ಭಟ್ಕಳ:ವಿವಿಧ ಇಲಾಖೆಗಳ ಜಂಟಿ ಆಶ್ರಯದಲ್ಲಿ ಆರೋಗ್ಯ ಶಿಬಿರ, ಟಿಎಸ್ ಪಿ ಕಾರ್ಯಕ್ರಮ
ಭಟ್ಕಳ: ಕರ್ನಾಟಕ ಸರಕಾರದ ಆಯುಷ್ ಇಲಾಖೆ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಜಿಲ್ಲಾ ಆಯುಷ್ ಇಲಾಖೆ ಉತ್ತರ ಕನ್ನಡ, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಜಾಲಿ ಇವುಗಳ ಸಂಯುಕ್ತ ಆಶ್ರಯದಲ್ಲಿ 2017-18ನೇ ಸಾಲಿನ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆ ಅಡಿಯಲ್ಲಿ ಆರೋಗ್ಯ ಶಿಬಿರ, ಟಿಎಸ್ಪಿ ಕಾರ್ಯಕ್ರಮ ಹಾಗೂ ಉಚಿತ ಆಯುಷ್ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಕೋಣಾರ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೋಣಾರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮತಿ ರಮೇಶ ಗೊಂಡ ಆಯುರ್ವೇದ ಚಿಕಿತ್ಸೆಯನ್ನು ಎಲ್ಲರೂ ಪಡೆದುಕೊಳ್ಳಬೇಕು ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲವಾದ್ದರಿಂದ ಹೆಚ್ಚು ಹೆಚ್ಚು ಜನತೆ ಚಿಕಿತ್ಸೆ ಪಡೆಯಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಉಪಾಧ್ಯಾಯ ಆಯುರ್ವೇದ ಔಷಧಿಗಳನ್ನು ಗಿಡಮೂಲಿಕೆಗಳಿಂದ ತಯಾರಿಸುವುದರಿಂದ ದೇಹದ ರೋಗಗಳನ್ನು ಗುಣಪಡಿಸುವ ಶಕ್ತಿ ಅವುಗಳಿಗಿದೆಯಲ್ಲದೇ ದೇಹವನ್ನು ಬಲಿಷ್ಠಗೊಳಿಸುತ್ತದೆ. ಆದರಿಂದ ಹೆಚ್ಚಿನ ಪ್ರಮಾಣದಲ್ಲಿ ರೋಗಗಳಿಗೆ ನಮ್ಮ ದೇಶಿಯ ಪದ್ದತಿ ಆಯುರ್ವೇದ ಔಷಧಿಗಳನ್ನು ನುರಿತ ಆಯುರ್ವೇದ ವೈದ್ಯರುಗಳಿಂದ ಪಡೆದುಕೊಂಡು ಧೀರ್ಘಾಯುಷ್ಯಗಳಾಗಿ ಬದುಕಬೇಕೆಂದು ಕರೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ . ಮೂರ್ತಿರಾಜ್ ಭಟ್ ಮಾತನಾಡಿ ಜನರು ಮೂಢನಂಬಿಕೆಗಳಿಗೆ ಮತ್ತು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವನ್ನು ಕಾಪಾಡಿಕೊಂಡರೆ ರೋಗ ಬರುವುದಿಲ್ಲಾ ಎಂದರು.
ಹಳ್ಳಿಗಳಲ್ಲಿ ಇರುವ ನಾಟಿ ವೈದ್ಯರು ತಾವು ನೀಡುವ ಔಷಧಿಯ ಮಾಹಿತಿಯನ್ನು ಜನರಿಗೆ ತಿಳಿಸಬೇಕು ಎಂದ ಅವರು ನಮ್ಮ ಭಾರತೀಯ ವೈದ್ಯ ಪದ್ದತಿಯ ಆಯುರ್ವೇದದ ದಿನಚರ್ಯೆ ಮತ್ತು ಋತುಚರ್ಯೆಗಳನ್ನು ಪಾಲಿಸಿದರೆ ಜೀವನ ಶೈಲಿಯಿಂದ ಬರುವ ರೋಗಗಳನ್ನು ತಡೆಗಟ್ಟಬಹುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿರಸಿ ಹಿತ್ಲಳ್ಳಿಯ ಆಯುಷ್ ವೈದ್ಯ ಡಾ. ಮಂಜುನಾಥ ಭಟ್ ಆಯುರ್ವೇದದಲ್ಲಿ ಇರುವ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸಿದರು. ರೋಗವನ್ನು ಸಂಪೂರ್ಣವಾಗಿ ಗುಣ ಪಡಿಸುವಲ್ಲಿ ಆಯುರ್ವೇದ ಪದ್ದತಿಯು ತುಂಬಾ ಉತ್ತಮವಾದದು. ಆಯುರ್ವೇದದ ದಿನಚರ್ಯೆ ಮತ್ತು ಋತುಚರ್ಯೆಯನ್ನು ಪಾಲಿಸಿದರೆ ರೋಗಗಳು ಬರುವುದಿಲ್ಲಾ ಎಂದೂ ಹೇಳಿದರು,
ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯರು ಭಾಗವಹಿಸಿ ಉಚಿತ ತಪಾಸಣೆ, ಚಿಕಿತ್ಸೆ ಮತ್ತು ಉಚಿತ ಔಷಧಿಯನ್ನು ನೀಡಿದರು,
ಹಿರಿಯ ಆರೋಗ್ಯ ನಿರೀಕ್ಷಕ ಈರಯ್ಯ ದೇವಡಿಗ ನಿರೂಪಿಸಿದರು. ಜಾಲಿ ಆಯುಷ್ ವೈದ್ಯ ಡಾ . ಕುಮಾರ ಮೊಗೇರ ವಂದಿಸಿದರು.