ಭಟ್ಕಳ: ನೂತನ ಜಾಲಿ ಪಟ್ಟಣ ಪಂಚಾಯತ್ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಇದರ ಅಭಿವೃದ್ಧಿಗಾಗಿ ಸರ್ಕಾರಿಂದ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಲ್ಲಿ ಮನವಿ ಮಾಡಿಕೊಂಡಿರುವ ಜಾಲಿ ಪ.ಪಂ ಸದಸ್ಯರು ಸುಮಾರು ೧೫ಕೋಟಿ ರೂ ವಿಶೇಷ ಅನುದಾನದ ಬೇಡಿಕೆಯನ್ನಿಟ್ಟಿದ್ದಾರೆ.
ಶುಕ್ರವಾರ ಭಟ್ಕಳ ಶಾಸಕ ಮಾಂಕಾಳ್ ವೈದ್ಯರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿಯಾದ ಅಧ್ಯಕ್ಷ ಅಬ್ದುರ್ರಹೀಮ್ ಹಾಗೂ ಸದಸ್ಯರ ನಿಯೋಗವು ಜಾಲಿ ಪ.ಪಂ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿಕೊಂಡರು.
ಈ ಕುರಿತಂತೆ ಮಾಹಿತಿ ನೀಡಿದ ಅಧ್ಯಕ್ಷ ಅಬ್ದುರ್ರಹೀಮ್ ಜಾಲಿ ಪಟ್ಟಣ ಪಂಚಾಯತ್ ಅಭಿವೃದ್ಧಿಯಲ್ಲಿ ತೀರ ಹಿಂದುಳಿದಿದೆ. ಗ್ರಾಮ ಪಂಚಾಯತ್ ನಿಂದ ಪಟ್ಟಣ ಪಂಚಾಯತ್ ಆಗಿ ಬಡ್ತಿ ಹೊಂದಿದ ನಂತರ ಇಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿವೆ. ಇದಕ್ಕಾಗಿ ಬರುವ ಅನುದಾನದಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಅಸಾಧ್ಯವಾಗಿದ್ದು ಶಾಸಕ ಮಾಂಕಾಳ್ ವೈದ್ಯರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಜಾಲಿ ಪ.ಪಂ.ನ್ನು ಮಾದರಿ ಪಂಚಾಯತ್ ಅನ್ನಾಗಿ ರೂಪಿಸಲು ಪಣ ತೊಟ್ಟಿದ್ದು ಇದಕ್ಕಾಗಿ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ ಎಂದು ಅವರು ತಿಳಿಸಿದರು. ರಸ್ತೆ, ಒಳಚರಂಡಿ ನಿರ್ಮಾಣಕ್ಕಾಗಿ ೧೦ಕೋಟಿ, ಪ.ಪಂ ಕಟ್ಟಡಕ್ಕಾಗಿ ೩ಕೋಟಿ, ಕಸವಿಲೆವಾರಿಗಾಗಿ ೧ಕೋಟಿ ಹಾಗೂ ರಸ್ತೆ ಬದಿ ದೀಪಗಳಿಗಾಗಿ ೫೦ಲಕ್ಷ ರೂ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಮಾನ್ಯ ಮುಖ್ಯಮಂತ್ರಿಯವರಲ್ಲಿ ಬೇಡಿಕೆಯನ್ನು ಇಟ್ಟಿದ್ದು ಇದಕ್ಕೆ ಪೂರಕವಾಗಿ ಸ್ಪಂಧಿಸಿದ್ದಾರೆ. ಆದಷ್ಟು ಬೇಗನೆ ಅನುದಾನ ಬಿಡುಗೊಳ್ಳುವ ಭರವಸೆ ನಮಗಿದೆ ಎಂದರು.
ನಿಯೋಗದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಆದಂ ಪಣಂಬೂರು, ಇಮ್ತಿಯಾಝ್, ಶಮೀಮ್ ಬಾನು, ರೇಷ್ಮಾ ಸರ್ದಾರ್, ಫಾತಿಮಾ ಶೇಖ್, ಮಂಗಳ ಗೊಂಡಾ, ದೇವಿದಾಸ,ಶ್ರೀಧರ್ ನಾಯ್ಕ, ಕೃಷ್ಣ ಕುಮಾರ್, ಅಫ್ತಾಬ್ ದಾಮೂದಿ, ಮುಮ್ತಾಝ್, ನಾಗಪ್ಪ ಮತ್ತಿತರರು ಇದ್ದರು.