ಭಟ್ಕಳ:ವಿದ್ಯಾರ್ಥಿಗಳ ಚಿಂತನೆಗಳು ಬದಲಾಗಬೇಕು. ಧನಾತ್ಮಕ ಚಿಂತನೆಗಳಿಂದ ಜೀವನವನ್ನು ಬದಲಾಯಿಸಲು ಸಾದ್ಯ ಎಂದು ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿಯ ಮುಖ್ಯಾಧ್ಯಾಪಕ ಪ್ರಶಾಂತ ಪಟಗಾರ ಹೇಳಿದರು.
ಅವರು ದಿ ನ್ಯೂ ಇಂಗ್ಲೀಷ್ ಪಿ.ಯು.ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ “ಸಾಧನಾ-2018” ಅನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿ ಹೊರಗಿನ ಆಕರ್ಷಣೆಗೆ ಒಳಗಾಗಿದ್ದು ಯಾವುದನ್ನು ಅನುಕರಣೆ ಮಾಡಬೇಕು ಎನ್ನುವುದನ್ನು ತಿಳಿಯದವನಾಗಿದ್ದಾನೆ. ಜೀವನದಲ್ಲಿ ಆದರ್ಶಗಳಿಲ್ಲದಿದ್ದರೆ ಪಡೆದ ಅಂಕಗಳಿಗೆ ಬೆಲೆಯಿಲ್ಲ ಎಂದು ಹೇಳಿದರು.
ಮುಖ್ಯ ಅಥಿತಿಗಳಾದ ಚಿತ್ರಾಪುರ ಶ್ರೀವಲ್ಲಿ ಶಾಲೆಯ ಮುಖ್ಯಾಧ್ಯಪಕಿ ಮಮತಾ ಭಟ್ಕಳ ಮಾತನಾಡುತ್ತಾ ಏಕಾಗೃತೆ ಮತ್ತು ಸಮಯದ ಸದುಪಯೋಗದಿಂದ ಸಾಧನೆ ಸಾದ್ಯ ಎಂದು ಹೇಳಿದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ ನಾಯಕ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ದ್ವಿತೀಯ ಪಿ.ಯು.ಸಿ ಕಲಾ ವಿಭಾಗದಲ್ಲಿ ಬೆನಕಾ ಮೊಗೇರ, ವಿಜ್ಞಾನ ವಿಭಾಗದಲ್ಲಿ ದಿವ್ಯಾ ಪ್ರಭು, ವಾಣಿಜ್ಯ (ಸ್ಟಾಟಿಸ್ಟಿಕ್ಸ್) ವಿಭಾಗದಲ್ಲಿ ಉದಯ ಪ್ರಭು, ವಾಣಿಜ್ಯ (ಕಂಪ್ಯೂಟರ್ ಸಾಯನ್ಸ್) ವಿಭಾಗದಲ್ಲಿ ಅಕ್ಷತಾ ನಾಯ್ಕ ಮತ್ತು ಮಹಾವಿದ್ಯಾಲಯಕ್ಕೆ ಚೈತ್ರಾ ಮಹಾಲೆ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಪಡೆದುಕೊಂಡರು.
ಪ್ರಾಂಶುಪಾಲ ವಿರೇಂದ್ರ ಶಾನಭಾಗ ಸ್ವಾಗತಿಸಿದರು, ಉಪನ್ಯಾಸಕಿ ಲೋಲಿಟಾ ರೋಡ್ರಿಗಸ್ ವರದಿ ವಾಚಿಸಿದರು, ವಿದ್ಯಾರ್ಥಿಗಳಾದ ಯೋಗೇಶ ಪೈ ಮತ್ತು ಸಹನಾ ಫೈ ನಿರೂಪಿಸಿದರು, ಗೌತಮ್ ಕಿಣಿ ವಂದಿಸಿದರು.