ಭಟ್ಕಳ: ಒಂದು ಕೋಟಿಗೂ ಮಿಕ್ಕಿದ ಆಸ್ಪತ್ರಯ ಬಿಲ್ ಭರಿಸದೆ ಕಳೆದ ೯ತಿಂಗಳುಗಳಿಂದ ಕೋಮಾ ಸ್ಥತಿಯಲ್ಲಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಭಟ್ಕಳ ಮೂಲಕದ ಅಬುಬಕರ್ ಮಾಕಡೆ ಭಟ್ಕಳಿಗರ ನಿರತಂರ ಪ್ರಯತ್ನದಿಂದಾಗಿ ಕೊನೆಗೂ ಭಾರತಕ್ಕೆ ಮರಳುವ ಅವಕಾಶ ಪಡೆದುಕೊಂಡಿದ್ದು ಶುಕ್ರವಾರ ಬೆಂಗಳೂರಿಗೆ ಸ್ಥಳಾಂತರಿಸುವುದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ.
ಇಲ್ಲಿನ ಹೆಬಳೆ ಗ್ರಾ.ಪಂ. ಉಪಾಧ್ಯಕ್ಷ ಇಬ್ಬು ಅಲಿ ಎಂಬುವವರ ಅಳಿಯ(ಪುತ್ರಿಯ ಪತಿ) ಶಿರೂರು ನಿವಾಸಿ ಅಬುಬಕರ್ ಮಾಕಡೆ ಎಂಬುವವರು ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದು ಅಪಘಾತವೊಂದರಲ್ಲಿ ಕೋಮಾ ಅವಸ್ಥೆಗೆ ತಲುಪಿದ್ದು ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಸರ್ಕಾರಿ ಆಸ್ಪತ್ರೆಯಂದರೆ ಉಚಿತ ಚಿಕಿತ್ಸೆ ಎಂದು ಭಾವಿಸಿದ ಅವರ ಸಂಬಂಧಿಕರು ಚಿಕಿತ್ಸೆಯನ್ನು ಪ್ರಾರಂಭಿಸಿದರು. ಕಳೆದ ಒಂಬತ್ತು ತಿಂಗಳಿಂದ ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣದೆ ಇರುವಾಗ ಅವರನ್ನು ಭಾರತಕ್ಕೆ ತರವು ಪ್ರಯತ್ನಕ್ಕೆ ಕುಟುಂಬದವರು ಪ್ರಯತ್ನಿಸಿದರಾದರೂ ಆಸ್ಪತ್ರೆಯ ಒಂದು ಕೋಟಿ ರೂ ಬಿಲ್ ನೋಡಿ ದಂಗಾದರು. ಜೀವನಮಾನವಿಡಿ ದುಡಿದರೂ ಒಂದು ಕೋಟಿ ರೂ ಒದಗಿಸಲು ಸಾಧ್ಯವಗುವುದಿಲ್ಲ ಎಂದು ತಿಳಿದು ತಮ್ಮ ಅಳಿಯ ಸ್ವದೇಶಕ್ಕೆ ಮರಳುವ ಆಸೆಯನ್ನು ಕೈಬಿಟ್ಟಿದ್ದರು.
ಆದರೆ ಇತ್ತಿಚೆಗೆ ಇಲ್ಲಿನ ಸಾಹಿಲ್ ಆನ್ ಲೈನ್ ಅಂತರಜಾಲ ತಾಣವು ಈ ಕುರಿತಂತೆ ವಿಸೃತ ವರದಿಯನ್ನು ಪ್ರಕಟಿಸಿದ್ದು ಇದರ ಪರಿಣಾಮವಾಗಿ ಸೌದಿಯಲ್ಲಿರುವ ಭಟ್ಕಳ ಹಾಗೂ ಮುರುಡೇಶ್ವರದ ನವಾಯತ್ ಸಮುದಾಯ ಇದಕ್ಕಾಗಿ ಹಗಲಿರುಳು ಪ್ರಯತ್ನಿಸಿದ್ದರು. ಇವರ ಪ್ರಯತ್ನಕ್ಕೀಗ ಯಶಸ್ಸು ದೊರೆಕಿದ್ದು ಆಶ್ಚರ್ಯಕರ ಬೆಳವಣೆಗೆಯೊಂದರಲ್ಲಿ ಸೌದಿ ಆಸ್ಪತ್ರೆಯ ಅಧಿಕರಿಗಳು ಒಂದು ಕೋಟಿ ರೂ ಬಿಲ್ಲನ್ನು ಮನ್ನಾ ಮಾಡಿದ್ದಲ್ಲದೆ ಈ ವ್ಯಕ್ತಿಯನ್ನು ಸೂಕ್ತ ಚಿಕತ್ಸೆ ಮಾಡಿ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಅನಿವಾಸಿ ಭಾರತೀಯರಾದ ಭಟ್ಕಳದ ಡಾ. ಝಹೀರ್ ಕೋಲಾ ಹಾಗೂ ಡಾ.ವಸೀಮ್ ಮಾಣಿಯವರು ಬೆಂಗಳೂರಿನ ಮಣೀಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದು ಅಬುಬಕರ್ ಮಾಕಡೆಯವರ ಕುಟುಂಬ ಈಗ ನಿಟ್ಟುಸಿರು ಬಿಡುವಂತೆ ಮಾಡಿದೆ.
ಈ ನಡುವೆ ಸೌದಿ ಅರೇಬಿಯಾದ ರಿಯಾಝ್ ನಲ್ಲಿ ಡಾ.ಝಹೀರ್ ಹಾಗೂ ಡಾ.ವಸೀಮ್ ಸಭೆಯೊಂದನ್ನು ಆಯೋಜಿಸಿದ್ದು ಅಲ್ಲಿ ಅಬುಬಕರ್ ಮಾಕಡೆಯ ಚಕಿತ್ಸೆಗಾಗಿ ಸಹಾಯಹಸ್ತ ಚಾಚುವಂತೆ ವಿನಂತಿಸಿಕೊಂಡಿದ್ದು ಇದಕ್ಕೆ ಅಭೂತಪೂರ್ವ ಬೆಂಬಲ ದೊರೆತಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ದಾನಿಗಳು ನೀಡುವ ವಾಗ್ದಾನ ಮಾಡಿದ್ದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವ ಭಟ್ಕಳದಲ್ಲಿರುವ ಅಬುಬಕರ್ ಕುಟುಂಬ ಈಗ ಸ್ವಲ್ಪಮಟ್ಟಿಗೆ ಉಸಿರಾಡುವಂತಾಗಿದೆ.
ರಿಯಾದ್ ನ ಸಭೆಯನ್ನುದ್ದೇಶಿಸಿ ಮಾತನಾಡಿದ ಮುರಡೇಶ್ವರ ಮುಸ್ಲಿಮ್ ಜಮಾಅತ್ ರಿಯಾದ್ ಇದರ ಅಧ್ಯಕ್ಷ ಅಶ್ಫಾಖ್ ಕೋಟೇಶ್ವರ, ಡಾ.ಝಹೀರ್ ಹಾಗೂ ಡಾ.ವಸೀಮ್ ರ ಕಾರ್ಯ ಶ್ಲಾಘನೀಯವಾಗಿದ್ದು ಮುಂಬರುವ ದಿನಗಳಲ್ಲಿ ನಾವು ಒಟ್ಟಾಗಿ ಇಂತಹ ಸಮಸ್ಯೆಗಳಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಭಟ್ಕಳದ ಎಲ್ಲ ಸಮುದಾಯದದವರು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ನಮ್ಮಿಂದಾದ ಸಹಾಯ ಸಹಕಾರ ಮಾಡಬೇಕಾಗಿದೆ ಎಂದು ತಿಳಿಸಿದರು.
ಮಾಧ್ಯಮ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಡಾ.ವಸೀಮ್ ಮಾಣಿ, ಅಬುಬಕರ್ ಮಾಕಡೆಯವರಿಗೆ ಶುಕ್ರವಾರ ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದ್ದು ಅಲ್ಲಿ ತಜ್ಞ ವೈದ್ಯರ ಸೇವೆಯನ್ನು ಪಡೆದುಕೊಳ್ಳಲಾಗುವುದು, ಅವರು ಸಂಪೂರ್ಣ ಚಿಕಿತ್ಸೆ ಆಗುವವರೆಗೂ ನಾವು ಪ್ರಯತ್ನ ಮಾಡುತ್ತೇವೆ. ಗಲ್ಫ್ ನಲ್ಲಿರುವ ಭಟ್ಕಳದ ಎಲ್ಲ ಜಮಾಅತ್ ಮುಖಂಡರಿಗೆ ಧನಸಹಾಯಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಚಿಕಿತ್ಸೆಯಲ್ಲಿ ಯಾವುದಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಭಟ್ಕಳದ ನವಾಯತ್ ಸಮುದಾಯದ ಮಾನವೀಯ ಮುಖ, ಕಳಕಳಿ, ಅವರ ಅಂತಃಕರಣ ಈ ಒಂದು ಘಟನೆಯಿಂದಾಗಿ ಜಗತ್ತಿಗೆ ಪರಿಚಯವಾದಂತಾಗದೆ. ಸದಾ ಭಟ್ಕಳದ ಸಮುದಾಯದ ಕುರಿತು ಇಲ್ಲಸಲ್ಲದ ಆರೋಪ ಮಾಡುತ್ತಿರುವರಿಗೆ ಈ ಘಟನೆ ಪಾಠಕಲಿಸಿದಂತಾಗಿದೆ.
ಎಂ.ಆರ್.ಮಾನ್ವಿ