ಭಟ್ಕಳ: ಹವ್ಯಕ ನೌಕರರ ಸಂಘಟನೆಯನ್ನು ಮಾಡಿಕೊಂಡು ಅತ್ಯುತ್ತಮವಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವುದು ಮಾದರಿಯಾಗಿದೆ ಎಂದು ವೈದ್ಯ ಲಯನ್ಸ ಮಾಜಿ ಅಧ್ಯಕ್ಷ ಡಾ. ವಾದಿರಾಜ ಭಟ್ಟ ಅವರು ಹೇಳಿದರು.
ಅವರು ಭಟ್ಕಳ ತಾಲೂಕ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಭೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮವನ್ನ ಮುರ್ಡೇಶ್ವರದ ಮಾನಾಸ್ಮøತಿಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿರುವ ಸಂಘವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಅವರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದಂತಾಗಿದೆ ಎಂದ ಅವರು ವಿದ್ಯಾರ್ಥಿಗಳು ತಮ್ಮ ಬುದ್ಧಿ ಶಕ್ತಿಯನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೇರಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಪ್ತಕ ಬೆಂಗಳೂರಿನ ಜಿ.ಎಸ್. ಹೆಗಡೆ ಮಾತನಾಡಿ ಸಮಾಜ ಪ್ರತಿಭಾವಂತರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಪ್ರತಿಭಾವಂತರು ಮುಂದೆ ಸಮಾಜದಲ್ಲಿರುವವರನ್ನು ಗುರುತಿಸುವ ಕೆಲಸ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಬುದ್ಧಿಯನ್ನು ಬೆಳೆಸಿಕೊಳ್ಳುವುದರ ಮೂಲಕ ಕೇವಲ ವಿದ್ಯೆ ಮಾತ್ರವಲ್ಲ, ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರ ಹಾಕಬೇಕು ಎಂದು ಕರೆ ನೀಡಿದರು.
ಸಂಘದ ಗೌರವಾಧ್ಯಕ್ಷ ಅಶೋಕ ಭಟ್ಟ ಮಾತನಾಡಿ ಪ್ರತಿಯೊಂದು ಹಂತದಲ್ಲಿಯೂ ಕೂಡಾ ನಾವು ಪರಸ್ಪರ ಸಹಕಾರ ಭಾವನೆಯನ್ನು ಬೆಳೆಸಿಕೊಂಡಲ್ಲಿ ಸಂಘಟನೆಗೆ ಶಕ್ತಿ ಬರುತ್ತದೆ. ತನ್ಮೂಲಕ ನಾವು ಯಾವುದೇ ರೀತಿಯ ಸಹಾಯ ಸಹಕಾರವನ್ನು ಮಾಡಲು ಸಾಧ್ಯವಾಗುವುದು. ಯಾರೂ ಕೂಡಾ ಸಂಪರ್ಕ ಮಾಡಲು ಹಿಂಜರಿಯುವ ಅಗತ್ಯವೇ ಇಲ್ಲ ಎಂದ ಅವರು ಇಂದು ಸಂಘದ ವತಿಯಿಂದ ಪುರಸ್ಕøತರಾದ ವಿದ್ಯಾರ್ಥಿಗಳು ಮುಂದೆ ಸಮಾಜಮುಖಿಯಾದ ಕಾರ್ಯ ಮಾಡಲಿ ಎಂದು ಹಾರೈಸಿದರು.
ಅತಿಥಿಗಳಾದ ಡಾ. ಐ. ಆರ್. ಭಟ್ಟ, ಸಂಘದ ಸಂಸ್ಥಾಪಕ ಅಧ್ಯಕ್ಷ ಡಿ.ಜಿ. ಹೆಗಡೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಂಭು ನಾರಾಯಣ ಹೆಗಡೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್. ಎಸ್. ಎಲ್. ಸಿ. ಹಾಗೂ ಪಿ.ಯು.ಸಿ. ಅತ್ಯುತ್ತಮ ಅಂಕಗಳನ್ನು ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಭಟ್ಕಳ ತಾಲೂಕಿನಿಂದ ವರ್ಗಾವಣೆಗೊಂಡ ನೌಕರರನ್ನು ಕೂಡಾ ಗೌರವಿಸಲಾಯಿತು.
ನಂತರ ವೇದಿಕೆಯಲ್ಲಿ ಸಪ್ತಕ ಬೆಂಗಳೂರು ಇವರ ಸಹಯೋಗದೊಂದಿಗೆ ಕುಮಾರಿ ರಶ್ಮಿ ರವೀಂದ್ರ ಹೆಗಡೆ ಯಲ್ಲಾಪುರ ಇವರ ಗಾಯನ, ಸತೀಶ ಭಟ್ಟ ಹೆಗ್ಗಾರ ಅವರ ಸಂವಾದಿನಿ, ಗುರುರಾಜ ಹೆಗಡೆ ಆಡುಕಳ ಅವರ ತಬಲಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವೀಯಾಯಿತು.