ಯಲ್ವಡಿಕವೂರ ವ್ಯಾಪ್ತಿಯ ವಿವಿಧೆಡೆ ಸರಕಾರಿ ಹಾಡಿ ಅತಿಕ್ರಮಣ ತೆರವು ಕಾರ್ಯ’
ಭಟ್ಕಳ: ಜಿಲ್ಲಾಧಿಕಾರಿಗಳಿಗೆ ವಾಟ್ಸಾಪ್ ಮೂಲಕ ನೀಡಲಾದ ದೂರಿನ್ವಯ ಗುರುವಾರದಂದು ತಹಸೀಲ್ದಾರ ಶಂಕರ ಗೌಡಿ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ತಾಲೂಕಿನ ಯಲ್ವಡಿಕವೂರ ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧ ಕಡೆಯ ಸರಕಾರಿ ಹಾಡಿ ಜಾಗದಲ್ಲಿನ ಜಮೀನನ್ನು ಪೊಲೀಸ್ ಭದ್ರತೆಯಲ್ಲಿ ಖುಲ್ಲಾ ಪಡಿಸಿದರು.
ಯಲ್ವಡಿಕವೂರು ಪಂಚಾಯತ ವ್ಯಾಪ್ತಿಯ ಸರ್ಪನಕಟ್ಟೆ ಗ್ರಾಮದ ಸರ್ವೇ ನಂ. 217/ಅ ರಲ್ಲಿನ ಕೋಣಾರ ರಸ್ತೆಯಲ್ಲಿ ನಾರಾಯಣ ವೆಂಕ್ಟಯ್ಯ ನಾಯ್ಕ ಎನ್ನುವವರು ಕಟ್ಟಡ ನಿರ್ಮಾಣಕ್ಕಾಗಿ 10 ಫಿಲ್ಲರ ನಿರ್ಮಿಸಿದ್ದು ಜೆಸಿಬಿ ಮೂಲಕ ತೆರವು ಕಾರ್ಯಚರಣೆ ಮಾಡಲಾಯಿತು. ಹಾಗೂ ಸರ್ಪನಕಟ್ಟೆ ಗ್ರಾಮದ ಹನುಮಂತ ನಾರಾಯಣ ನಾಯ್ಕ, ನಾಗಮ್ಮ ಸೋಮಯ್ಯ ನಾಯ್ಕ, ಮಂಜಪ್ಪ ಶನಿಯಾರ ನಾಯ್ಕ ಎನ್ನುವವರು 12 ಅಂಗಡಿ ಮಳಿಗೆಯನ್ನು ನಿರ್ಮಿಸಿದ್ದನ್ನು ಕುದ್ದು ಅಧಿಕಾರಿಗಳೇ ತೆರಳಿ ನೆಲಸಮ ಗೊಳಿಸಲಾಯಿತು.
ಇನ್ನು ಇದೇ ಪಂಚಾಯತ ವ್ಯಾಪ್ತಿಯ ಗೋಳಿಬಿಳ್ಳುರು ಗ್ರಾಮದ ಸರ್ವೇ ನಂ. 70ರಲ್ಲಿ ರವಿ ಮಾಸ್ತಪ್ಪ ನಾಯ್ಕ ಎನ್ನುವವರಿಗೆ ಸೇರಿದ ನಿರ್ಮಾಣ ಹಂತದಲ್ಲಿನ ಮನೆಯನ್ನು ಅಧಿಕಾರಿಗಳು ತೆರವುಗೊಳಿಸಿದರು.
ಈ ಹಿಂದೆ ಕಟ್ಟಡ ನಿರ್ಮಾಣ ಮಾಡದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸಾಕಷ್ಟು ಬಾರಿ ಎಚ್ಚರಿಸಿದ್ದು ಕ್ಯಾರೆ ಎನ್ನದೇ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿಲ್ಲವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ಕಾರ್ಯಚರಣೆಯಲ್ಲಿ ತಹಸೀಲ್ದಾರ ಶಂಕರ ಗೌಡಿ, ಕಂದಾಯ ಅಧಿಕಾರಿ ಗಣಪತಿ ಮೇತ್ರಿ, ಗ್ರಾಮಾಂತರ ಪೊಲೀಸ್ ಠಾಣಾ ಎಎಸೈ ಅಣ್ಣಪ್ಪ ಮೋಗೇರ, ಗ್ರಾಮ ಲೆಕ್ಕಾಧಿಕಾರಿಗಳಾದ ವಿಶ್ವನಾಥ ಗಾಂವಕ್ಕರ, ಅಣ್ಣಯ್ಯ ಲಮಾಣಿ, ಕೆ.ಶಂಭು, ಸಲ್ಮಾನ ಖಾನ್, ಮನೋಜ ಗಾಂಜೇಕರ ಸೇರಿದಂತೆ ಗ್ರಾಮ ಸಹಾಯಕರು ಇದ್ದರು.