ಭಟ್ಕಳ: ಭಟ್ಕಳಿಗರಲ್ಲಿ ಅಗಾಧ ಪ್ರತಿಭೆಗಳಿದ್ದು ಪ್ರತಿಯೊಂದು ವಿಷಯದಲ್ಲಿಯೂ ಇಲ್ಲಿನ ವಿದ್ಯಾರ್ಥಿಗಳು ಮುಂದಿದ್ದು ಕೊಲ್ಲಿ ರಾಷ್ಟ್ರಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅಲ್ಲಿನ ಶಾಲಾ ಕಾಲೇಜುಗಳಲ್ಲಿ ಹೆಸರು ಮಾಡಿದ್ದಾರೆ ಎಂದು ಅನಿವಾಸಿ ಭಾರತೀಯ ವೇದಿಕೆಯಾಗಿರುವ ರಾಬಿತಾ ಸೂಸೈಟಿಯ ಮಾಜಿ ಅಧ್ಯಕ್ಷ ಯೂನೂಸ್ ಕಾಝಿಯಾ ಹೇಳಿದರು.
ಅವರು ಜಾಮಿಯಾಬಾದ್ ಸೈಯ್ಯದ್ ಅಲಿ ಕ್ಯಾಂಪಸ್ ನ ನ್ಯೂ ಶಮ್ಸ್ ಸ್ಕೂಲ್ ಮೊಂಟೆಸ್ಸರಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭದಲ್ಲಿ ಪದವಿ ಪ್ರದಾನಿಸಿ ಮಾತನಾಡುತ್ತಿದ್ದರು.
ನಮ್ಮ ವಿದ್ಯಾರ್ಥಿಗಳ ಪ್ರತಿಭೆಗಳಿಗೇನು ಕೊರತೆಯಿಲ್ಲ. ಮಕ್ಕಳನ್ನು ಪಾಲಕರು, ಶಾಲಾ ಪರಿಸರ ಯಾವ ರೀತಿ ಬೆಳೆಸುತ್ತೋ ಅದೇ ರೀತಿ ಬೆಳೆಯುತ್ತಾರೆ. ಭಟ್ಕಳದ ಪರಿಸರದಲ್ಲಿ ಮಹಿಳೆಯೇ ತಾಯಿ ತಂದೆಯ ಪಾತ್ರ ನಿರ್ವಹಿಸುತ್ತಾಳೆ. ತಾಯಿ ತನ್ನ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ನೋಡಬೇಕೆಂದು ಹಂಬಲಿಸಿ ಉತ್ತಮ ಶಾಲೆಗಳನ್ನು ಹುಡುಕಾಡುತ್ತಾರೆ. ಮನೆಯಲ್ಲಿ ನಾವು ಯಾವ ರೀತಿಯ ತರಬೇತಿಯನ್ನು ನೀಡುತ್ತವೇಯೋ ಅದೇ ಪ್ರಮಾಣದಲ್ಲಿ ಮಕ್ಕಳ ಅಭಿವೃದ್ಧಿಯಾಗುತ್ತದೆ. ಮೊದಲು ಮನೆಯ ಪರಿಸ್ಥಿತಿಯನ್ನು ಉತ್ತಮಪಡಿಸಕೊಳ್ಳಬೇಕು ಎಂದ ಅವರು ಭಟ್ಕಳದಲ್ಲಿ ಪ್ರಪ್ರಥಮವಾಗಿ ಅಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದೇ ಶಮ್ಸ್ ನರ್ಸರಿ ಎಂಬ ಹೆಸರಿನಲ್ಲಿ. ಭಟ್ಕಳದಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಗಳ ಜನಕ ಎಂದರೂ ತಪ್ಪಾಗದು ಎಂದು ಹೇಳಿದರು. ಮನೆಯಲ್ಲಿ ತಂದೆ ತಾಯಿ ಏನೆ ಹೇಳಿದರು ಮಗು ಕೇಳುವದಿಲ್ಲ. ಆದರೆ ಶಾಲೆಯಲ್ಲಿ ಶಿಕ್ಷಕಿಯರು ಹೇಳಿದ್ದೇ ಅವರಿಗೆ ವೇದವಾಕ್ಯವಾಗುತ್ತದೆ. ಆದ್ದರಿಂದ ಮಕ್ಕಳ ಉತ್ತಮ ತರಬೇತಿಯನ್ನು ನೀಡುವ ಹೊಣೆ ಶಿಕ್ಷಕಿಯರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್, ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಪ್ರೌಢಶಾಲಾ ಮುಖ್ಯಾಧ್ಯಾಪಕ ಮುಹಮ್ಮದ್ ರಝಾ ಮಾನ್ವಿ, ಪ್ರಾಂಶುಪಾಲೆ ಫಹಮಿದಾ ಡಾಟಾ ಉಪಸ್ಥಿತರಿದ್ದು ವಿದ್ಯಾರ್ಥಿಗಳು ಪದವಿ ಪ್ರದಾನ ಮಾಡಿದರು. ಕಾರ್ಯಕ್ರಮ ನಿರೂಪಣೆ, ವಂದನಾರ್ಪಣೆ ಸ್ವಾಗತ ಸೇರಿದಂತೆ ಯು.ಕೆ.ಜಿ. ವಿದ್ಯಾರ್ಥಿಗಳೇ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.