ಭಟ್ಕಳ: ವಿಶೇಷ ಚೇತನ ಮಕ್ಕಳಿಗೆ ಒಂದು ಶಾಲೆಯನ್ನು ತೆರೆದು ಅವರಿಗೆ ಸೇವೆ ನೀಡುತ್ತಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯ ಮಾಲತಿ ಉದ್ಯಾವರ್ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಆರ್. ಎನ್. ಎಸ್. ವಿದ್ಯಾ ಸಂಸ್ಥೆಗಳ ನಿರ್ದೇಶಕ ಎಂ. ವಿ. ಹೆಗಡೆ ಅವರು ಹೇಳಿದರು.
ಅವರು ನಗರದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾ ಭವನದಲ್ಲಿ ದಿನಾ ಎಜ್ಯುಕೇಶನ್ ಟ್ರಸ್ಟ್ನ ಸ್ನೇಹಾ ವಿಷೇಶ ಶಾಲೆ ಹಾಗೂ ತರಬೇತಿ ಕೇಂದ್ರದ ವತಿಯಿಂದ ಎರ್ಪಡಿಸಲಾಗಿದ್ದ ವಿಶೇಷ ವಿಕಲಚೇತನ ಮಕ್ಕಳ ಜಾನಪದ ನೃತ್ಯ ಕಾರ್ಯಕ್ರಮ ಹಾಗೂ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರಿದ ಅವರು ಎಲ್ಲರಿಗೂ ಸೇವೆಯನ್ನು ನೀಡಲು ಸಾದ್ಯವಾಗುವುದಿಲ್ಲ ಅದಕ್ಕೆ ನಾವು ಅವರನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಪ್ರೇರಣೆ ನೀಡುವ ಕೇಲಸ ಆಗಬೇಕು. ಇಂದು ವಿಕಲಚೇತನ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಅವರಲ್ಲಿರುವ ಪ್ರತಿಭೆಯನ್ನು ಸಾದರಪಡಿಸುತ್ತಿದ್ದಾರೆ ಮುಂದಿನ ದಿನ ಅವರಿಗೆ ಜೀವನ ಹೇಗೆ ಎಂದು ತಿಳಿಸಿಕೊಡುವ ಕೆಲಸ ಈ ಕಾರ್ಯಕ್ರಮದಿಂದ ಸಾದ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ನಾಗಯಕ್ಷೇ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರನ್ನು ಸಾಮಾನ್ಯರಂತೆ ಮಾಡುವ ಕೆಲಸ ತುಂಬಾ ಪ್ರಶಂಸನಿಯವಾದುದು. ಪುರಸಭಾ ಜಾಗಾದಲ್ಲಿ ಇಂದು ಶಾಲೆ ನಡೆಯುತ್ತಿರುವುದರಿಂದ ಅವರಿಗೆ ಸ್ವಂತ ಕಟ್ಟಡ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುರಸಭೆಯ ವತಿಯಿಂದ ಅವರಿಗೆ ಸ್ಥಳದ ವ್ಯವಸ್ಥೆಯನ್ನು ಮಾಡಿ ಕೊಟ್ಟರೆ ಮೂರು ಲಕ್ಷ ರೂಪಾಯಿ ವೆಚ್ಚದ ಒಂದು ಕಟ್ಟಡವನ್ನು ಕಟ್ಟಿಸಿಕೊಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅಥಿತಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಟ ಭಟ್ಟ ಮಾತನಾಡಿ ನಾವು ಯಾರು ಬಯಸಿ ಬಂದವರಲ್ಲ ನಾವೆಲ್ಲ ದೇವರ ಕೊಡುಗೆ ಈ ಮಕ್ಕಳು ಕೂಡಾ ದೇವರ ಕೊಡುಗೆ, ಆ ದೇವರು ಮಕ್ಕಳನ್ನು ಇಂತಹ ತಂದೆ-ತಾಯಿಯವರು ಸಾಕಬೇಕು ಎಂದು ಕಳಿಸಿರುತ್ತಾನೆ. ಅವರನ್ನು ಸಾಕುವಂತಹ ಜವಬ್ದಾರಿ ಆ ತಂದೆ-ತಾಯಿಯವರದ್ದಾಗಿರುತ್ತದೆ. ಆ ಒಂದು ತಂದೆ-ತಾಯಿಯವರ ಜವಬ್ದಾರಿಯನ್ನ ಈ ಸ್ನೇಹ ಶಾಲೆಯ ಆರಂಭ ಮಾಡುವ ಮೂಲಕ ಮಾಲತಿ ಉದ್ಯಾವರ್ರವರು ವಹಿಸಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಶಾಲೆ ಪ್ರಾರಂಬವಾಗಿ 21 ವರ್ಷವಾಗಿದ್ದರೂ ಸಹ ಅನೇಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು ಕಷ್ಟಕರವಾಗಿದೆ. ಸರಕಾರದಿಂದ ಯಾವುದೇ ಸೌಲಭ್ಯ ಪಡೆಯಲೂ ಸಾಧ್ಯವಾಗದಿರುವುದು ವಿಪರ್ಯಾಸವಾಗಿದೆ. ನಾಗರಿಕರು ಹಾಗೂ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿದ್ದು ಇನ್ನು ಅನೇಕ ಅವಶ್ಯಕತೆ ಕೊರತೆಯಿದ್ದು ಎಲ್ಲರ ಸಹಕಾರ ಅಗತ್ಯ ಎಂದರು. ಜನಪ್ರತಿನಿಧಿಗಳು, ಅಧಿಕಾರಿಗಳು ಸರಕಾರದ ಸೌಲಭ್ಯಗಳನ್ನು ವದಗಿಸುವಲ್ಲಿ ಸಹಕರಿಸಬೇಕು ಎಂದು ಕೋರಿದರು.
ಇನ್ನೋರ್ವ ಮುಖ್ಯ ಅತಿಥಿ ಡಾ. ಸವಿತಾ ಕಾಮತ್ ಮಾತನಾಡಿ ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳುವುದು ಎಷ್ಟು ಕಷ್ಟ ಎನ್ನುವುದು ತಂದೆ ತಾಯಿಯರಿಗೆ ಗೊತ್ತು. ಅಂತಹ 42 ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಾ ಅವರಿಗೆ ವಿದ್ಯಾಭ್ಯಾಸ, ತರಬೇತಿಯನ್ನು ನೀಡುತ್ತಿರುವ ಮಾಲತಿ ಉದ್ಯಾವರ್ ಅವರ ಕಾರ್ಯಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಮುಖ್ಯ ಅತಿಥಿ ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ ಭಟ್ಟ ಅವರು ಮಾತನಾಡಿ ಪ್ರತಿಯೋರ್ವರೂ ಕೂಡಾ ತಾವು ಗಳಿಸಿದ್ದರಲ್ಲಿ ಸಮಾಜ ಸೇವೆಗೆ ಮೀಸಲಿಡಬೇಕು. ಅಂತಹ ಕಾರ್ಯವನ್ನು ಮಾಡಿದಾಗ ಮಾತ್ರ ಇಂತಹ ಶಾಲೆಗಳನ್ನು ನಡೆಸಲು ಸಾಧ್ಯವಾಗುವುದು. ಲಯನ್ಸ್ ಕ್ಲಬ್ ವತಿಯಿಂದ ಶಾಲೆಗೆ ಸಹಕರಿಸುತ್ತಾ ಬಂದಿದ್ದು ಮುಂದೆಯೂ ತಮ್ಮ ಸಹಕಾರ ಇದೆ ಎಂದರು.
ಕಾರ್ಯಕ್ರಮದಲ್ಲಿ ಹೋಟೆಲ್ ಉಧ್ಯಮಿ ಶಂಕರ ನಾಯ್ಕ, ಸಹಕಾರಿ ಧುರೀಣ ರತ್ನಾಕರ್ ಖಾರ್ವಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ನೇಹಾ ಶಾಲೆಗೆ ಸಹಾಯ ಮಾಡುತ್ತಾ ಬಂದಿದ್ದ ರಾಮದಾಸ ಪ್ರಭು, ಎಸ್. ಎಸ್. ಕಾಮತ್, ಎಂ. ವಿ. ಹೆಗಡೆ, ರಾಘವೇಂದ್ರ ಎಂ. ನಾಯ್ಕ, ನರೇಂದ್ರ ನಾಯಕ, ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಬಂದತಹ ವಿಕಲಚೇತನ ಮಕ್ಕಳ ಜಾನಪದ ನೃತ್ಯ ಹಾಗೂ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದಲ್ಲಿ ವೆಂಕಟೇಶ ಮೆಸ್ತ ಸ್ವಾಗತಿಸಿ, ವಂದಿಸಿದರು. ಕುಮಾರಿ ರೂಪ ನಿರೂಪಿಸಿದರು.