ಭಟ್ಕಳ: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಎನ್ನುವ ರಾಕ್ಷಸನೊಂದಿಗೇ ದಿನ ಕಳೆಯುತ್ತಿದ್ದು ವಿದ್ಯಾಭ್ಯಾಸದಿಂದ ವಿಮುಖರಾಗುತ್ತಿದ್ದಾರೆ ಎಂದು ಕರಾವಳಿ ಮುಂಜಾವು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೇಗುತ್ತಿ ಹೇಳಿದರು.
ಅವರು ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿ.ಎ. ತರಗತಿಗಳ ಶೈಕ್ಷಣಿಕ ವರ್ಷದ ಉದ್ಘಾಟನೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಡಿಜಿಟಲ್ ಸಹಿ ಹಾಕುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿಯೋರ್ವರೂ ಕೂಡಾ ಸಾಧನೆಯ ಮೂಲಕ ಗುರುತಿಸಿಕೊಂಡಾದ ಮಾತ್ರ ಸಮಾಜದಲ್ಲಿ ಗೌರವ ದೊರೆಯಲು ಸಾಧ್ಯ ಎಂದು ಹೇಳಿದ ಅವರು ತಮ್ಮ ಸ್ವ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ ಯಾರೂ ಕೂಡಾ ಕಷ್ಟಗಳಿಗೆ ಅಂಜದೇ ಮುನ್ನೆಡೆದಾಗ ಯಶಸ್ವು ಸಾಧ್ಯ ಎಂದ ಅವರು ಒಬ್ಬ ವ್ಯಕ್ತಿಯ ಸೋಲಿನಲ್ಲಿ ಯಾರೂ ಕೂಡಾ ಸಹಾಯ ಮಾಡುವುದಿಲ್ಲ ಎಂದ ಅವರು ನೀವು ಸಾಧನೆ ಮಾಡಿದಾಗ ಎಲ್ಲರೂ ನಿಮ್ಮೊಂದಿಗೆ ಬರುತ್ತಾರೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಹಾಗೂ ಬದುಕಿನ ಗುರಿಯನ್ನು ನಿರ್ಲಕ್ಷ ಮಾಡಿದರೆ ಜೀವನದಲ್ಲಿ ಕೊನೆಯ ತನಕವೂ ಕೂಡಾ ಕಷ್ಟಪಡಬೇಕಾದ ಪ್ರಸಂಗ ಎದುರಾಗುತ್ತದೆ. ನಿಮ್ಮ ಪ್ರತಿಭೆಗಳನ್ನು ಬೆಳೆಸಿಕೊಳ್ಳದೇ ಇದ್ದಲ್ಲಿ ಸಮಾಜಕ್ಕೆ ನೀವು ಹೊರೆಯಾಗಬೇಕಾದೀತು ಎಂದು ಎಚ್ಚರಿಸಿದ ಅವರು ಪ್ರತಿದಿನವೂ ಕೂಡಾ ಅಧ್ಯಯನ ಮಾಡುವುದರ ಮೂಲಕ ಪ್ರತಿಭೆಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಸಮಾಜದಲ್ಲಿಂದು ನಾನೊಬ್ಬನೇ ಬೆಳೆಯಬೇಕೆನ್ನುವ ಮನೋಭಾವನೆಯು ಬೆಳೆಯುತ್ತಿರುವ ಕುರಿತು ಬೆಳಕು ಚೆಲ್ಲಿದ ಅವರು ದೊಡ್ಡ ಪತ್ರಿಕೆಗಳು ದರ ಸಮರ, ಜಾಹೀರಾತು ಸಮರದಿಂದ ಸಣ್ಣ ಸಣ್ಣ ಪತ್ರಿಕೆಗಳು ಬೆಳೆಯುವುದನ್ನು ತಪ್ಪಿಸುವ ಪ್ರಯತ್ನ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ಇಂದಿನ ವಾಣಿಜ್ಯ ಜಗತ್ತಿನಲ್ಲಿ ಹಾಗೂ ಪೈಪೋಟಿಯಲ್ಲಿ ಪತ್ರಿಕಾ ಧರ್ಮವನ್ನು ಕಾಪಾಡುವುದು ಕಷ್ಟಕರವಾಗಿದೆ ಎಂದ ಅವರು ಇನ್ನೊಬ್ಬನ ಪಾವಿತ್ರ್ಯತೆಯನ್ನು ಹಾಳು ಮಾಡುವ ಪರಿಸ್ಥಿತಿ ಇಂದು ಪತ್ರಿಕಾ ಮಾಧ್ಯಮಕ್ಕೆ ಎದುರಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ ಮಾತನಾಡಿ ವಿದ್ಯಾಭ್ಯಾಸದಲ್ಲಿ ಬಿ.ಎ. ಮತ್ತು ಬಿ.ಇಡಿ ಯನ್ನು ನಿರ್ಲಕ್ಷಿಸಲಾಗುತ್ತಿರುವ ಕುರಿತು ವಿವರಿಸುತ್ತಾ ಇದಕ್ಕೆ ಕಾರಣ ಬಿ.ಎ. ಮಾಡುವ ವಿದ್ಯಾರ್ಥಿಗಳು ಕೇವಲ ಪದವಿ ಗಳಿಸಲಿಕ್ಕಾಗಿಯೇ ಕಾಲೇಜಿಗೆ ಬರುವವರು ಎನ್ನುವ ಭಾವನೆ ಇದೆ. ಈ ಹಿಂದೆ ಬಿ.ಎ. ತರಗತಿಯನ್ನು ಕಾಲೇಜಿನಲ್ಲಿ ರದ್ದು ಪಡಿಸಿದ್ದರೂ ಕೂಡಾ ಈ ವರ್ಷದಿಂದ ಬಿ.ಎ. ಜರ್ವಲಿಸಂ ಕೋರ್ಸ ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶವನ್ನು ನೀಡಿದ್ದೇವೆ. ಕೇವಲ ಪದವಿಗಾಗಿ ಬರುವವರಿಗೆ ಇಲ್ಲಿ ಅವಕಾಶವಿಲ್ಲ ಎಂದ ಅವರು ಕಾಲೇಜಿನಿಲ್ಲಿ ಶಿಸ್ತು ಪಾಲನೆ ಮುಖ್ಯ,ಇಲ್ಲವಾದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ಹಿಂಜರಿಯುವುದಿಲ್ಲ ಎಂದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಕಾರ್ಯನಿತರ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಭಟ್ಟ ಮಾತನಾಡಿ ಪತ್ರಿಕೋದ್ಯಮದಲ್ಲಿ ಶ್ರಮ ಮತ್ತು ಶೃದ್ಧೆಯಿದ್ದರೆ ಯಶಸ್ವೀ ಪತ್ರಕರ್ತನಾಗಲು ಸಾಧ್ಯವಾಗುವುದು. ಹಲವರು ಈ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಬಂದಿರುತ್ತಾರೆ, ಆದರೆ ನಂತರ ವೃತ್ತಿಯನ್ನು ಪ್ರೀತಿಸುತ್ತಾ ವೃತ್ತಿ ಗೌರವ ಕಾಪಾಡುತ್ತಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಉತ್ತಮ ಅಧ್ಯಯನದ ಮೂಲಕ ಯಶಸ್ವನ್ನ ಗಳಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ವೆಂಕಟೇಶ ಮೇಸ್ತ, ಉಪನ್ಯಾಸಕ ಪಿ.ಎಸ್. ಹೆಬ್ಬಾರ್ ಪಸ್ಥಿತರಿದ್ದರು.
ಕುಮಾರಿ ನಯನಾ ಪ್ರಾರ್ಥಿಸಿದರು. ಬಿ.ಸಿ.ಎ. ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿದರು. ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ನಾಗೇಶ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಮೇಸ್ತ ಹಾಗೂ ಸುಶೀಲಾ ಮೇಸ್ತ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಶಿಲ್ಪಾ ಮತ್ತು ಭವ್ಯ ನಿರ್ವಹಿಸಿದರು. ಉಪನ್ಯಾಸಕ ಮಂಜುನಾಥ ಭಟ್ಟ ವಂದಿಸಿದರು.