ಭಟ್ಕಳ: ಅಳ್ವೇಕೋಡಿ ಶ್ರೀ ಮಾರಿಜಾತ್ರ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಧಾರ್ಮಿಕತೆಯ ಅರಿವು ಮೂಡಿಸುವಲ್ಲಿ ಮಠಮಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಒಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೀಠವು ಮೂರನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವುದು ಸಂತಸವಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವ ಮಂದಿರಗಳು ಸಂಸ್ಕಾರದ ಪ್ರಮುಖ ಕೇಂದ್ರಗಳಾಗಿವೆ. ಜಿಲ್ಲೆಯಲ್ಲಿ ಇಂದು ಧಾರ್ಮಿಕ ಉತ್ಸವಗಳು, ದೇವ ಮಂದಿಗಳು ಹೆಚ್ಚುತ್ತಿರುವುದು ಜನರು ಹೆಚ್ಚು ಹೆಚ್ಚು ಧಾರ್ಮಿಕತೆಯೆಡೆಗೆ ಬರುತ್ತಿರುವುದಕ್ಕೆ ಸಾಕ್ಷಿಯಾಗಿದ್ದು ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ರೀಗಳು ಹೇಳಿದರು.
ಸಮಾಜದಲ್ಲಿ ಒಬ್ಬರನ್ನು ನೋಡಿ ಇನ್ನೊಬ್ಬರು ಕಲಿಯಬೇಕು, ಅಂತಹ ಉದಾಹರಣೆಯಿದ್ದರೆ ಅದು ಅಳ್ವೇಕೋಡಿ ಕ್ಷೇತ್ರಕ್ಕೆ ಸಲ್ಲುತ್ತದೆ. ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರಕ್ಕೆ ಬರುತ್ತಿದ್ದು ಅಂದಿಗೂ ಇಂದಿಗೂ ಬಹಳ ಬೆಳವಣಿಗೆಯಾಗಿದೆ. ಹಿಂದೆ ಇದ್ದ ಚಿಕ್ಕ ದೇವಸ್ಥಾನ ಇಂದು ಭವ್ಯ ಮಂದಿರವಾಗಿದೆ. ಅಥಿತಿಗಳಿಗೆ ಉಳಿದುಕೊಳ್ಳಲು ವಾಸ್ಥಾನ, ಕಲ್ಯಾಣ ಮಂಟಪ ಸಹ ಇದ್ದು ಭಜಕ ಭಕ್ತರಿಗೆ ಎಲ್ಲಾ ರೀತಿಯ ಅನುಕೂಲ ಕಲ್ಪಿಸುವಲ್ಲಿ ಕ್ಷೇತ್ರ ಯಶಸ್ವೀಯಾಗಿದೆ ಎಂದರು. ಇದಕ್ಕೂ ಪೂರ್ವ ಶ್ರೀಗಳು ಮಾರಿಕಾಂಬೆಯ ದರ್ಶನ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಯಶ್ರೀ ಮೊಗೇರ ಉಪಸ್ಥಿತರಿದ್ದು ಮಾತನಾಡಿದರು. ಧಾರ್ಮಿಕ ಸಭೆಯಲ್ಲಿ ಮೊಗೇರ ಸಮಾಜದ ಅಧ್ಯಕ್ಷ ಕೆ. ಎಂ. ಕರ್ಕಿ, ಸಿರ್ಸಿ ಮೊಗೇರ ಸಮಾಜದ ಅಧ್ಯಕ್ಷ ಗಣೇಶ ಜೈವಂತ, ಕುಮಟಾದ ಲೆಕ್ಕಪರಿಶೋಧಕ ಜಿ.ಎಸ್. ಕಾಮತ್, ಪರ್ಸಿನ್ ಬೋಟ್ ಯೂನಿಯನ್ ಅಧ್ಯಕ್ಷ ಜಟ್ಗಾ ಮೊಗೇರ, ಶ್ರೀ ಲಕ್ಷ್ಮೀ ಸರಸ್ವತಿ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಮೊಗೇರ, ಪ್ರಮುಖರಾದ ಗೋಪಾಲ ಮೊಗೇರ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಸ್ವಾಗತಿಸಿದರು. ಶ್ರೀ ದೇವಸ್ಥಾನದ ಆಡಳಿತ ಧರ್ಮದರ್ಶಿ ನಾರಾಯಣ ದೈಮನೆ ದೇವಸ್ಥಾನದ ಧರ್ಮದರ್ಶಿಗಳಾದ ರಾಮಾ ನಾಯ್ಕ, ಹನುಮಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಶ್ರೀಗಳ ಸಮ್ಮುಖದಲ್ಲಿ ಜಯಶ್ರೀ ಮೊಗೇರ, ಕೆ. ಎಂ. ಕರ್ಕಿ, ಗಣೇಶ ಜೈವಂತ, ಜಿ.ಎಸ್. ಕಾಮತ್, ಜಟ್ಗಾ ಮೊಗೇರ, ಭಾಸ್ಕರ ಮೊಗೇರ, ಗೋಪಾಲ ಮೊಗೇರ ಮುಂತಾದವರನ್ನು ಶಾಲು ಹೊದಿಸಿ ಗೌರವಿಸಲಾಯಿತು.