ಭಟ್ಕಳ: ಭಟ್ಕಳದ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್ಡಿ) ಅಧ್ಯಕ್ಷರ ವಿರುದ್ಧ ನಡೆಸುತ್ತಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯದ ತಡೆಯಾಜ್ಞೆಯನ್ನು ರದ್ದುಗೊಳಿಸುವ ರಾಜ್ಯ ಉಚ್ಚನ್ಯಾಯಾಲಯ ಕೂಡಲೆ ಅವಿಶ್ವಾಸ ಗೊತ್ತುವಳಿ ಮಂಡನೆ ಪ್ರಕ್ರಿಯೆ ಪೂರ್ಣಗೊಳೀಸುವಂತೆ ಆದೇಶಿಸಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಬ್ಯಾಂಕಿನ ನಿರ್ದೇಶಕ ಮಂಡಳಿಯ ಎರಡು ಬಣಗಳ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತೆರೆಬಿದ್ದಂತಾಗಿದೆ.
ಬ್ಯಾಂಕಿನ ನಿರ್ದೇಶಕ ಈಶ್ವರ ನಾಯ್ಕ ಪರ ವಾದ ಮಂಡಿಸಿದ ನ್ಯಾಯವಾದಿ ನಾಗ ಪ್ರಸನ್ನ, ತಡೆಯಾಜ್ಞೆಗೆ ಮನವಿ ಸಲ್ಲಿಸಿದ್ದ ಪ್ರತಿ ವಾದಿಗಳು ಚುನಾವಣೆಗೆ ಸಂಬಂಧಿಸಿದಂತೆ ಮೊದಲು ನೀಡಿದ ನ್ಯಾಯಾಲಯದ ಆದೇಶದ ಬಗ್ಗೆ ಮಾಹಿತಿ ನೀಡಿಲ್ಲ. ಅಧ್ಯಕ್ಷರು ಬಹುಮತವನ್ನು ಕಳೆದುಕೊಂಡಿದ್ದು, ಕಳೆದ ಮೂರು ತಿಂಗಳಿನಿಂದ ಬ್ಯಾಂಕಿನ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಚುನಾವಣೆ ಘೋಷಣೆಯಾದ ನಂತರ ನ್ಯಾಯಾಲಯ ಮಧ್ಯೆ ಪ್ರವೇಶಿಸಿ ತಡೆಯಾಜ್ಞೆ ನೀಡಿರುವುದು ಸರಿಯಲ್ಲ ಎಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ ಅಧ್ಯಕ್ಷ ಸುನಿಲ್ ಬಿ. ನಾಯ್ಕ ಪರ ವಾದಕ್ಕಿಳಿದ ನ್ಯಾಯವಾದಿ ಎಸ್.ಕೆ.ಆಚಾರ್, ಕೆಲ ನಿರ್ದೇಶಕರು ಅಧ್ಯಕ್ಷರ ಆಡಳಿತ ದುರುಪಯೋಗ, ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಅವಿಶ್ವಾಸ ಮಂಡಿಸುವುದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ. ಆದರೆ ಅಧ್ಯಕ್ಷರ ವಿರುದ್ಧದ ಆರೋಪವನ್ನು ದೃಢಪಡಿಸುವ ಯಾವುದೇ ಸಾಕ್ಷ್ಯ ಇಲ್ಲ. ಗುತ್ತಿಗೆ ಕೆಲಸಕ್ಕಾಗಿ ಒತ್ತಡ ಹೇರಿ ಅದು ಫಲಿಸದೇ ಇದ್ದಾಗ ಅವಿಶ್ವಾಸದ ತಂತ್ರವನ್ನು ಹೂಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪೊನ್ನಣ್ಣ ಸಹಕಾರಿ ಇಲಾಖೆ ಪರ ವಾದ ಮಂಡಿಸಿ, ಅಧ್ಯಕ್ಷರು ಬಹುಮತವನ್ನು ಕಳೆದುಕೊಂಡಿದ್ದು, ಚುನಾವಣೆ ಅನಿವಾರ್ಯ ಎಂದು ವಿವರಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಎಸ್.ಎ.ನಝೀರ್, ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ನೀಡಿದರು. ಇದರೊಂದಿಗೆ ಅಧ್ಯಕ್ಷ ಸುನಿಲ್ ನಾಯ್ಕ ವಿರೋಧಿ ಬಣದಲ್ಲಿ ಚೇತರಿಕೆ ಕಂಡಿದ್ದು, ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಮತ್ತೆ ಅಖಾಡ ಸಿದ್ಧವಾದಂತಾಗಿದೆ.
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಹಕಾರಿ ಉಪನಿಬಂಧಕರು ಹಾಗೂ ಚುನಾವಣಾಧಿಕಾರಿ ಪಿ.ಎನ್.ನಾಯ್ಕ, ನ್ಯಾಯಾಲಯ ತಡೆಯಾಜ್ಞೆಯನ್ನು ತೆರವುಗೊಳಿಸಿ ಶೀಘ್ರವಾಗಿ ಚುನಾವಣೆ ನಡೆಸುವಂತೆ ಸೂಚಿಸಿದೆ. ಏನಿಲ್ಲವೆಂದರೂ ಅವಿಶ್ವಾಸ ಸಭೆಗೆ ಕನಿಷ್ಠ ೭ ದಿನಗಳ ಕಾಲಾವಕಾಶ ನೀಡಬೇಕಾಗುತ್ತದೆ. ಗುರುವಾರ ಈ ಸಂಬಂಧ ಅಗತ್ಯ ನಿರ್ಣಯವನ್ನು ಕೈಗೊಳ್ಳಲಾಗುವುದು. ಎಂದಿದ್ದಾರೆ.