ಭಟ್ಕಳ: ಕೇರದಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ಐಸಿಸಿ ಭಯೋತ್ಪಾದಕ ಸಂಘಟನೆಯನ್ನು ಸೇರಿದ್ದು ಇದರ ಪರಿಣಾಮ ಕರಾವಳಿ ಭಾಗದಲ್ಲಿ ಕಂಡು ಬಂದಿದೆ ಬಿಜೆಪಿ ಅಧಿಕಾರ ವಹಿಸಿಕೊಂಡ ಮರುದಿನವೇ ಕರಾವಳಿಯಿಂದ ಭಯೋತ್ಪಾದನೆಯನ್ನು ಮಟ್ಟಹಾಕುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಮಂಗಳವಾರ ಮುರುಡೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ರಾಜ್ಯದಲ್ಲಿ ಪಿ.ಎಫ್.ಐ, ಎಸ್.ಡಿ.ಪಿ.ಐ ಸಂಘಟನೆ ಸಕ್ರೀಯವಾಗಿದ್ದರೆ ಇದಕ್ಕೆ ಸಿದ್ದರಾಮಯ್ಯನವರೇ ಹೊಣೆಯಾಗಿದ್ದು ದೇಶದ 25ಕ್ಕೂ ಹೆಚ್ಚು ರಾಜ್ಯದಲ್ಲಿ ಪಿ.ಎಫ್.ಐ ಸಂಘಟನೆ ಕ್ರೀಯಾಶೀಲವಾಗಿದ್ದು ಸೂಕ್ತಕ್ರಮದ ಅವಶ್ಯಕತೆಯಿದೆ ಎಂದರು.
ಸುವರ್ಣ ವಿಧಾನ ಸೌಧ ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿದ್ದು ಅಲ್ಲಿ ಆಡಳಿತ ನಡೆಸುವ ಕುರಿತು ಸರಕಾರಕ್ಕೆ ಆಸಕ್ತಿಯೇ ಇಲ್ಲವಾಗಿದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರಕಾರಕ್ಕೆ ಕೆಲವು ಪ್ರಮುಖ ಕಚೇರಿಗಳನ್ನು ಸುವರ್ಣ ಸೌಧಕ್ಕೆ ತಂದು ಅಲ್ಲಿ ಸದಾ ಜನರು ಓಡಾಡುವಂತೆ ಮಾಡುವ ಮನಸ್ಸು ಇಲ್ಲ, ವರ್ಷಕ್ಕೆ ಒಂದು ಬಾರಿ ಸ್ವಚ್ಚತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿ ಬಂದಿರುವುದು ದುರಂತ ಎಂದರು.
ಅಧಿವೇಶನವನ್ನು ಕನ್ನಡಿಗರ ಹೆಮ್ಮೆಯ ಸಂಕೇತವಾಗಿ ನಡೆಸಬೇಕಾಗಿದ್ದರೆ, ಯಾರಿಗೂ ಆಸಕ್ತಿಯೇ ಇಲ್ಲ. ಆರಂಭದ ದಿನ ಕೇವಲ ಇಬ್ಬರು ಮಂತ್ರಿಗಳು, ಬೆರಳೆಣಿಕೆಯ ಶಾಸಕರು ಇದ್ದಾರೆ ಎಂದರೆ ಅರ್ಥವಾಗಬೇಕು ಎಂದ ಅವರು ಸಿದ್ಧರಾಮಯ್ಯನವರ ಕೊನೆಯ ಅಧಿವೇಶನ ಇದು. ಪ್ರಥಮ ಅಧಿವೇಶನದಲ್ಲಿ ಸುರ್ವಣ ಸೌಧಕ್ಕಿಂತ ಕೆಲವೇ ದೂರದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡರೂ ಸಾಂತ್ವನ ಹೇಳಲು ಹೋಗಲಿಲ್ಲ, ಕೊನೆಯ ಅಧಿವೇಶನಕ್ಕೂ ಪೂರ್ವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ. ಇದರ ಅರ್ಥ ಸಹಕಾರಿ ಸಂಘಗಳ ಸಾಲಾ ಮನ್ನಾ ರೈತರಿಗೆ ಸರಿಯಾಗಿ ತಲುಪಿಲ್ಲ ಎನ್ನುವು ಸ್ಪಷ್ಟ ಎಂದರು.
ರಾಜ್ಯದಲ್ಲಿ ಸುಮಾರು 42 ಸಾವಿರ ಖಾಸಗೀ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಶೇ.70 ಕ್ಕೂ ಹೆಚ್ಚು ಜನರು ಖಾಸಗೀ ಆಸ್ಪತ್ರೆಗಳನ್ನು ಅವಲಂಭಿಸಿದ್ದರೂ ಸಹ ಮುಖ್ಯ ಮಂತ್ರಿಗಳು, ಆರೋಗ್ಯ ಮಂತ್ರಿಗಳು ಪರಸ್ಪರ ಕಚ್ಚಾಟ ಮಾಡಿಕೊಳ್ಳುತ್ತಿದ್ದಾರೆ. ತಕ್ಷಣ ವೈದ್ಯರ ಜತೆ ಮಾತುಕತೆ ನಡೆಸಿ ಬಗೆಹರಿಸದಿದ್ದಲ್ಲಿ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು. ಕಳೆದ ನಾಲ್ಕೂವರೆ ವರ್ಷದಿಂದ ಸರಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಲು ಆಸಕ್ತಿಯನ್ನೇ ತೋರಿಸಿಲ್ಲ. ವೈದ್ಯರ ನೇಮಕ ಮಾಡಿಲ್ಲ, ಕೇಂದ್ರ ಸರಕಾರದ ಜೆನರಿಕ್ ಔಷಧ ಮಳಿಗೆಗಳಿಗೆ ಕೂಡಾ ಪ್ರೋತ್ಸಾಹ ನೀಡಿಲ್ಲ ಎಂದ ಯಡ್ಯೂರಪ್ಪ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಲ್ಯಾಪ್ಟಾಪ್ ಖರೀಧಿಯಲ್ಲಿ 300 ಕೋಟಿ ಹಗರಣವಾಗಿದ್ದು ತಕ್ಷಣ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ರಾಜೀನಾಮೆ ಕೊಡಬೇಕು. ಹಗರವನ್ನು ಬಯಲಿಗೆಳೆದವರಿಗೆ ವರ್ಗಾವಣೆ ಶಿಕ್ಷೆ ನೀಡಿದ ಸರಕಾರ ಹಗರಣದಲ್ಲಿ ಭಾಗಿಯಾದವರನ್ನು ರಕ್ಷಿಸುತ್ತಿದೆ ಎಂದರು.
ಉತ್ತರ ಕರ್ನಾಟಕ ಭಾಗದ ಸಮಸ್ಯೆ ಚರ್ಚೆಯಾಗಬೇಕಾಗಿದ್ದ ಬೆಳಗಾಗಿ ಅಧಿವೇಶನದಲ್ಲಿ ಜಾರ್ಜ್ ರಾಜೀನಾಮೆ ಕುರಿತು ಪ್ರತಿಭಟನೆ ನಡೆಸಿದರೆ ಉ.ಕ. ದವರಿಗೆ ಅನ್ಯಾಯವಾಗುದಿಲ್ಲವೇ ಎನ್ನುವ ಪ್ರಶ್ನೆಗೆ ಕೆ.ಜೆ. ಜಾರ್ಜ್ ಕುರಿತು ಸುಪ್ರಿಂ ಕೋರ್ಟ ಸಿ.ಬಿ.ಐ. ತನಿಖೆಗೆ ಆದೇಶ ಮಾಡಿದೆ. ಸಿ.ಬಿ.ಐ. ಜಾರ್ಜ್ರನ್ನು ಪ್ರಥಮ ಆರೋಪಿಯನ್ನಾಗಿಸಿ ಎಫ್.ಐ.ಆರ್. ದಾಖಲಿಸಿದ್ದರೂ ಕೂಡಾ ಮುಖ್ಯ ಮಂತ್ರಿಗಳು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಅಧಿವೇಶನ ಸರಿಯಾಗಿ ನಡೆಯಬೇಕಾದರೆ ಮೊದಲು ಜಾರ್ಜ್ ರಿಂದ ರಾಜೀನಾಮೆ ಪಡೆಯಲಿ ಎಂದರು.
ನ್ಯಾ.ಮೂ. ಜಗನ್ನಾಥ ಶೆಟ್ಟಿ ಆಯೋಗ ಹಾಗೂ ನ್ಯಾ. ಮೂ. ರಾಮಚಂದ್ರಯ್ಯ ಆಯೋಗದ ಮಂಡನೆ ಕುರಿತು ಮಾತನಾಡಿದ ಅವರು ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಭಯೋತ್ಪಾದನೆ ಕರಾವಳಿಯಲ್ಲಿ ನಿಯಂತ್ರಣ ಮಾಡುವ ಕುರಿತು ಚರ್ಚೆಗಳಾಗಿವೆ. ನಮ್ಮ ಸರಕಾರ ಬಂದ ತಕ್ಷಣ ಕರಾವಳಿಯ ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು. ವಿದ್ಯುತ್ ಖರೀಧಿ ಹಗರಣದ ಕುರಿತು ಕೇಳಿದ ಪ್ರಶ್ನೆಗೆ ಒಮ್ಮೆಲೇ ಗರಂ ಆದ ಯಡ್ಯೂರಪ್ಪ ಕಳೆದ ನಾಲ್ಕುವರೆ ವರ್ಷದಿಂದ ನೀವೇನು ನಿದ್ದೆ ಮಾಡಿದ್ದೀರಾ ಎಂದು ಸರಕಾರಕ್ಕೆ ಸವಾಲೆಸೆದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ಉಪಾಧ್ಯಕ್ಷ ಶ್ರೀರಾಮುಲು, ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಸಚಿವ ಶಿವಾನಂದ ನಾಯ್ಕ, ಹರತಾಳು ಹಾಲಪ್ಪ, ಮಾಜಿ ಶಾಸಕ ಜೆ.ಡಿ.ನಾಯ್ಕ, ವಿ.ಎಸ್. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.