ಭಟ್ಕಳ: ಮಾ. ೨೯ರಿಂದ ಎ.೫ ವರೆಗೆ ಉಜಿರೆ ಶ್ರೀರಾಮ ಕ್ಷೇತ್ರದ ಶ್ರೀ ರಾಮ್ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ ೫೭ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಹಾಗೂ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆಯಲಿದ್ದು ತಾಲೂಕಿನ ಸಮಾಜ ಬಾಂಧವರು ಹಾಗೂ ಇತರೇ ಎಲ್ಲಾ ಸಮಾಜದವರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ನಾಮಧಾರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಿ. ಬಿ. ನಾಯ್ಕ ಮನವಿಮಾಡಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ನಾನಾ ಭಾಗದ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಯಾವುದೇ ಬೇಧ-ಭಾವವಿಲ್ಲದೇ ಎಲ್ಲಾ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ, ಜ್ಯೋತಿಷ್ಯ, ವೈದಿಕಕ್ಕೆ ಸಂಬಂಧ ಪಟ್ಟ ಬೋಧನೆ ಸೇರಿದಂತೆ ಉತ್ತಮ ವಾತಾವರಣದಲ್ಲಿ ಕಲಿಕೆಯನ್ನು ಮಾಡಲಾಗುತ್ತಿದೆ ಎಂದರು.
ಶ್ರೀ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವದ ನಿಮಿತ್ತ ಮಾರ್ಚ ೨೯ರಂದು ಕಾರ್ಯಕ್ರಮ ಆರಂಭವಾಗಲಿದ್ದು ಕಾರ್ಯಕ್ರಮದಲ್ಲಿ ಶ್ರೀ ರಾಮನಾಮ ಸಪ್ತಾಹದ ಅಖಂಡ ನಂದಾದೀಪವನ್ನು ಶಾಸಕ ವಸಂತ ಬಂಗೇರ ಪ್ರಜ್ವಲಿಸುವರು. ಶ್ರೀರಾಮ ಜಯರಾಮ ಜಯ ಜಯ ರಾಮ ತಾರಕ ನಾಮೋಚ್ಛಾರಣೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಾರಂಭಿಸುವರು. ಮುಖ್ಯ ಅತಿಥಿಗಳಾಗಿ ಅನೇಕ ಗಣ್ಯರು ಭಾಗವಹಿಸಲಿದ್ದು ವಾರ್ಷಿಕ ಪ್ರತಿಷ್ಟಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ ಎಂದೂ ತಿಳಿಸಿದರು.
ಜಾತ್ರಾ ಮಹೋತ್ಸವದ ಪ್ರಯುಕ್ತ ದಿನಂಪ್ರತಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದ್ದು ಮಾ.೩೦ರಂದು ನಾರಿಕೇಳ ಗಣಯಾಗ, ಮಾ.೩೧ರಂದು ನವಗ್ರಹ ಶಾಂತಿ ಹೋಮ, ವಿಶೇಷ ಪೂಜೆ, ಎ.೧ರಂದು ಮಹಾ ಮೃತ್ಯುಂಜಯ ಹೋಮ, ಅನ್ನಪೂರ್ಣೇಶ್ವರಿಗೆ ಮಹಾಪೂಜೆ, ನಾಗದೇವರಿಗೆ ಪಂಚಾಮೃತ ಅಭಿಷೇಕ, ಅನ್ನ ಸಂತರ್ಪಣೆ ನಡೆಯಲಿದೆ. ಎ.೨ರಂದು ನವದುರ್ಗಾ ಹೋಮ, ಚಂದ್ರಮಂಡಳ ರಥೋತ್ಸವ, ಎ.೩ರಂದು ಸಹಸ್ರನಾಮ ಯಾಗ, ಗೋಪಾಲಕೃಷ್ಣ ದೇವರಿಗೆ ವಿಶೇಷ ಮಹಾಪೂಜೆ, ಅನ್ನ ಸಂತರ್ಪಣೆ, ಬೆಳ್ಳಿ ರಥೋತ್ಸವ ನಡೆಯಲಿದೆ. ಎ.೪ರಂದು ದತ್ತಯಾಗ, ಮಧ್ಯಾಹ್ನ ಆಂಜನೇಯ ದೇವರಿಗೆ ಮತ್ತು ದತ್ತಾತ್ರೇಯ ದೇವರಿಗೆ ವಿಶೇಷ ಪೂಜೆ, ಯಾಗಶಾಲಾ ಪ್ರವೇಶ, ಶ್ರೀ ಹನುಮಾನ್ ರಥೋತ್ಸವ, ಕಟ್ಟೆಪೂಜೆ, ದೀಪೋತ್ಸವ, ಎ.೫ರಂದು ಪ್ರತ:ಕಾಲ ೬ ರಿಂದ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ಶ್ರೀ ದೇವರ ಪಾಲಕಿ ಬಲಿಉತ್ಸವ, ಮಹಾ ಬ್ರಹ್ಮರಥೋತ್ಸವ ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಶ್ರೀರಾಮ ಕ್ಷೇತ್ರದ ಟ್ರಸ್ಟಿ ಜೆ. ಎನ್. ನಾಯ್ಕ (ಬಾಬು ಮಾಸ್ತರ), ಸಮಿತಿಯ ಉಪಾಧ್ಯಕ್ಷ ಕೆ.ಆರ್. ನಾಯ್ಕ, ಕಾರ್ಯದರ್ಶಿ ರಾಜೇಶ ನಾಯ್ಕ, ಸಮಿತಿ ಸದಸ್ಯರುಗಳಾದ ಜೆ.ಡಿ.ನಾಯ್ಕ, ಈರಪ್ಪ ಗರ್ಡಿಕರ್, ಸತೀಶ್ಕುಮಾರ್ ನಾಯ್ಕ, ಎಂ.ಆರ್. ನಾಯ್ಕ, ಈರಪ್ಪ ಮಾಸ್ತರ್, ಶ್ರೀಧರ ನಾಯ್ಕ, ವಿ.ಜಿ.ನಾಯ್ಕ, ಎಸ್.ಎಂ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.