆಗಳು ಹೆಚ್ಚಾಗುತ್ತದೆ. ಭೇಟಿ ಬಚಾವೋ, ಭೇಟಿ ಪಡಾವೋ ಅಂತ ಹೇಳುವ ಸರಕಾರ 9 ವರ್ಷಗಳಿಂದ ಈ ಮಹಿಳೆಯರಿಗೆ ವೇತನ ಹೆಚ್ಚಳ ಮಾಡದೇ ದುಡಿಸುತ್ತಿದೆ. ಕೇಂದ್ರ ಸರಕಾರ ಯೋಜನೆಯೆಂದು ರಾಜ್ಯ ಸರಕಾರ ಕನಿಷ್ಠ ವೇತನ ಜಾರಿ ಮಾಡದಿರುವುದು ಸರಿಯಲ್ಲ. ಎಲ್ಲಾ ನೌಕರರಿಗೆ ಕೆಲಸದ ಫಲಿತಾಂಶದ ಆಧಾರದಲ್ಲಿ ಕನಿಷ್ಠ ವೇತನ ನೀಡಬೇಕೆಂದು ಒತ್ತಾಯಿಸಿ ಜನವರಿಯಲ್ಲಿ ನಡೆಯುವ ಅಧಿವೇಶನದ ಸಂಧರ್ಭದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
ಮನವಿಯನ್ನು ತಾ.ಪಂ. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ವಿಶ್ವನಾಥ ಕೋಟ್ಯಾನ್ ಸ್ವೀಕರಿಸಿದರು. ತಾಲುಕಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶಾರದಾ ನಾಯ್ಕ ಉಪಸ್ಥಿತರಿದ್ದರು. ಈ ಸಂಧರ್ಬದಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶೀ ಸುಭಾಶ ಕೊಪ್ಪಿಕರ್, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕಾ ಘಟಕ ಅಧ್ಯಕ್ಷೆ ಗೀತಾ ಜಿ.ನಾಯ್ಕ, ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ನಾಯ್ಕ ಕೋಮಲಾ ದೇವಾಡಿಗ, ನೇತ್ರಾವತಿ ನಾಯ್ಕ ಸೇರಿದಂತೆ ಬಿಸಿಯೂಟ ನೌಕರರು ಇದ್ದರು.
ವಿವೇಕಾನಂದರ ಜನ್ಮದಿನಾಚರಣೆ ಹಿನ್ನೆಲೆ "ನಿರ್ಮಾಣಂ” ಪರೀಕ್ಷೆ ಆಯೋಜನೆ
ಭಟ್ಕಳ: ವಿವೇಕ್ ಶಿಕ್ಷಣ ವಾಹಿನಿ, ಯುವ ಬ್ರಿಗೇಡ್ ಭಟ್ಕಳ ಮತ್ತು ಜೆಸಿಐ ಶಿರೂರು ಇವರ ಸಹ ಭಾಗಿತ್ವದಲ್ಲಿ ಶುಕ್ರವಾರದಂದು ಇಲ್ಲಿನ ಆಸರಕೇರಿ ಶ್ರೀ ನಿಚ್ಛಲಮಕ್ಕಿ ಸಭಾಭವನದಲ್ಲಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಿನ 5 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ "ನಿರ್ಮಾಣಂ ಪರೀಕ್ಷೆಯನ್ನು" ನಡೆಸಲಾಯಿತು.
ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಹತ್ತು ದಿನದ ಮುಂಚಿತವಾಗಿ ಎಲ್ಲಾ ಪ್ರೌಢಶಾಲೆಗಳಿಗೆ "ವಿದ್ಯಾರ್ಥಿಗಾಗಿ" ಎನ್ನುವ ಪುಸ್ತಕ ವಿತರಿಸಿದ್ದು. ಇದೇ ಪುಸ್ತಕ ಆದರಿಸಿ ನೂರು ಅಂಕದ ಪರೀಕ್ಷೆಯನ್ನು ನಡೆಸಲಾಯಿತು. ಇಲ್ಲಿನ ದಿ ನ್ಯೂ ಇಂಗ್ಲೀಷ್ ಸ್ಕೂಲ್ ಶಾಲೆಯ 20, ಸೋನಾರಕೇರಿ ಸರಕಾರಿ ಪ್ರೌಢಶಾಲೆಯ 34, ಸರಕಾರಿ ಪ್ರೌಢಶಾಲೆ, ಮುಂಡಳ್ಳಿ 46, ಸರಕಾರಿ ಪ್ರೌಢಶಾಲೆ ಗೊರಟೆ 45 ಮತ್ತು ಸರಕಾರಿ ಪ್ರೌಢಶಾಲೆ ಬೆಳಕೆಯ 15 ವಿದ್ಯಾರ್ಥಿಗಳೂ ಪರೀಕ್ಷೆಯನ್ನು ಬರೆದರು.
ಈ ಸಂಧರ್ಭದಲ್ಲಿ ಯುವ ಬ್ರಿಗೇಡ್ ಭಟ್ಕಳ ಮಾರ್ಗದರ್ಶಕ ರವಿ ನಾಯ್ಕ, ಬ್ರಿಗೇಡ್ ಪ್ರಮುಖ ಕುಲದೀಪ್ ನಾಯ್ಕ, ರಾಘವೇಂದ್ರ ನಾಯ್ಕ ಉದಯ ನಾಯ್ಕ ಸೇರಿದಂತೆ ಬ್ರಿಗೇಡ ಕಾರ್ಯಕರ್ತರು, ದಿ ನ್ಯೂ ಇಂಗ್ಲೀಷ್ ಸ್ಕೂಲ್ ಶಿಕ್ಷಕ ಪಾಂಡುರಂಗ ಅಳ್ವೇಗದ್ದೆ, ಮುಂಡಳ್ಳಿ ಶಾಲೆ ದೈಹಿಕ ಶಿಕ್ಷಕ ಎಂ.ಜಿ. ನಾಯ್ಕ, ಸೋನಾರಕೇರಿ ಸರಕಾರಿ ಪ್ರೌಢಶಾಲೆ ಶಿಕ್ಷಕ ಸವಿತಾ ನಾಯ್ಕ ಉಪಸ್ಥಿತರಿದ್ದರು.