ಭಟ್ಕಳ: ಇಲ್ಲಿನ ಗೌಸೀಯಾ ಸ್ಟ್ರೀಟ್ ನಲ್ಲಿರುವ ಕಳೆದ ಐದಾರು ತಿಂಗಳುಗಳಿಂದ ಕೆಟ್ಟು ನಿಂತಿರುವ ಪುರಸಭೆಯ ಒಳಚರಂಡಿ ಸಂಸ್ಕರಣ ಘಟಕ್ಕೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಳಚರಂಡಿ ಘಟಕದ ಮೂರು ಯಂತ್ರಗಳು ಕೆಟ್ಟು ಹೋಗಿದ್ದು ತಮ್ಮ ಕಾರ್ಯವನ್ನು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈ ಭಾಗದ ಜನರು ಹಲವು ತೊಂದರೆಗಳನ್ನು ಎದರಿಸಬೇಕಾಗಿ ಬಂತು. ಇನ್ನೂ ಒಂದು ವಾರದೊಳಗೆ ಯಂತ್ರಗಳು ತಮ್ಮ ಕಾರ್ಯವನ್ನು ಆರಂಭಿಸಲಿವೆ. ಎರಡನೇ ಹಂತದಲ್ಲಿ ಇಲ್ಲಿನ ಜನವಸತಿ ಪ್ರದೇಶದಿಂದ ಈ ಸಂಸ್ಕರಣ ಘಟಕವನ್ನು ಸ್ಥಳಾಂತರ ಮಾಡಲಾಗುವುದು ಎಂದರು. ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ ಇಲ್ಲಿನ ಶರಾಬಿ ನದಿಯಲ್ಲಿ ಹೂಳು ತುಂಬಿದ್ದು ಅದನ್ನು ಸ್ವಚ್ಚಗೊಳಿಸುವ ಕಾರ್ಯವಾಗಬೇಕು ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಕುರಿತಂತೆ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸಾದಿಕ್ ಮಟ್ಟಾ, ಸದಸ್ಯರಾದ ಫಯ್ಯಾಝ್ ಮುಲ್ಲಾ ಅಶ್ಫಾಖ್ ಕೆ.ಎಂ ಮತ್ತಿತರರು ಹಾಜರಿದ್ದರು.
ಕಾಲೇಜು ಕಟ್ಟಡಕ್ಕ ಸ್ಥಳೀಯರ ವಿರೋಧ:
ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿನ ಹಾಡಿ ಜಾಗವೊಂದರಲ್ಲಿ ಸರ್ಕಾರಿ ಕಾಲೇಜು ಕಟ್ಟುವ ಸರ್ಕಾರದ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯವರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ಯಾವುದೇ ಕಾರಣಕ್ಕೂ ಇಲ್ಲಿ ಕಾಲೇಜು ಅಥವಾ ಇನ್ನಿತರ ಯಾವುದೇ ಕಟ್ಟಡಗಳನ್ನು ಕಟ್ಟಲು ಅವಕಾಶ ನೀಡುವದಿಲ್ಲ. ಇದು ಜಾನುವಾರುಗಳಿಗೆ ಮೇವು, ದರಕು ಒದಗಿಸಲು ಸರ್ಕಾರ ರೈತರಿಗೆ ನೀಡಿದ ಜಮೀನು ಇದನ್ನು ಇತರ ಯಾವುದೇ ಕಾರ್ಯಗಳಿಗೆ ಬಳಸಕೂಡದು ಎಂದು ಆಗ್ರಹಪಡಿಸಿದ್ದಾರೆ.