ಭಟ್ಕಳ: ಮೂಢಭಟ್ಕಳದ ಡಾ. ಚಿತ್ತರಂಜನ್ ಸರ್ಕಲ್ ನಿಂದ ಮುಟ್ಟಳ್ಳಿಯಾಗಿ ರೈಲ್ವೇ ನಿಲ್ಧಾಣಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ಮಳೆಗಾಲದ ಆರಂಭದಿಂದಲೂ ಕೆಸರುಗದ್ದೆಯಾಗಿ ಮಾರ್ಪಾಡಾಗಿದ್ದು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ಕೊಂಕಣ ರೈಲ್ವೇ ನಿಗಮದ ಹೆಚ್ಚಿನ ಎಲ್ಲಾ ರೈಲುಗಳಿಗೂ ಕೂಡಾ ನಿಲುಗಡೆಯಿದ್ದು ಭಟ್ಕಳದಿಂದ ಪ್ರಯಾಣಿಸುವವರ ಸಂಖ್ಯೆ ಕೂಡಾ ಸಾಕಷ್ಟು ಇದೆ. ಕಳೆದ ಹಲವಾರು ವರ್ಷಗಳಿಂದ ಡಾ. ಚಿತ್ತರಂಜನ್ ಸರ್ಕಲ್ ಮೂಲಕವಾಗಿ ಮೂಢಭಟ್ಕಳ, ಮುಟ್ಟಳ್ಳಿಯಿಂದ ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆಯು ಮುಟ್ಟಳ್ಳಿ ಗ್ರಾಮ ಪಂಚಾಯತ್ದಿಂದ ಮುಂದೆ ಸಂಪೂರ್ಣ ಹಾಳಾಗಿದ್ದು ತುರ್ತು ರಿಪೇರಿಯನ್ನು ಸಹ ಕಾಣದೇ ಇರುವುದರಿಂದ ಕೆಸರು ಗದ್ದೆಯಂತಾಗಿದ್ದು ದ್ವಿಚಕ್ರ ವಾಹನ ಸವಾರಿಗರು ಪ್ರಯಾಣಿಸುವುದೇ ದುಸ್ತರವಾಗಿ ಪರಿಣಮಿಸಿದೆ. ರಸ್ತೆ ಮಧ್ಯದಲ್ಲಿಯೇ ದೊಡ್ಡ ದೊಡ್ಡ ಹೊಂಡಗಳಿದ್ದು ಮಳೆಗಾಲವಾದ್ದರಿಂದ ಕೆಂಪು ನೀರು ನಿಂತುಕೊಂಡಿರುವುದರಿಂದ ಆಳ ತಿಳಿಯದೇ ದ್ವಿಚಕ್ರ ವಾಹನ ಸವಾರರು ಬೀಳುವ ಪ್ರಸಂಗ ಕೂಡಾ ಎದುರಾಗಿದ್ದು ಹಲವರು ಬಿದ್ದಿರುವ ಘಟನೆ ಕೂಡಾ ನಡೆದಿದೆ.
ರೈಲ್ವೇ ನಿಲ್ದಾಣ ಎಂದ ಮೇಲೆ ದಿನದ 24 ಗಂಟೆಯೂ ಇಲ್ಲಿ ವಾಹನಗಳ ಓಡಾಟ, ರೈಲುಗಳ ಆಗಮನ ನಿರ್ಗಮನ ಇದ್ದೇ ಇರುತ್ತದೆ. ಇಲ್ಲಿ ಯಾವುದೇ ಸಮಯದ ಮಿತಿಯಿಲ್ಲದೇ ವಾಹನಗಳು ಹೋಗುವುದು ಬರುವುದು ಮಾಡಲೇಬೇಕಾಗುತ್ತದೆ. ಇಂತಹ ಪ್ರಮುಖ ರಸ್ತೆಯೇ ಇಂದು ಕೆಸರುಗದ್ದೆಯಾಗಿದ್ದು ಹೊಂಡಗಳಿಂದ ತುಂಬಿದ್ದು ಹಗಲಿನಲ್ಲಿಯೇ ವಾಹನ ಸವಾರರು ಸರ್ಕಸ್ ಮಾಡಬೇಕಾಗಿ ಬರುವುದಾದರೆ ಇನ್ನು ರಾತ್ರಿ ಹೊತ್ತು ಹೋಗುವವರ ಪರಿಸ್ಥಿತಿ ಎನಾಗಬೇಡ ಎನ್ನುವುದನ್ನು ಯೋಚಿಸುವುದೂ ಕಷ್ಟಕರವಾಗಿದೆ.
ಮುಟ್ಟಳ್ಳಿ ಗ್ರಾಮ ಪಂಚಾಯತ್ದಿಂದ ರೈಲ್ವೇ ನಿಲ್ದಾಣದ ತನಕ ಸುಮಾರು ಅರ್ಧ ಕಿ.ಮಿ. ವ್ಯಾಪ್ತಿಯ ರಸ್ತೆಯು ಸಂಪೂರ್ಣ ಹಾಳಾಗಿದ್ದು ಅಧಿಕಾರಿಗಳು ತಕ್ಷಣ ಇತ್ತಕಡೆ ಗಮನ ಹರಿಸಿ ರಸ್ತೆ ರಿಪೇರಿಗೆ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ನಾಗರೀಕರ ಆಗ್ರಹವಾಗಿದೆ.
* ರೈಲ್ವೇ ನಿಲ್ದಾಣದ ರಸ್ತೆಯು ಸಂಪೂರ್ಣ ಹೊಂಡ ಬಿದ್ದು ಹಾಳಾಗಿದ್ದರೂ ಕೂಡಾ ಇದರ ಮರು ಡಾಂಬರೀಕರಣಕ್ಕಾಗಲೀ, ರಸ್ತೆಯನ್ನು ಎತ್ತರಿಸಿ ರಿಪೇರಿ ಮಾಡಲಿಕ್ಕಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ನಾಗರೀಕರು ದಿನಾಲೂ ತೊಂದರೆ ಅನುಭವಿಸುತ್ತಿದ್ದು ತಕ್ಷಣ ರಸ್ತೆ ರಿಪೇರಿಗೆ ಕ್ರಮ ಕೈಗೊಳ್ಳಬೇಕಾಗಿದ.
ಶಂಕರ ಶೆಟ್ಟಿ, ಸಮಾಜ ಸೇವಕರು, ಭಟ್ಕಳ.