ಭಟ್ಕಳ: ರವಿವಾರದಂದು ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯ ನ್ಯೂ ಶಮ್ಸ್ ಶಾಲೆಯಲ್ಲಿ ದಡಾರ, ರುಬೆಲ್ಲಾ ಲಸಿಕಾ ಕಾರ್ಯಕ್ರಮಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದ ಪಾಲಕರು ಲಸಿಕೆ ನೀಡುವುದನ್ನು ಸ್ಥಗಿತಗೊಳಿಸುವಂತೆ ಮಾಡಿದ್ದರು. ಮಂಗಳವಾರ ಶಾಲಾ ಆಡಳಿತ ಮಂಡಳಿ, ತಾಲೂಕಾಡಳಿತ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಯ ಪಾಲಕರೊಂದಿಗೆ ಸಭೆ ನಡೆಸುವುದರ ಮೂಲಕ ಪಾಲಕರ ಮನವೊಲಿಕೆಗೆ ಯತ್ನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕ ದಂಡಾಧಿಕಾರಿ ಹಾಗೂ ತಹಸಿಲ್ದಾರ ವಿ.ಎನ್.ಬಾಡ್ಕರ್ ಆರೋಗ್ಯವಂತ ಭಾರತ ನಿರ್ಮಾಣಕ್ಕಾಗಿ ಸರ್ಕಾರ ಹಮ್ಮಿಕೊಂಡಿರುವ ಈ ಲಸಿಕಾ ಅಭಿಯಾನ ಕೆಲವು ತಪ್ಪು ಮಾಹಿತಿಯಿಂದಾಗಿ ಜನರಲ್ಲಿ ಅಪನಂಬಿಕೆಯನ್ನು ಹುಟ್ಟಿಸುತ್ತಿದೆ. ಲಸಿಕೆಯನ್ನು ನೀಡದೇ ಇರುವುದರಿಂದ ಕೇವಲ ಒಂದು ಮಗುವಿಗೆ ಮಾತ್ರ ಹಾನಿಯಾಗದು ಅದಿರಿಂದ ಇಡೀ ದೇಶಕ್ಕೆ ನಷ್ಟವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಡಾ.ಮುಹಮ್ಮದ್ ಹನೀಫ್ ಶಬಾಬ್, ದಡಾರ, ರುಬೆಲ್ಲಾ ಲಸಿಕೆ ಕುರಿತಂತೆ ಮುಸ್ಲಿಮ್ ಸಮುದಾಯದಲ್ಲಿ ಹಲವು ತಪ್ಪುಕಲ್ಪನೆಗಳು ಮನೆಮಾಡಿಕೊಂಡಿದ್ದು ಇದನ್ನು ಹೋಗಲಾಡಿಸಬೇಕಾಗಿದೆ. ಈ ಕುರಿತಂತೆ ವಾಟ್ಸಪ್ ಗಳಲ್ಲಿ ಹಲವು ವದಂತಿಗಳು ಹರಡಿಕೊಂಡಿದ್ದು ಇದರಿಂದಾಗಿಯೇ ಮುಸ್ಲಿಮರು ತಮ್ಮ ಮಕ್ಕಳಿಗೆ ಲಸಿಕೆ ನೀಡಲು ಹಿಂಜರಿಯುತ್ತಿದ್ದಾರೆ. ವಾಸ್ತವದಲ್ಲ ಲಸಿಕೆಯಿಂದಾಗಿ ಯಾವುದೇ ಹಾನಿ ಸಂಭವಿಸಿದು. ಮಕ್ಕಳು ತಮ್ಮ ಭವಿಷ್ಯವನ್ನು ಆರೋಗ್ಯಪೂರ್ಣವಾಗ ನಡೆಸುವಂತಾಗಲು ಈ ಲಸಿಕೆ ನೀಡಲಾಗುತ್ತದೆ. ಇದರಿಂದಾಗಿ ಯಾವುದೇ ಸಂತನಹರಣವಾಗಲಿ, ರೋಗಗಳಾಗಿ ಉದ್ಭವಿಸಲಾರವು. ಸರ್ಕಾರದ ಯೋಜನೆಗಳಿಂದ ಮುಸ್ಲಿಮರನ್ನು ದೂರವಿಡುವ ಕೆಲ ಪ್ರಯತ್ನಗಳು ನಡೆಯುತ್ತಿದ್ದು ಇದಕ್ಕೆಲ್ಲ ಕಿವಿಗೊಡಬಾರದು. ಲಸಿಕೆ ನೀಡದೆ ಇರುವುದು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುವುದು. ಯಾವುದೇ ಸರ್ಕಾರವಿರಲಿ ಒಂದು ಸಮುದಾಯವನ್ನು ಗುರಿಮಾಡಿಕೊಂಡು ಆ ಸಮುದಾಯಕ್ಕೆ ಹಾನಿಯುನ್ನುಂಟು ಮಾಡುವ ಕಾರ್ಯಕ್ಕೆ ಕೈಹಾಕುವದಿಲ್ಲ. ಎಂ.ಎಂ.ಆರ್. ಲಸಿಕೆಯಿಂದ ಯಾವುದೇ ಅಡ್ಡಪರಿಣಾಗಳು ಉಂಟಾಗಲು ಸಾಧ್ಯವಿಲ್ಲ. ನಾವು ಯಾವುದೇ ಮಾಮೂಲಿ ತಲೆ ನೋವಿನ ಮಾತ್ರೆ ತೆಗೆದುಕೊಂಡರೂ ಅದರಿಂದಲೂ ಸಾಕಷ್ಟು ಅಡ್ಡಪರಿಣಾಮಗಳು ಉಂಟಾಗಲು ಸಾಧ್ಯವಿದೆ. ಲಸಿಕೆಯಿಂದಾಗಿ ಯಾವುದೇ ದುಷ್ಟಪರಿಣಾಮ ಉಂಟಾಗದು. ಅಂತರಾಷ್ಟ್ರಿಯ ಪ್ರಯಾಣಕ್ಕೆ ಈ ಲಸಿಕೆ ಹಾಕುವುದು ಕಡ್ಡಾಯವಾಗಿದ್ದು ಇದನ್ನು ಎಲ್ಲರೂ ಯಾವುದೇ ರೀತಿಯ ಗಾಳಿಸುದ್ದಿಗಳಿಗೆ ಕಿವಿಗೊಡದೆ ತಮ್ಮ ಮಕ್ಕಳಿಗೆ ಲಸಿಕೆಯನ್ನು ನೀಡಿ ಮಕ್ಕಳ ಭವಿಷ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿ.ಟಿ.ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಮೂರ್ತಿರಾಜ್ ಭಟ್, ಹಿರಿಯ ಆರೋಗ್ಯ ಸಹಾಯಕ ಎಂ.ಈರಯ್ಯ ದೇವಾಡಿಗ, ಮಾತನಾಡಿದರು.
ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್ ಪ್ರಸ್ತಾವಿಕವಾಗಿ ಮಾತನಾಡಿ ಲಸಿಕೆ ನೀಡುವ ಮುಂದಿನ ದಿನಾಂಕವನ್ನು ಪಾಲಕರಿಗೆ ತಿಳಿಸುವುದಾಗಿ ಹೇಳಿದರು. ಶಾಲಾ ಮುಖ್ಯಾಧ್ಯಪಕ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಧನ್ಯವಾದ ಅರ್ಪಿಸಿದರು.