ಭಟ್ಕಳ: ಪುರಸಭೆ ವ್ಯಾಪ್ತಿಯ ಆಸರಕೇರಿ, ಸೋನಾರಕೇರಿ ಭಾಗದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಹೊಲಸು ನೀರು ಕುಡಿಯುವ ನೀರಿನ ಬಾವಿಗೆ ಸೇರ್ಪಡೆಯಾಗುತ್ತಿದ್ದು, ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು ಆಗ್ರಹಿಸಿ ಆಸರಕೇರಿ-ಸೋನಾರಕೇರಿ ಭಾಗದ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ನಮ್ಮ ಭಾಗದಲ್ಲಿ ಎಡಿಬಿ ನೆರವಿನಡಿಯಲ್ಲಿ ನಿರ್ಮಿಸಲಾದ ಒಳಚರಂಡಿ ವ್ಯವವ್ಥೆ ಅವೈಜ್ಞಾನಿಕವಾಗಿದ್ದು, ಒಳಚರಂಡಿ ನೀರು ಕುಡಿಯುವ ನೀರಿ ಬಾವಿಗೆ ಸೇರ್ಪಡೆಯಾಗಿರುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಕಳೆದ ೨-೩ ವರ್ಷಗಳಿಂದ ಒಳಚರಂಡಿ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ಒಂದು ರೀತಿ, ಬೇಸಿಗೆಯಲ್ಲಿ ಇನ್ನೊಂದು ರೀತಿಯ ಸಂಕಷ್ಟವನ್ನು ಅನುಭವಿಸುಂತಾಗಿದೆ. ಮಳೆಗಾಲದಲ್ಲಿ ಒಳಚರಂಡಿ ಛೇಂಬರುಗಳು ಉಕ್ಕಿ ಹರಿದು ಹೊಲಸು ನೀರು ಚರಂಡಿಯನ್ನು ಸೇರಿ ಶೇಕರಣೆಯಾಗಿ ದುರ್ವಾಸನೆ ಬೀರುತ್ತಿದೆ. ಇದರಿಂದ ರಸ್ತೆಯಲ್ಲಿ ತಿರುಗಾಡುವುದೇ ಕಷ್ಟವಾಗಿದೆ. ಒಳಚರಂಡಿ ಅವ್ಯವಸ್ಥೆಯಿಂದ ಸಂಜೆ ಸಮಯದಲ್ಲಿ ಸೊಳ್ಳೆಗಳ ಕಾಟ ಅಧಿಕವಾಗಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ ಡೆಂಗ್ಯೂ, ಚಿಕನ್ಗೂನ್ಯ, ಮಲೇರಿಯಾ, ಟೈಪಾಯಿಡ್ ಮುಂತಾದ ರೋಗಗಳು ಕಾಣಿಸಿಕೊಂಡಿವೆ. ಮತ್ತಷ್ಟು ರೋಗ ರುಜಿನಗಳು ಹರಡಿ ಸಮಸ್ಯೆ ಉಂಟಾಗುವ ಮೊದಲು ಪುರಸಭೆ ವತಿಯಿಂದ ಒಳಚರಂಡಿ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಆಸರಕೇರಿ-ಸೋನಾರಕೇರಿ ಭಾಗದಲ್ಲಿ ವಾರಕ್ಕೊಮ್ಮೆಯಾದ ಚರಂಡಿಗಳನ್ನು ಸ್ವಚ್ಛಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಬೇಸಿಗೆಯಲ್ಲಿ ಚೇಂಬರ್ನಲ್ಲಿದ್ದ ನೀರು ಭೂಮಿಯನ್ನು ಸೇರಿ ಅಂತರ್ಜಲ ಹಾಳಾಗಿ ಬಾವಿಯ ನೀಡು ಕುಡಿಯಲು ಅಯೋಗ್ಯವಾಗುತ್ತದೆ. ಈ ರೀತಿಯಾಗಿ ನಮ್ಮ ಬಾವಿ ಹಾಳಾಗುವುದಲ್ಲದೇ ಕಾಯಿಲೆಗಳು ಹರಡುವುದರಿಂದ ನಾವು ಭಯಭೀತರಾಗಿದ್ದೇವೆ ಎಂದೂ ತಿಳಿಸಲಾಗಿದೆ.
ಮುಖಂಡ ಕೃಷ್ಣಾ ನಾಯ್ಕ ಆಸರಕೇರಿ ಮಾತನಾಡಿ ಒಳಚರಂಡಿ ಅವ್ಯವಸ್ಥೆಯಿಂದ ಸೋನಾರಕೇರಿ-ಆಸರಕೇರಿ ಸಾರ್ವಜನಿಕರು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದರು. ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಯೋಜನಾಧಿಕಾರಿ ವೇಣುಗೋಪಾಲ ಶಾಸ್ತ್ರಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವೆಂಕಟೇಶ ನಾಯ್ಕ, ಸಚಿನ್ ಮಹಾಲೆ, ಪ್ರಕಾಶ ನಾಯ್ಕ, ನಿತೇಶ ಮಹಾಲೆ, ಸತ್ಯನಾರಾಯಣ ಶೇಟ್, ರಘುರಾಮ ಮಡಿವಾಳ, ಬಾಲಚಂದ್ರ ಮಹಾಲೆ, ಈಶ್ವರ ನಾಯ್ಕ, ರಮೇಶ, ಮಾರುತಿ ನಾಯ್ಕ, ವಿಠಲ್ ಮಹಾಲೆ, ಮಣಿಕಂಠ ಪೂಜಾರಿ ಮುಂತಾದವರಿದ್ದರು. (೧೧-ಬಿಕೆಎಲ್-ಒಳಚರಂಡಿ_ಮನವಿ)
ಸೆ.೧೨ರಂದು ಕೌಶಲ್ಯಾಭಿವೃದ್ಧಿ ಮತ್ತು ಉಧ್ಯಮಶೀಲತಾ ಪ್ರೇರಣಾ ಶಿಬಿರ
ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನಾವರ-ಭಟ್ಕಳದ ವತಿಯಿಂದ ಕೌಶಲ್ಯಾಭಿವೃದ್ಧಿ ಮತ್ತು ಉಧ್ಯಮಶೀಲತಾ ಪ್ರೇರಣಾ ಶಿಬಿರ ಸೆ.೧೨ರಂದು ಬೆಳಿಗ್ಗೆ ೯.೩೦ ಗಂಟೆಗೆ ಇಲ್ಲಿನ ಆಸರಕೇರಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿಬಿರವನ್ನು ಉತ್ತರ ಕನ್ನಡ ಜಿಲ್ಲಾ ನಿರ್ದೇಶಕ ಲಕ್ಷ್ಮಣ ಎಂ. ಉದ್ಘಾಟಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಬ್ರಹ್ಮಾವರದ ರೂಡ್ಸೆಟ್ ಉಪನ್ಯಾಸಕ ಕರುಣಾಕರ, ಭಟ್ಕಳದ ವಿದ್ಯಾ ವಿ. ಭಟ್ಕಳ, ಪದ್ಮಾ ಕಂಚುಗಾರ, ಸುಶೀಲ ಗಣಪತಿ ನಾಯ್ಕ ಭಾಗವಹಿಸುವರು.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ನಾಮಧಾರಿ ಸಮಾಜದ ಅಧ್ಯಕ್ಷ ಎಂ. ಆರ್. ನಾಯ್ಕ, ಎಸ್.ಬಿ.ಐ. ಶಾಖಾ ಪ್ರಬಂಧಕ ಅರುಣ್, ಯೋಜನಾಧಿಕಾರಿ ಎಂ. ಎಸ್. ಈಶ್ವರ, ಜಿಲ್ಲಾ ಜನಜಾಗೃತಿ ವೇದಿಕೆ ಶ್ರೀಧರ ನಾಯ್ಕ ಉಪಸ್ಥಿತರಿರುವರು ಎಂದೂ ತಿಳಿಸಲಾಗಿದೆ.