ಭಟ್ಕಳ: ತಾಲೂಕಿನ ವಿವಿಧ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಪೂರೈಸಲಾದ ಸಮವಸ್ತ್ರದ ಗುಣಮಟ್ಟ ಕಳಪೆಯಾಗಿದೆ ಎಂದು ತಾಪಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಸಭೆಯ ಮಧ್ಯೆ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯ ಪಾಶ್ರ್ವನಾಥ ಜೈನ್, ತೀರ ತೆಳ್ಳಗಾಗಿರುವ ಸಮವಸ್ತ್ರ ವಿದ್ಯಾರ್ಥಿಗಳಲ್ಲಿ ಮುಜುಗರವನ್ನುಂಟು ಮಾಡುತ್ತಿದೆ. ಇಲಾಖೆ ಈ ಸಮವಸ್ತ್ರವನ್ನು ವಾಪಸ್ಸು ಪಡೆದು ಉತ್ತಮ ಗುಣಮಟ್ಟದ ಬಟ್ಟೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜಿ, ಸಮವಸ್ತ್ರವನ್ನು ರಾಜ್ಯ ಸರಕಾರವೇ ಒದಗಿಸುತ್ತಿದ್ದು, ಇದರ ಬಗ್ಗೆ ನಾವೇನು ಮಾಡುವಂತಿಲ್ಲ. ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಭಟ್ಕಳ ಸರಕಾರಿ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ ಸದಸ್ಯ ವಿಷ್ಣು ದೇವಡಿಗ, ಆಸ್ಪತ್ರೆಯಲ್ಲಿ ಕೇವಲ 2 ಡಯಾಲಿಸೀಸ್ ಯಂತ್ರಗಳಿದ್ದು, ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ. ಕಳೆದ 4 ತಿಂಗಳುಗಳಿಂದ ರೋಗಿಗಳು ಡಯಾಲಿಸೀಸ್ ಮಾಡಿಸಿಕೊಳ್ಳಲಾಗದೇ ಹಿಂದಿರುಗುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಜರುಗಿಸಬೇಕು ಎಂದರು. ಮುಂದುವರೆದು ಮಾತನಾಡಿದ ಅವರು, ಪಹಣಿ ಪತ್ರಗಳಿಗಾಗಿ ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಹಸೀಲ್ದಾರ ಕಚೇರಿಯ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಇದನ್ನು ತಪ್ಪಿಸಲು ಗ್ರಾಮ ಮಟ್ಟದಲ್ಲಿ ಪಹಣಿ ಪತ್ರಗಳನ್ನು ಪೂರೈಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಕೃಷಿ ಚಟುವಟಿಕೆಗಳ ಬಗ್ಗೆ ಮಾತನಾಡಿದ ಸದಸ್ಯೆ ಜಯಲಕ್ಷ್ಮೀ ಗೊಂಡ, ಅಗತ್ಯ ಇರುವ ಸಮಯದಲ್ಲಿಯೇ ಮಳೆಯಾಗುತ್ತಿಲ್ಲ. ಆದ್ದರಿಂದ ಕೃಷಿ ಇಲಾಖೆ ಕಡಿಮೆ ಅವಧಿಯ ಬೆಳೆ ಹಾಗೂ ಭತ್ತದ ಬೀಜಗಳನ್ನು ಇಲ್ಲಿನ ರೈತರಿಗೆ ಪರಿಚಯಿಸಬೇಕು ಎಂದು ಹೇಳಿದರು. ಹದಗೆಟ್ಟು ಹೋಗಿರುವ ಗ್ರಾಮೀಣ ಭಾಗಗಳ ರಸ್ತೆಯ ಬಗ್ಗೆಯೂ ಸದಸ್ಯರು ಸಭೆಯ ಗಮನವನ್ನು ಸೆಳೆದರು. ತಾಪಂ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷೆ ರಾಧಾ ಅಶೋಕ ವೈದ್ಯ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಜಟ್ಟಪ್ಪ ನಾಯ್ಕ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಜಿ.ಎಮ್.ಮುರುಗೋಡ ಉಪಸ್ಥಿತರಿದ್ದರು.