· ಎಂ.ಆರ್.ಮಾನ್ವಿ
ಕಡಲತಡಿಯ ಪ್ರಾಕೃತಿಕ ಸೌಂದರ್ಯವನ್ನು ತನ್ನೊಡಲಿನಲ್ಲಿ ಹುದುಗಿಕಿಸಿಕೊಂಡಿರುವ ಭಟ್ಕಳವೆಂಬ ಪುಟ್ಟ ನಗರ ಪದೇ ಪದೇ ಸುದ್ದಿಯಲ್ಲಿರುತ್ತದೆ. ಈ ಬಾರಿ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವನ್ನು ಒದಗಿಸಿಕೊಟ್ಟಿದೆ.
ಕಳೆದ ಒಂಬತ್ತು ತಿಂಗಳಿಂದ ತನ್ನವರನ್ನು ಅಗಲಿ ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಕೋಮಾಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅಬೂಬಕರ್ ಮಾಕಡೆ ಆಸ್ಪತ್ರೆಯ ಒಂದು ಕೋಟಿ ರೂ ಬಿಲ್ಲನ್ನು ಭರಿಸದೆ ಇತ್ತ ಕುಟುಂಬದವರು ಅಬುಬಕರ್ ಬದುಕುವ ಆಸೆಯನ್ನೇ ತೊರೆದ ಸಂದರ್ಭದಲ್ಲಿ ಭಟ್ಕಳದ ನವಯಾತ್ ಸಮುದಾಯ ತನ್ನೆಲ್ಲ ಪ್ರಯತ್ನಗಳನ್ನು ಮಾಡಿ ಸುರಕ್ಷಿತವಾಗಿ ಸ್ವದೇಶಕ್ಕೆ ಬರುವಂತೆ ಮಾಡಿದ್ದಾರೆ. ಘಟನೆಯ ಗಂಭೀರತೆಯನ್ನು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದೆ ಇದ್ದುದ್ದರಿಂದಾಗಿ, ಒಂದು ಸರ್ಕಾರ ಮಾಡುದ ಕಾರ್ಯವನ್ನು ಕೇವಲ ಕೆಲವೇ ಬೆರಳೆಣಿಕೆಯ ಮಂದಿ ಸಾಧಿಸಿ ತೋರಿಸಿದ್ದು ಭಟ್ಕಳದ ನವಾಯತ ರ ಮಾನವಿಯ ಮುಖ ಜಗತ್ತಿಗೆ ಪರಿಚಯಿಸಿದಂತಾಗಿದೆ. ಈ ವಿಷಯ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಬೇಕಿತ್ತು. ದಿನ ಪೂರ್ತಿ ಬ್ರೇಕಿಂಗ್ ನ್ಯೂಸ್ ನೀಡುವ ನಮ್ಮ ಭಾರತೀಯ ವಿದ್ಯುನ್ಮಾನ ಮಾಧ್ಯಮಗಳಿಗಂತೋ ಕನಿಷ್ಠಪಕ್ಷ ಇದರ ಅರಿವು ಇರಬೇಕಾಗಿತ್ತು. ಆದರೆ ಹಾಗಾಗಲೆ ಇಲ್ಲ. ಅಥವಾ ಗೊತ್ತಿದ್ದೂ ಜಾಣ ಮೌನಕ್ಕೆ ಜಾರಿಕೊಂಡಿರಲೂಬಹುದು.
ಹವಾಲ, ಭಯೋತ್ಪಾದನೆ, ಕಳ್ಳಸಾಗಾಟ, ಗೋಲ್ಡ್ ಸ್ಮಗ್ಲಿಂಗ್, ಕೋಮುಗಲಭೆ ಈ ಎಲ್ಲ ಪದಗಳು ಭಟ್ಕಳ ಎಂಬ ಪದಕ್ಕೆ ಪರ್ಯಾಯವಾಗಿ ಮಾಧ್ಯಮಗಳಿಗೆ ಆಹಾರ ಒದಗಿಸುತ್ತಿದ್ದು ಇದಕ್ಕೂ ಆಚೆ ಇರುವ ಇಲ್ಲಿನ ಮಾನವೀಯತೆಗಾಗಿ ಮಿಡಿಯುವ ಹೃದಯಗಳು, ಸಮಾಜಿಕ ಕಳಕಳಿಯ ರೂಪಕಗಳು, ಮಾನವ ಅಂತಃಕರಣದ ಘಟನೆಗಳು ಯಾವತ್ತೂ ಮಾಧ್ಯಮಗಳ ದೃಷ್ಟಿಯಿಂದ ದೂರನೇ ಉಳಿದಿವೆ.
ದುಬೈ, ಸೌದಿ ಮತ್ತಿತ್ತರ ಗಲ್ಫ್ ರಾಷ್ಟ್ರಗಳೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿದ್ದುಕೊಂಡು ತಮ್ಮ ತಾಯ್ನಾಡಿನಲ್ಲಿರುವ ಕುಟುಂಬದವರ ಏಳಿಗಾಗಿ ದುಡಿಯುತ್ತಿರುವ ಭಟ್ಕಳದ ‘ನವಾಯತಿ’ ಸಮುದಾಯ ಜಾಗತಿಕವಾಗಿ ಹೆಸರು ಮಾಡಿದೆ. ಗಲ್ಫ್ ನಲ್ಲೇ ಇದ್ದುಕೊಂಡು ತಾಯಿನಾಡು, ತಾಯಿನೆಲಕ್ಕಾಗಿ ಮರುಗುವ ಇವರ ಹೃದಯ ತಮ್ಮಿಂದ ತಮ್ಮ ದೇಶಕ್ಕಾಗಿ ಏನಾದರೂ ಮಾಡಬೇಕು ಎನ್ನುವುದೇ ಆಗಿದೆ.
ಮುಂಬೈನ ಕರಿನೆರಳಲ್ಲಿ ಬದುಕಿದ ಇಲ್ಲಿನ ಕೆಲ ಅವಿವೇಕಿಗಳ ಮೂರ್ಖತನದಿಂದಾಗಿ ಭಟ್ಕಳಕ್ಕೆ ಕಳಂಕ ತಟ್ಟಿದೆ ಎನ್ನುವ ಮಾತಿನಲ್ಲಿ ಸತ್ಯಾಂಶವೆಷ್ಟೋ ತಿಳಿಯದು. ಆದರೆ ಭಟ್ಕಳಕ್ಕಂತೋ ಮುಂಬೈಯ ಕರಿನೆರಳ ಛಾಯೆ ಹಲವು ಅನುಮಾನಗಳಿಗೆ ಜನ್ಮ ನೀಡಿತು. ಇದರ ಫಲವೇ ಇಂದು ಭಟ್ಕಳ ಎಂದರೆ ಭಯೋತ್ಪಾದನೆ ಎಂದು ಹೇಳುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಇದರಲ್ಲಿ ರಾಜಕೀಯ ಹಿತಾಸಕ್ತಿಯೂ ಕೆಲಸ ಮಾಡುತ್ತಿದೆ ಎಂದು ನಿಸ್ಸಂಕೋಚವಾಗಿ ಹೇಳಲೆಬೇಕು. ಈಗ ಅದೊಂದು ಇತಿಹಾಸ ಮಾತ್ರ. ಇದನ್ನೆ ಮುಂದಿಟ್ಟುಕೊಂಡು ಕೆಲವರು ರಾಜಕೀಯ ಲಾಭಗಳಿಸಿದ್ದು, ಪ್ರತಿ ಚುನಾವಣೆಯ ಪೂರ್ವ ಭಟ್ಕಳಕ್ಕೆ ಅದರ ಕರಾಳ ದಿನವನ್ನು ಸ್ಮರಿಸಿಕೊಳ್ಳುತ್ತ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥಿಗಳನ್ನು ಬಿಟ್ಟರೆ ಮಿಕ್ಕಿದ್ದೆಲ್ಲ ಇಲ್ಲಿನ ಹಿಂದೂ,ಮುಸ್ಲಿಮ್ ಕೃಸ್ತರು ಅನೋನ್ಯವಾಗಿಯೆ ಬಾಳುತ್ತಿದ್ದಾರೆ.
ಹಿಂದೆ ಇಲ್ಲಿನ ಹಿಂದೂಗಳಿಗೆ ಆರ್ಥಿಕವಾಗಿ ನೆರವು ನೀಡಿದ ನವಾಯತರು ತಮ್ಮ ಮನೆಯ ಒಡವೆ, ಆಭರಣಗಳನ್ನು ಬಡ ಹಿಂದೂಗಳ ಮದುವೆ ಮತ್ತಿತರ ಕಾರ್ಯಗಳಿಗೆ ನೀಡಿ ನೆರವಾಗುತ್ತಿದ್ದರು ಎಂದು ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ಇದಕ್ಕೂ ಮಿಗಿಲಾಗಿ ಜನರ ಹೃದಯ ಮಾನವೀಯತೆಗಾಗಿ ಸಾದಾ ಮಿಡಿಯುತ್ತಿದ್ದು ಎಲ್ಲಾದರೂ ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ ಅದಕ್ಕೆ ತಕ್ಷಣಕ್ಕೆ ಸ್ಪಂಧಿಸುತ್ತ ಸಂತೃಸ್ತರು ಯಾವ ಧರ್ಮದವರು ಎಂದು ನೋಡದೆ ಧಾವಿಸಿ ಬಂದು ಕೈಲಾದಷ್ಟು ಸಹಾಯ ಮಾಡುತ್ತಾರೆ. ರಾಜ್ಯ, ದೇಶದ ಗಡಿಯನ್ನು ದಾಟಿ ಇವರ ಸಮಾಜ ಸೇವಾ ಕಾರ್ಯ ಮುಂದುವರೆದಿದೆ. ತಮ್ಮ ಸ್ವಂತಕ್ಕೆ ಇದೆಯೂ ಇಲ್ಲವೋ ಎಂದು ನೋಡದೆ ಬೇರೆಯವ ಕಂಬನಿಗಾಗಿ ಮಿಡಿಯುವ ಈ ಮಂದಿ ನಿಜಕ್ಕೂ ನಿಸ್ವಾರ್ಥಿಗಳು.
ಕಳೆದ ಒಂಬತ್ತು ತಿಂಗಳಿಂದ ಸೌದಿಯ ಆಸ್ಪತ್ರೆಯಲ್ಲಿ ಬಿಲ್ಲನ್ನು ಭರಿಸಿದರೆ ಕೋಮಾ ಸ್ಥಿತಿಯಲ್ಲಿದ್ದ ಓರ್ವ ವ್ಯಕ್ತಿಯನ್ನು ಅಲ್ಲಿನ ಆಸ್ಪತ್ರೆಯೊಂದಿಗೆ ಮಾತನಾಡಿ ಶುಕ್ರವಾರವೇ ಬೆಂಗಳೂರಿಗೆ ಕರೆ ತಂದು ಆತನ ಸೂಕ್ತ ಚಿಕಿತ್ಸೆಗೆ ನೆರವಾಗಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಒಂದು ಸಮುದಾಯವಾಗಿ ಮಾಡಿದ್ದು ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಈ ಘಟನೆಯಿಂದಾಗಿ ಭಟ್ಕಳದ ನವಾಯತ್ ಸಮುದಾಯದ ಮಾನವೀಯ ಕಳಕಳಿ ಅಂತಃಕರಣ ಜಗತ್ತಿಗೆ ಪರಿಚಯವಾದಂತಾಗಿದೆ.