ಭಟ್ಕಳ: ರಾ.ಹೆ.66ರ ಬದಿಯಲ್ಲಿ ತಾತ್ಕಲಿಕವಾಗಿ ನಿರ್ಮಿತಗೊಂಡಿರುವ ಅಂಗಡಿ, ತಳ್ಳಂಗಡಿ, ಬಾಕಡಗಳನ್ನು ತೆರವುಗೊಳಿಸುವಂತೆ ಕೋರಿ ಪೊಲೀಸ್ ಇಲಾಖೆಯಿಂದ ಭಟ್ಕಳ ಪುರಸಭೆಗೆ ಪತ್ರವೊಂದನ್ನು ಬರೆಯಲಾಗಿದೆ.
ಹೆದ್ದಾರಿಯಲ್ಲಿ ವಾಹನಗಳ ಓಡಾಟ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅಲ್ಲದೆ ವಾಹನ ದಟ್ಟಣೆಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದು ರಸ್ತೆ ಬದಿ ತಳ್ಳುಗಾಡಿ, ಹಾಗೂ ತಾತ್ಕಾಲಿಕ ಅಂಗಡಿಗಳು ಸಮಸ್ಯೆಯನ್ನು ಹುಟ್ಟಿಸುತ್ತಿವೆ ಅದಕ್ಕಾಗಿ ಪುರಸಭೆಯವರು ಇದನ್ನು ತೆರವುಗೊಳಿಸುವಂತೆ ಕ್ರಮಗೊಳ್ಳಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ನಗರ ವ್ಯಾಪ್ತಿಯ ಪುರವರ್ಗದ ಗಣೇಶ ನಗರ ದಿಂದ ತೆಂಗಿನಗುಂಡಿ ಕ್ರಾಸ್ ವರೆಗೆ ದಿನದಿಂದ ದಿನಕ್ಕೆ ರಸ್ತೆಬದಿ ಅಂಗಡಿಗಳು ಹುಟ್ಟಿಕೊಳ್ಳುತ್ತಿದ್ದು ನೂರಾರು ಮಂದಿ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆಯ ಮೇಲೆಯ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದಾರೆ ಇದರಿಂದಾಗಿ ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ. ಅಲ್ಲದೆ ರಸ್ತೆ ಬದಿ ಇರುವ ಅಂಗಡಿಗಳಿಂದಾಗಿ ಮುಂದೆ ಬರುವ ವಾಹನಗಳು ಕಾಣದೆ ಪ್ರಯಾಣಿಕರು ವಾಹನ ಚಾಲಕರು ತೊಂದರೆಗೀಡಾಗು ಸಂಭವ ಹೆಚ್ಚಾಗಿದ್ದು ಇದರಿಂದಾಗಿ ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
ರಸ್ತೆಬದಿ ವ್ಯಾಪರಸ್ಥರಿಗೆ ಮನವಿ: ಪೊಲೀಸ್ ಇಲಾಖೆಯಿಂದ ಪತ್ರ ದೊರೆತ ಕೂಡಲೇ ಕಾರ್ಯಪ್ರವೃತ್ತಗೊಂಡಿರುವ ಇಲ್ಲಿನ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾದಿಖ್ ಮಟ್ಟಾ, ಪುರಸಭೆಯ ಅಧಿಕಾರಿಗಳೊಂದಿಗೆ ಹೆದ್ದಾರಿಗುಂಟ ಹರಡಿಕೊಂಡಿರುವ ಅಂಗಡಿಕಾರರಲ್ಲಿ ತಮ್ಮ ತಮ್ಮ ಅಂಗಡಿ, ರಸ್ತೆ ಬದಿ ವ್ಯಾಪಾರವನ್ನು ಹೆದ್ದಾರಿಯಿಂದ ದೂರ ಇರುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಡಿ.ದೇವರಾಜ್, ಹಿರಿಯ ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋನಿ ಮತ್ತಿತರರು ಉಪಸ್ಥಿತರಿದ್ದರು.