ಭಟ್ಕಳ: ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯವರು ಮಂಡಿಸಿದ ಬಜೆಟ್ ಕೇವಲ ರಾಜಕೀಯ ಗಿಮಿಕ್ ಆಗಿದ್ದು ಮುಂದಿನ ಚುನಾವಣೆಯಲ್ಲಿ ಜೆ.ಡಿ.ಎಸ್. ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಎಲ್ಲಾ ಕಸರತ್ತನ್ನು ಮಾಡಿದ ಬಜೆಟ್ ಆಗಿದೆ. ಅಲ್ಲದೇ ಇದೊಂದು ಅಣ್ಣ ತಮ್ಮರ ಬಜೆಟ್ ಆಗಿದ್ದು ಜನಹಿತದ ಬಜೆಟ್ ಆಗಿಲ್ಲ ಎಂದು ಭಟ್ಕಳ ಶಾಸಕ ಸುನಿಲ್ ನಾಯ್ಕ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ದೂರವಾಣಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಈ ಸರಕಾರದ ಬಜೆಟ್ ಜೆ.ಡಿ.ಎಸ್. ಪಕ್ಷದ ಬಲವರ್ಧನೆಗೆ ಮಾಡಿಕೊಂಡ ತಂತ್ರವಾಗಿದೆ. ಈಗ ಇರುವ ಜೆ.ಡಿ.ಎಸ್. ಬಲವನ್ನು ಎರಡರಷ್ಟು ಹೆಚ್ಚು ಮಾಡಿಕೊಳ್ಳುವ ಸಲುವಾಗಿಯೇ ರಾಜ್ಯದಲ್ಲಿ ಕೇವಲ ನಾಲ್ಕು ಜಿಲ್ಲೆಗಳಿಗೆ ಮಾತ್ರ ಬಂಪರ್ ಕೊಡುವೆ ಘೋಷಣೆ ಮಾಡಿದ್ದಾರೆ. ಮೈಸೂರು, ಮಂಡ್ಯ, ರಾಮನಗರ ಮತ್ತು ಹಾಸನಕ್ಕೆ ಬಹುಪಾಲು ನೀಡಿದ್ದರ ಮರ್ಮ ಜನಸಾಮಾನ್ಯರಿಗೂ ಕೂಡಾ ಅರ್ಥವಾಗಿದ್ದು ಉಳಿದಂತೆ ಎಲ್ಲಾ ಜಿಲ್ಲೆಗಳಿಗೂ ಕೂಡಾ ಅನ್ಯಾಯವಾಗಿದೆ ಎಂದರು.
ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆಯುವರೇ ಕಳೆದ ಹಲವಾರು ದಿನಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದರೂ ಸಹ ವಿದ್ಯಾರ್ಥಿಗಳ ಕುರಿತು ಸ್ವಲ್ಪವೂ ಕರುಣೆಯಿಲ್ಲದ ಮುಖ್ಯ ಮಂತಿಗಳು ರಾಜ್ಯದ ಬಡ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬರೆ ಎಳೆದಿದ್ದಾರೆ. ಯುವಜನ ಕ್ರೀಡಾ ಇಲಾಖೆಯ ಕುರಿತು ಯಾವುದೇ ಪ್ರಸ್ತಾಪವನ್ನು ಮಾಡದ ಬಜೆಟ್ ಇದೊಂದು ಯುವಕರ ವಿರೋಧಿ, ಜನ ವಿರೋಧಿ ಬಜೆಟ್ ಎಂದೂ ಪ್ರತಿಕ್ರಿಯಿಸಿದ್ದಾರೆ.