• ಪರೀಕ್ಷೆ ಬರೆಯುವವರಲ್ಲಿ ವಿದ್ಯಾರ್ಥಿನೀಯರೆ ಹೆಚ್ಚು
• 9ಪರೀಕ್ಷಾ ಕೆಂದ್ರಗಳು, 189 ಸಿಬ್ಬಂಧಿಗಳು
ಭಟ್ಕಳ: 2017-18ರ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ದಿನಗಣನೆ ಆರಂಭಗೊಂಡಿದ್ದು ಭಟ್ಕಳ ತಾಲೂಕು ಸಂಪೂರ್ಣವಾಗಿ ಸಜ್ಜುಗೊಂಡಿದ್ದು ಮಾ.23 ರಿಂದ ಎ.6ರ ವರೆಗೆ ನಡೆಯಲಿವೆ ಎಂದು ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಸೋಮವಾರ ತಮ್ಮ ಕಾರ್ಯಾಲಯದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ 987 ಗಂಡು, 1088ಹೆಣ್ಣು ವಿದ್ಯಾರ್ಥಿಗಳು ಸೇರಿ ಒಟ್ಟು 2045 ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸಲಿದ್ದಾರೆ ಎಂದ ಅವರು, ನಗರದ ನ್ಯೂ ಇಂಗ್ಲಿಷ್ ಸ್ಕೂಲ್, ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ, ಅಂಜುಮನ್ ಬಾಲಕೀಯರ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಸೋನಾರಕೇರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನತಾ ವಿದ್ಯಾಲಯ ಶಿರಾಲಿ, ಜನತಾ ವಿದ್ಯಾಲಯ ಮುರುಡೇಶ್ವರ, ನ್ಯಾಶನಲ್ ಪ್ರೌಢಶಾಲೆ ಮುರುಡೇಶ್ವರ, ಬೀನಾ ವೈದ್ಯ ಶಾಲೆ ಬೈಲೂರು ಹಾಗೂ ಸರ್ಕಾರಿ ಪ್ರೌಢಶಾಲೆ ಬೆಳಕೆಯಲ್ಲಿ ಪರೀಕ್ಷಾ ಕೇಂದ್ರಗಳಿದ್ದು ಇಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಮಾಡಲಾಗಿದೆ. ಪ್ರತಿ ಕೇಂದ್ರದಲ್ಲಿ ಸಿಸಿ ಟಿವಿ ಕ್ಯಾಮರಾ ಗಳನ್ನು ಅಳವಡಿಸಲಾಗಿದ್ದು ಯಾವುದೇ ರೀತಿಯ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಕೇಂದ್ರಗಳು ತಾಲೂಕಿನಲ್ಲಿ ಇರುವುದಿಲ್ಲ ಎಂದರು.
ಪರೀಕ್ಷೆಗಳನ್ನು ಸುಗಮವಾಗಿ ನೆರವೇರಿಸಲು 153 ಕೊಠಡಿ ಮೇಲ್ವಿಚಾರಕರನ್ನು ನೇಮಿಸಿದ್ದು 9 ಮಂದಿ ಮುಖ್ಯ ಅಧೀಕ್ಷಕರು, 9ಮಂದಿ ಪ್ರಶ್ನೆ ಪತ್ರಿಕೆಪಾಲರು, 9 ಜನ ಸ್ಥಾನಿಕ ಜಾಗೃತದಳ ಹಾಗೂ 9 ಮಂದಿ ತಾಲೂಕು ಮಟ್ಟದ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪರೀಕ್ಷೆಗಾಗಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು ಶಾಲಾಮಟ್ಟದಲ್ಲಿ ವಿವಿಧ ರೀತಿಯ ವಿಶೇಷ ತರಗತಿಗಳನ್ನು ನಡೆಸಿದ್ದು ವಿಷಯ ಕ್ಲಬ್ ಗಳ ಮೂಲಕ ಶಿಕ್ಷಕರಿಗೆ ಪ್ರತಿ ತಿಂಗಳು ತರಬೇತಿಯನ್ನು ನೀಡಲಾಗಿದೆ. ಅಲ್ಲದೆ ಮುಖ್ಯಶಿಕ್ಷಕರ ಸಭೆಗಳನ್ನು ನಡೆಸಿ ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಹಲವು ಅಂಶಗಳ ಕಾರ್ಯಕ್ರಮಗಳನ್ನು ಶಾಲಾ ಹಂತದಲ್ಲಿ ರೂಪಿಸಲಾಗಿದೆ. ಈ ಬಾರಿ ಉತ್ತಮ ಫಲಿತಾಂಶ ಬರುವ ನೀರಿಕ್ಷೆಯನ್ನು ಇಟ್ಟುಕೊಳ್ಳಲಾಗಿದೆ ಎಂದ ಅವರು ಪರೀಕ್ಷೆಯ ದಿನದಂದು ವಿದ್ಯಾರ್ಥಿಗಳು ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರತಕ್ಕದ್ದು, ಯಾವುದೇ ರೀತಿಯ ಮುಬೈಲ್, ಕ್ಯಾಲುಕ್ಯುಲೇಟರ್ ಮತ್ತಿತರ ಉಪಕರಣಗಳನ್ನು ಪರೀಕ್ಷಾ ಕೇಂದ್ರದಲ್ಲಿ ತರವುದನ್ನು ನಿಷೇಧಿಸಲಾಗಿದ್ದು ಅವುಗಳಿಂದ ದೂರವಿರತಕ್ಕದ್ದು, ಅಲ್ಲದೆ ತಮ್ಮ ಹಾಲ್ ಟಿಕೇಟ್ ನ್ನು ತಪ್ಪದೆ ಪರೀಕ್ಷೆಗೆ ಹೋಗುವ ಪೂರ್ವದಲ್ಲಿ ತೆಗೆದುಕೊಂಡು ಹೋಗುವುದನ್ನು ಮರೆಯಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವಿಷಯ ಪರೀಕ್ಷಕ ಸುಭ್ರಮಣ್ಯ ಭಟ್ ಉಪಸ್ಥಿತರಿದ್ದರು.