ಭಟ್ಕಳ : ತಾಲ್ಲೂಕಿನ ಬೇಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಶಿರಾಲಿಯಲ್ಲಿ ಎಂಎಸ್ಐಎಲ್ ಕಂಪೆನಿಯಿಂದ ಮದ್ಯದ ಅಂಗಡಿ ತೆರೆಯುವುದಕ್ಕೆ ಅಲ್ಲಿನ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು, ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ತೆರೆಯಬಾರದು ಎಂದು ಆಗ್ರಹಿಸಿ ರವಿವಾರ ಸಂಜೆ ಪ್ರತಿಭಟನೆ ನಡೆಸಿ ಗ್ರಾ.ಪಂ. ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಬೇಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಶಿರಾಲಿಯಲ್ಲಿ ಈ ಹಿಂದೆ ಎಮ್.ಎಸ್.ಐ.ಎಲ್. ಕಂಪನಿಯಿಂದ ಮಧ್ಯದಂಗಡಿ ತೆರೆಯುವ ಹುನ್ನಾರ ನಡೆದಿದ್ದರಿಂದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಅದನ್ನು ಸ್ಥಗಿತಗೊಳಿಸಿದ್ದರು. ಆದರೆ ಈಗ ಮತ್ತೆ ಮದ್ಯದ ಅಂಗಡಿ ಸ್ಥಾಪಿಸುವ ಮಾತುಗಳು ಕೇಳಿ ಬರುತ್ತಿದೆ. ಪಡುಶಿರಾಲಿಯಲ್ಲಿ ಮದ್ಯದಂಗಡಿ ಸ್ಥಾಪಿಸಿದಲ್ಲಿ ಆಸು-ಪಾಸಿನ ಗ್ರಾಮಸ್ಥರಿಗೆ ತೀರಾ ತೊಂದರೆಯಾಗುತ್ತದೆ. ಅದರಲ್ಲೂ ಮಹಿಳೆಯರು, ಹೆಣ್ಣು ಮಕ್ಕಳು ಹತ್ತಿರದ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದು, ಈ ಮಾರ್ಗವಾಗಿ ಸಂಚರಿಸುತ್ತಾರೆ.
ಇದರಿಂದ ಮಹಿಳೆಯರು ಹೆದರುವ ಸಾಧ್ಯತೆ ಇದೆ. ಮದ್ಯದಂಗಡಿ ಆರಂಭಿಸಿದರೆ ಯುವಕರೂ ಕೂಡ ಮಧ್ಯವ್ಯಸನ ಮಾಡಿ ದಾರಿ ತಪ್ಪುವ ಸಾಧ್ಯತೆ ಇದೆ. ಈ ಮಜಿರೆಯಲ್ಲಿ ಹೆಚ್ಚು ಬಡವರು, ಕೂಲಿಕಾರರು ವಾಸಿಸುತ್ತಿದ್ದಾರೆ. ಮದ್ಯದ ಅಂಗಡಿ ತೆರೆದಲ್ಲಿ ಎಲ್ಲರಿಗೂ ತೊಂದರೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಇಲ್ಲಿ ಮದ್ಯದ ಅಂಗಡಿಗೆ ಪರವಾನಿಗೆ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಿಗೆ ಗ್ರಾ.ಪಂ.ನಿಂದ ಎಮ್.ಎಸ್.ಐ.ಎಲ್. ಮಧ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಮತ್ತು ಯಾವುದೇ ಪರವಾನಿಗೆ, ಶಿಫಾರಸ್ಸು ಮಾಡಬಾರದು ಎಂದು ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸ್ವಸಹಾಯ ಸಂಘಗಳ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.