ಭಟ್ಕಳ: ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೬೧೬ ಅಂಕಗಳನ್ನು ಗಳಿಸಿದ್ದ ತಾಲೂಕಿನ ಶಿರಾಲಿ ಚಿತ್ರಾಪುರದ ಶ್ರೇಯಾಂಕ್ ಶ್ರೀಧರ ಶೇಟ್ ಮರುಮೌಲ್ಯಮಾಪನದಲ್ಲಿ ಸಮಾಜವಿಜ್ಞಾನ ವಿಷಯಕ್ಕೆ ೪ ಅಂಕಗಳನ್ನು ಹೆಚ್ಚಿಗೆ ಗಳಿಸುವುದರ ಮೂಲಕ ೬೨೫ ಅಂಕಗಳಿಗೆ ೬೨೦ (೯೯.೨%) ಅಂಕಗಳನ್ನು ಪಡೆದು ರಾಜ್ಯಕ್ಕೆ ೬ನೇ ರ್ಯಾಂಕ್, ತಾಲೂಕಿಗೆ ೨ನೇ ರ್ಯಾಂಕ್ ಮತ್ತು ಶಾಲೆಗೆ ಪ್ರಥಮ ಸ್ಥಾನ ಗಳಿಸಿರುತ್ತಾನೆ. ಇಂಗ್ಲೀಷ್ ಭಾಷೆಗೆ ೧೨೫ ಅಂಕಗಳಿಗೆ ೧೨೫, ಕನ್ನಡ ಭಾಷೆಗೆ ೧೦೦ ಅಂಕಗಳಿಗೆ ೧೦೦, ಹಿಂದಿ, ವಿಜ್ಞಾನ ಮತ್ತು ಸಮಾಜಕ್ಕೆ ೯೯ ಹಾಗೂ ಗಣಿತಕ್ಕೆ ೯೮ ಅಂಕಗಳನ್ನು ಗಳಿಸಿದ್ದಾನೆ.
ಪಠ್ಯೇತರ ವಿಷಯಗಳಲ್ಲೂ ಮುಂದಿರುವ ಈತನು ಈ ಹಿಂದೆ ‘ಭಾರತ್ ಕೊ ಜಾನೊ’ - ‘ಕ್ವಿಜ್’ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ, ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ಕರಾಟೆ ಚಾಂಪಿಯನ್ ಶಿಪ್ನಲ್ಲಿ ವಿಜೇತನಾಗಿರುವುದನ್ನು ಸ್ಮರಿಸಿಕೊಳ್ಳಬಹುದು.
ಭಟ್ಕಳದ ಪ್ರತಿಷ್ಠಿತ ಆನಂದಾಶ್ರಮ ಕಾನ್ವೆಂಟ್ ಹೈಸ್ಕೂಲ್ ವಿದ್ಯಾರ್ಥಿಯಾಗಿರುವ ಈತನು ಶಿರಾಲಿಯ ಶಿಕ್ಷಕ, ಸಾಹಿತಿ, ಕಲಾವಿದ, ವ್ಯಂಗ್ಯ ಚಿತ್ರಕಾರ ಮತ್ತು ಕಾರ್ಯಕ್ರಮ ನಿರೂಪಕ ಶ್ರೀಧರ ಗಣೇಶ ಶೇಟ್ ಮತ್ತು ಶಿಕ್ಷಕಿ ಹೇಮಲತಾ ದಂಪತಿಗಳ ಸುಪುತ್ರನಾಗಿದ್ದಾನೆ. ಈತನ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಯ ಮುಖ್ಯಾಧ್ಯಾಪಕಿ ಮತ್ತು ಶಿಕ್ಷಕ ವೃಂದದವರು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.