ಭಟ್ಕಳ : ತಾಲೂಕಿನ ಪ್ರೌಢಶಾಲೆಯ ಪ್ರಪ್ರಥಮ ಎನ್,ಎಸ್.ಎಸ್.ಘಟಕವನ್ನು ಬೆಳಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿ.ಆರ್.ಸಿ. ಸಮನ್ವಯಾಧಿಕಾರಿ ಯಲ್ಲಮ್ಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಗ್ರಾಮಗಳ ಉದ್ಧಾರ ಆದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂಬ ಗಾಂಧೀಜಿಯವರ ನುಡಿಯಂತೆ ಎನ್.ಎಸ್.ಎಸ್. ಮೂಲಕ ಗ್ರಾಮಗಳ ಪ್ರಗತಿಗೆ ವಿಧ್ಯಾರ್ಥಿಗಳು ತಮ್ಮ ಸೇವೆಯನ್ನು ನಿಡುವಂತಾಗಬೇಕು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ಧಾರಿಯುತ ವ್ಯಕ್ತಿಗಳಾಗಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳ ಎಜುಕೇಶನ್ ಟ್ರಸ್ಟನ ಆಡಳಿತಾಧಿಕಾರಿ ಹಾಗೂ ಗುರುಸುಧೀಂದ್ರ ಪದವಿ, ಬಿ.ಸಿ.ಎ.,ಬಿ.ಬಿ.ಎ.ಕಾಲೇಜಿನ ಪ್ರಾಚಾರ್ಯರಾದ ನಾಗೇಶ್ ಭಟ್ ಮಾತನಾಡಿ ಶಿಕ್ಷಣದ ಜೊತೆಗೆ ಬದುಕಿಗೆ ಬೇಕಾದ ಆತ್ಮವಿಶ್ವಾಸ, ನಾಯಕತ್ವ ಗುಣ ಬೆಳೆಸಿಕೊಂಡು ಹೋಗಲು ಎನ್.ಎಸ್.ಎಸ್.ಸಹಕಾರಿ. ಈ ಶಾಲೆಯ ಪರಿಸರದ ಸ್ವಚ್ಛತೆ, ವಿದ್ಯಾರ್ಥಿಗಳ ಶಿಸ್ತನ್ನು ನೋಡಿದರೆ ಇಲ್ಲಿ ಬಹಳ ಹಿಂದಿನಿಂದಲೂ ಎನ್.ಎಸ್.ಎಸ್.ಘಟಕ ಇದೆ ಎಂಬ ಭಾವನೆ ಮೂಡುತ್ತದೆ ಎಂದು ಸಂತಸ ವ್ಯಕ್ತ ಪಡಿಸಿದರಲ್ಲದೇ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜಕ್ಕೂ ನಮ್ಮಕೈಲಾದ ಸೇವೆ ಸಲ್ಲಿಸಬೇಕು ಎಂದರಲ್ಲದೇ ಶಾಲೆಗೆ 10,000/- ಯನ್ನು ತಮ್ಮ ತಾಯಿಯವರ ಹೆಸರಲ್ಲಿ ದತ್ತಿನಿಧಿಯೊಂದನ್ನು ಸ್ಥಾಪಿಸಿ ಅದರಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಬಳಸುವಂತೆ ಶಾಲೆಯ ಮುಖ್ಯಸ್ಥ ರಲ್ಲಿ ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದ ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಗಂಗಾಧರ ನಾಯ್ಕ ವಿದ್ಯಾರ್ಥಿಗಳ ಸಮಾಜಿಕ ಜವಾಬ್ದಾರಿಯ ಕುರಿತು ಮಾತನಾಡಿದರು. ನಮ್ಮ ಬದುಕನ್ನು ರೂಪಿಸುವಲ್ಲಿ ನಮ್ಮ ಕುಟುಂಬ, ಪರಿಸರ ಜೊತೆಗೆ ಸಮಾಜದ ಪಾತ್ರವೂ ಬಹಳ ದೊಡ್ಡದು. ಆದ್ದರಿಂದ ಸಮಾಜಕ್ಕೂ ನಾವು ನಮ್ಮ ನೆಲೆಯಲ್ಲಿ ಸೇವೆಯನ್ನು ಸಲ್ಲಿಸಬೇಕಾಗುತ್ತದೆ. ಆ ಮೂಲಕ ಈ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಲು ಎನ್.ಎಸ್.ಎಸ್.ತರಬೇತಿ ನೀಡುತ್ತದೆ. ಸಮಾಜಕ್ಕಾಗಿ ಬದುಕಿದವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ ಎಂಬುದನ್ನು ಅನೇಕ ನಿದರ್ಶನಗಳ ಮೂಲಕ ತಿಳಿಸಿದರು.
ಶಿವಾನಿ ಶಾಂತಾರಾಂ ಮಾತನಾಡಿ ತಮ್ಮ ಕಾಲೇಜು ಜೀವನದ ಎನ್ಎಸ್.ಎಸ್. ತರಬೇತಿಯ ಅನುಭವ ಹಂಚಿಕೊಂಡು ಅದರಿಂದ ತಮಗಾದ ಪ್ರಯೋಜನಗಳ ಕುರಿತು ತಿಳಿಸಿದರು. ಮುಖ್ಯಾಧ್ಯಾಪಕಿ ಡಾ.ಸವಿತಾ ನಾಯಕ ಮಾತನಾಡಿದರು. ಬೆಳಕೆ ಪಂಚಾಯತ್ ಅಧ್ಯಕ್ಷ ರಮೇಶ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರಕಾಶ ಶಿರಾಲಿ ಅತಿಥಿಗಳನ್ನು ಪರಿಚಯಿಸಿದರು.