ಹತ್ತು ವರ್ಷಗಳ ಬಳಿಕ ಬಿಜೆಪಿಗೆ ಒಲಿದ ಭಟ್ಕಳ-ಹೊನ್ನಾವರ ಕ್ಷೇತ್ರ
ಭಟ್ಕಳ: ಕಳೆದ ಹತ್ತು ವರ್ಷಗಳಿಂದ ಭಟ್ಕಳ ವಿಧಾನ ಸಭಾ ಕ್ಷೇತ್ರವನ್ನು ಕಳೆದುಕೊಂಡಿದ್ದ ಬಿ.ಜೆ.ಪಿ. ಮತ್ತೆ ಗೆಲುವು ಸಾಧಿಸುವ ಮೂಲಕ ತನ್ನದಾಗಿಸಿಕೊಂಡಿದೆ. ಕಳೆದ ಸುಮಾರು ಎರಡು ವರ್ಷಗಳಿಂದ ಯುವ ನಾಯಕ ಸುನಿಲ್ ನಾಯ್ಕ ಅವರು ಕ್ಷೇತ್ರದಲ್ಲಿ ಸುತ್ತಾಡಿ ತನ್ನದೇ ಆದ ಮತದಾರರನ್ನು ಸೃಷ್ಟಿಸಿಕೊಂಡಿದ್ದು ಕೊನೆಯ ಹಂತದಲ್ಲಿ ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಇತ್ತು. ಈ ಹಂತದಲ್ಲಿ ಹಠ ಹಿಡಿದ ಅವರು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಸಹಾಯದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವೀಯಾಗಿದ್ದು ಅಂತಿಮವಾಗಿ 5740 ಮತಗಳ ಅಂತರದಿಂದ ಹಾಲಿ ಶಾಸಕ ಮಂಕಾಳ ವೈದ್ಯ ಅವರನ್ನು ಸೋಲಿಸುವಲ್ಲಿ ಸಫಲರಾಗಿದ್ದಾರೆ.
ಬೆಳಿಗ್ಗೆ ಕುಮಟಾದ ಡಾ. ಎ. ವಿ. ಬಾಳಿಗಾ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಪ್ರಥಮ ಸುತ್ತಿನಲ್ಲಿಯೇ ಮುನ್ನಡೆಯನ್ನು ಸಾಧಿಸಿದ ಬಿ.ಜೆ.ಪಿ.ಯ ಸುನಿಲ್ ನಾಯ್ಕ ಕೊನೆಯ ತನಕವೂ ಅದೇ ಮುನ್ನಡೆಯನ್ನು ಕಾಯ್ದುಕೊಂಡು ಹೋಗಿದ್ದು 82,738 ಮತಗಳನ್ನು ಗಳಿಸುವಲ್ಲಿ ಯಶಸ್ವೀಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ನ ಹಾಲಿ ಶಾಸಕ ಮಂಕಾಳ ವೈದ್ಯ ಅವರು 76,998 ಮತಗಳನ್ನು ಗಳಿಸಿ ಅಂತಿಮವಾಗಿ 5,740 ಮತಗಳ ಅಂತರದಿಂದ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
ಅಂತಿಮವಾಗಿ ಬಿ.ಜೆ.ಪಿ. ಅಭ್ಯರ್ಥಿ ಸುನಿಲ್ ನಾಯ್ಕ 83,172, ಕಾಂಗ್ರೆಸ್ನ ಮಂಕಾಳ ವೈದ್ಯ 77242, ಎಂ.ಇ.ಪಿ. ಪಕ್ಷದ ಗಫೂರ್ ಸಾಬ್ 1146, ರಾಜೇಶ ನಾಯ್ಕ 944, ಅಬ್ದುಲ್ ರೆಹಮಾನ್ 569, ಪ್ರಕಾಶ ಪಿಂಟೋ 527 ನೊಟಾ 1986ಕ್ಕೆ ಹೋಗಿದೆ.
ಬಿ.ಜೆ.ಪಿ. ಪಕ್ಷ 1994ರಲ್ಲಿ ಪ್ರಥಮ ಬಾರಿಗೆ ಡಾ. ಯು. ಚಿತ್ತರಂಜನ್ ಅವರು ಗೆಲುವು ಸಾಧಿಸುವ ಮೂಲಕ ಕರ್ನಾಟಕದ ವಿಧಾನ ಸಭೆಯಲ್ಲಿ ಬಿ.ಜೆ.ಪಿ. ಖಾತೆ ತೆರೆದಿದ್ದರು. ನಂತರ 1996 ಹಾಗೂ 2004ರಲ್ಲಿ ಶಿವಾನಂದ ನಾಯ್ಕ ಅವರು ಗೆಲುವು ಸಾಧಿಸುವ ಮೂಲಕ ಬಿ,ಜೆ.ಪಿ.ಯ ಸ್ಥಾನ ಉಳಿಸಿಕೊಂಡಿದ್ದರೆ 2009 ಹಾಗೂ 2013ರಲ್ಲಿ ಬಿ.ಜೆ.ಪಿ. ಭಟ್ಕಳ ವಿಧಾನ ಸಭಾ ಕ್ಷೇತ್ರವನ್ನು ಕಳೆದು ಕೊಂಡಿತ್ತು. 2018ರ ಚುನಾವಣೆಯಲ್ಲಿ
ಯುವ ನಾಯಕ ಸುನಿಲ್ ನಾಯ್ಕ ಅವರು ಮತ್ತೆ ಬಿ.ಜೆ.ಪಿ.ಗೆ ಕ್ಷೇತ್ರವನ್ನು ಗೆಲ್ಲಿಸಿಕೊಡುವ ಮೂಲಕ ಭಟ್ಕಳ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಬಿ.ಜೆ.ಪಿ. ವಿಧಾನ ಸೌಧ ಪ್ರವೇಶಿಸುವಂತೆ ಮಾಡಿದ್ದಾರೆ.
ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಬಿ.ಜೆ.ಪಿ.ಯ ಸುನಿಲ್ ನಾಯ್ಕ ಈ ಬಾರಿ ಕ್ಷೇತ್ರವನ್ನು ಬಿ.ಜೆ.ಪಿ. ಗೆ ಮತ್ತೆ ಒಲಿಸಿಕೊಳ್ಳಲು ಯಶಸ್ವೀಯಾಗಿದ್ದಾರೆ. ಭಟ್ಕಳದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಅವರ ಅಭಿಮಾನಿಗಳು ಹೆಚ್ಚಿದ್ದು ಸುನಿಲ್ ನಾಯ್ಕ ಅನಂತ ಕುಮಾರ್ ಅವರ ಆಯ್ಕೆಯಾಗಿದ್ದರಿಂದ ಹೆಚ್ಚಿನ ಮತ ಬರಲು ಕಾರಣವಾಯಿತಲ್ಲದೇ ಕರಾವಳಿಯಲ್ಲಿಯೇ ಮೋದಿ ಅಲೆಯಲ್ಲಿ ಕಮಲ ಅರಳಿದ್ದು ಭಟ್ಕಳದಲ್ಲಿ ಕೂಡಾ ಕಮಲಕ್ಕೆ ಮೋದಿಯೇ ನೀರೆದಿದ್ದು ಎನ್ನಲು ಅಡ್ಡಿಯಿಲ್ಲ.
ನನ್ನ ಗೆಲುವಿಗೆ ಅನಂತ್ ಕುಮಾರ್ ಆಶೀರ್ವಾದವೇ ಕಾರಣ: ನನ್ನ ಈ ಅಭೂತಪೂರ್ವ ಗೆಲುವಿಗೆ ಕೇಂದ್ರ ಸಚಿವ ನನ್ನ ರಾಜಕೀಯ ಗುರು ಅನಂತ್ ಕುಮಾರ್ ಹೆಗಡೆಯವರ ಆಶೀರ್ವಾದವೇ ಕಾರಣ ಎಂದು ವಿಜೇತ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲ ಜಾತಿ ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಕ್ಷೇತ್ರದ ಅಭಿವೃದ್ಧಿ ಸಾಧಿಸುವುದೇ ನನ್ನ ಮುಂದಿನ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.