ಭಟ್ಕಳ:ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ನಾಯ್ಕರನ್ನು ಸೋಲಿಸುವುದರ ಮೂಲಕ ಸಂಸದ ನಾಮಧಾರಿ ಸಮಾಜವನ್ನು ರಾಜಕೀಯವಾಗಿ ತುಳಿಯಲು ನೋಡುತ್ತಿದ್ದಾರೆ ಗೋವಿಂದ ನಾಯ್ಕರಿಗೆ ಮತಹಾಕಬೇಡಿ ಎಂದು ತಮ್ಮ ಚೇಲಾಗಳಿಗೆ ಕರೆ ನೀಡಿದ್ದ ಅನಂತರದ್ದು ದೇಶಭಕ್ತಿಯಲ್ಲ ದ್ವೇಷಭಕ್ತಿಯಾಗಿದೆ ಎಂದು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾಲಾವಧಿ ಶಾಸಕರಾಗಿದ್ದ ಮಾಜಿ ಸಚಿವ ಆರ್.ಎನ್. ನಾಯ್ಕ ಕೇಂದ್ರ ಮಂತ್ರಿ ಅನಂತ್ ಕುಮಾರ್ ಹೆಗಡೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅವರು ಬುಧವಾರ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡುತ್ತ ಸಂಸದ ಅನಂತ್ ಕುಮಾರ್ ಹೆಗಡೆಯನ್ನು ಕಟುವಾಗಿ ಟೀಕಿಸಿದರು.
ಮಂತ್ರಿಯಾಗಿ ತಮ್ಮನ್ನು ತಿದ್ದುಕೊಳ್ಳುತ್ತಾರೆಂಬ ಜನರ ಊಹೆ ಸುಳ್ಳಾಗಿದ್ದು ತನಗೆ ತೋಚಿದಂತೆ ನಾಲಗೆಯನ್ನು ಹರಿಬಿಡುವ ಈತ ಪುಜಾರಿಯ ಪುಂಗಿ ಬಂದ್ ಮಾಡಿಸುತ್ತಾನಂತೆ. ಅಲ್ಲದೆ ರಾಜ್ಯದ ಮುಖ್ಯಮಂತ್ರಿಯನ್ನೂ ತೆಗಳುವ ಇವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿಯೂ ಬ್ರಾಹ್ಮಣರ ಕನಿಷ್ಠ ಸಂಸ್ಕಾರವನ್ನು ಬೆಳೆಸಿಕೊಂಡಿಲ್ಲ ಎಂದ ಅವರು ಸಭೆಗಳಲ್ಲಿ ಜನರ ಹಿಂಡು ಕಂಡು ಬ್ಯಾಲೆನ್ಸ್ ಕಳೆದುಕೊಂಡು ಮಾತನಾಡುತ್ತಾರೆ ಇಂತಹ ವ್ಯಕ್ತಿಯನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಳ್ಳುವುದು ಯಡಿಯೂರಪ್ಪನವರಿಗೆ ಶೋಭೆ ತರುವುದಿಲ್ಲ ಎಂದ ಅವರು, ತಮಗೆ ಹಿಂದುತ್ವ ಬೇಡ ಬಂಧುತ್ವ ಬೇಕು ಚುನಾವಣೆ ಹತ್ತಿರ ಬಂದಾಗ ಮಾತ್ರ ನೆನಪಾಗುವ ಇವರ ಹಿಂದುತ್ವ ನಾಮಧಾರಿಗಳ ವಿರುದ್ಧ ಇತರೇ ಹಿಂದು ಸಮಾಜವನ್ನು ಎತ್ತಿಕಟ್ಟುವುದರ ಮೂಲಕ ಹಿಂದೂ ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಆರೋಪಿಸಿದರು. ನಮಗಿನ್ನು ಬುದ್ದಿ ಬಂದಿಲ್ಲ, ಓರ್ವ ಶೂದ್ರ ವರ್ಗದವನಾಗಿ ಜಾತಿ ಹೆಸರಲ್ಲಿ ಬೇರೆಯಾಗುವುದಕ್ಕೆ ನನಗೆ ನೋವಾಗುತ್ತೆ. ಕೇಂದ್ರದ ಮಂತ್ರಿಯಾಗಿರುವ ಅನಂತ್ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ದೇಶಭಕ್ತಿಯ ಹೆಸರಲ್ಲಿ ದ್ವೇಷವನ್ನು ಹುಟ್ಟಿಸು ಕೆಲಸ ಮಾಡುತ್ತಿದ್ದಾರೆ. ಡಾ.ಚಿತ್ತರಂಜನ್ ಸಾವಿನಿಂದಾಗಿ ಅನಂತ್ ಕುಮಾರ್ ಹಾಗೂ ಬಿಜೆಪಿಗೆ ಲಾಭವಾಗಿದೆ ಆದರೆ ನಮ್ಮ ಸಮಾಜಕ್ಕೆ ಇದರಿಂದ ಯಾರಿಗೂ ಲಾಭವಾಗಿಲ್ಲ. ಈಗಲೂ ಅವರ ಶವದ ಮೇಲೆ ರಾಜಕೀಯ ಮಾಡುತ್ತಿರುವ ಮಾಡುತ್ತಿರುವ ಇವರು ಚಿತ್ತರಂಜನ್ ರವರ ಕುರಿತು ಅಷ್ಟೊಂದು ಕಳಕಳಿ ಇದ್ದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ ಪ್ರಮಾಣಿಕವಾಗಿ ತನಿಖೆ ಮಾಡಿ ಹಂತಕರನ್ನು ಪತ್ತೆಮಾಡಲಿ ಇದನ್ನು ಬಿಟ್ಟು ಚುನಾವಣೆ ಹತ್ತಿರ ಬಂದಾಗ ಚಿತ್ತರಂಜನ್ ರ ಹೆಸರನ್ನು ಜಪಿಸುವುದು ಸರಿಯಲ್ಲ ಎಂದರು.