ಸೀತಾಲಕ್ಷ್ಮೀ ಕರ್ಕಿಕೋಡಿಗೆ ಪಿಹೆಚ್ಡಿ ಪದವಿ
• ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧ
ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಸೀತಾಲಕ್ಷ್ಮೀ ಕರ್ಕಿಕೋಡಿ ನಡೆಸಿದ ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬಯಿ ವಿವಿ ಪಿಹೆಚ್ಡಿ ಪದವಿ ಪ್ರದಾನಿಸಿ ಗೌರವಿಸಿದೆ.
ಖ್ಯಾತ ವಿದ್ವಾಂಸ, ಸಂಶೋಧಕ, ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಸೀತಾಲಕ್ಷ್ಮೀ ಕರ್ಕಿಕೋಡಿ ಪ್ರಬಂಧವನ್ನು ಮಂಡಿಸಿದ್ದರು.
ಇದು ಸೀತಾಲಕ್ಷ್ಮೀ ಅವರಿಗೆ ಸಂದ ಎರಡನೇ ಡಾಕ್ಟರೇಟ ಪದವಿಯಾಗಿದೆ. ಈ ಹಿಂದೆ 2004ರಲ್ಲಿ ಮಾಸ್ತಿ ಅವರ ಕಥೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣದ ಬಗ್ಗೆ ಹೆಸರಾಂತ ಸಂಶೋಧಕ ಡಾ.ಮೋಹನ ಕುಂಟಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಹಂಪಿ ವಿಶ್ವ ವಿದ್ಯಾಲಯಕ್ಕೆ ಮಹಾ ಪ್ರಬಂಧ ಸಲ್ಲಿಸಿ ಪಿಹೆಚ್ಡಿ ಪದವಿ ಪಡೆದಿದ್ದರು. ರಂಗಕರ್ಮಿ ಸದಾನಂದ ಸುವರ್ಣರ ಸಾಧನೆ ಹಿನ್ನೆಲೆಯಲ್ಲಿ ಡಾ. ಜಿ.ಎನ್.ಉಪಾಧ್ಯರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಮುಂಬಯಿ ವಿವಿಯಿಂದ ಎಂಫಿಲ ಪದವಿ ಗಳಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಹಿರಿಯ ಉಪ ಸಂಪಾದಕಿಯಾಗಿರುವ ಸೀತಾಲಕ್ಷ್ಮೀ ನಿರಂತರವಾದ ಓದು , ಬರೆಹ, ಸಂಪಾದನೆ, ಸಾಂಘಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಪರಾಮರ್ಶೆ, ಮುಕ್ತಮಾತು, ಆ ಕ್ಷಣದಲ್ಲಿ , ರಂಗಕರ್ಮಿ ಸದಾನಂದ ಸುವರ್ಣ , ಸುವರ್ಣ ಸಂಪದ, ಕರ್ನಾಟಕ ನಾಟಕ ಅಕಾಡೆಮಿ ಪ್ರಕಟಿಸಿದ ರಂಗಚೇತನ ಸದಾನಂದ ಸುವರ್ಣ, ಕಮಲಾದೇವಿ ಚಟ್ಟೋಪಾಧ್ಯಾಯ, ವಿ.ಬಿ.ಅರ್ತಿಕಜೆ...ಮುಂತಾದ ಹತ್ತಾರು ಕೃತಿಗಳನ್ನು ರಚಿಸಿರುವ ಅವರು ಒಳ್ಳೆಯ ವಿಮರ್ಶಕಿ. ನಿಷ್ಠೆ ಹಾಗೂ ಶ್ರದ್ಧೆಯಿಂದ ಸಂಶೋಧನೆ ನಡೆಸುತ್ತ ಬಂದಿದ್ದಾರೆ.
ಪತ್ರಿಕೋದ್ಯಮದ ಸೇವೆಗೆ ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ, ಸಾಹಿತ್ಯಕ ಕೆಲಸಗಳಿಗೆ ಜೆಡಿಎನï ಪ್ರಶಸ್ತಿ ಪಡೆದಿದ್ದಾರೆ.
ಪತ್ರಿಕೋದ್ಯಮ ಸ್ನಾತಕೋತ್ತರದಲ್ಲೂ ರ್ಯಾಂಕ್ ಸಂಪಾದಿಸಿದ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಅವರು ಹೊನ್ನಾವರ ತಾಲೂಕಿನ ಹಿರಿಯ ಸಾಹಿತಿ ವಿ.ಗ.ನಾಯಕ ಹಾಗೂ ಶ್ಯಾಮಲಾ ಕರ್ಕಿಕೋಡಿ ದಂಪತಿಯ ಪುತ್ರಿಯಾಗಿದ್ದಾರೆ.