ಭಟ್ಕಳದಲ್ಲಿ ಹೆದ್ದಾರಿಗೆ ಮತ್ತೆ ಹೊಸ ರೂಪ ನೀಡಿದ ಪ್ರಾಧಿಕಾರ, ಫ್ಲೈ ಓವರ್ರೂ ಇಲ್ಲ, ಅಂಡರ್ ಪಾಸೂ ಇಲ್ಲ; 30ಮೀ.ಗೆ ಸೀಮಿತ
ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗೆ ವೇಗ ದೊರಕಿರುವಂತೆಯೇ, ಭಟ್ಕಳ ಶಹರ ವ್ಯಾಪ್ತಿಯಲ್ಲಿ ನೂತನ ಹೆದ್ದಾರಿ ನಿರ್ಮಾಣಕ್ಕೆ ಪ್ರಾಧಿಕಾರ ಮತ್ತೆ ಹೊಸ ರೂಪ ನೀಡಿದೆ. ಈ ಹಿಂದೆ ನಿಗದಿಯಾಗಿದ್ದ 45ಮೀ. ಅಗಲವನ್ನು 30ಮೀ.ಗೆ ಕಡಿತಗೊಳಿಸಲಾಗಿದ್ದು, ಇದಕ್ಕೆ ವಿರೋಧ ಎದುರಾದಲ್ಲಿ ಹೊಸ ಕೆಲಸ ಕಾರ್ಯಗಳನ್ನು ಕೈ ಬಿಟ್ಟು ಈಗ ಇರುವ ಹೆದ್ದಾರಿಯನ್ನೇ ನಿರ್ವಹಣೆ ಮಾಡಿಕೊಂಡು ಮುಂದುವರೆಯುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
* ಭಟ್ಕಳ ಕ್ವಾಲಿಟಿ ಹೊಟೆಲ್ನಿಂದ ವೆಂಕಟಾಪುರ ಫ್ಯೂಯೆಲ್ ಸಿಟಿ ಪೆಟ್ರೊಲ್ ಪಂಪ್ವರೆಗಿನ 2.8ಕಿಮೀ. ವ್ಯಾಪ್ತಿಯಲ್ಲಿ 45ಮಿ. ಅಗಲದ ಬದಲಿಗೆ 30ಮೀ.ಗೆ ರಸ್ತೆಯನ್ನು ನಿರ್ಮಿಸಲಾಗುವುದು. * ಭಟ್ಕಳದಲ್ಲಿ ಫ್ಲೈ ಓವರ್, ಅಂಡರ್ ಪಾಸ್ ಪ್ರಸ್ತಾವನೆಗಳೂ ಮೂಲೆ ಸೇರಿವೆ. * ಭವಿಷ್ಯದ ಶಿರಾಲಿಯನ್ನು ಗಮನದಲ್ಲಿಟ್ಟುಕೊಂಡು ಹೆದ್ದಾರಿಯ ಅಗಲವನ್ನು ಯಾವುದೇ ಕಾರಣಕ್ಕೂ 30ಮಿ.ಗೆ ಇಳಿಸುವುದು ಬೇಡ ಎಂದು ಅಲ್ಲಿನ ಗ್ರಾಮ ಪಂಚಾಯತ ಹಾಗೂ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ. |
ಭಟ್ಕಳ ಕ್ವಾಲಿಟಿ ಹೊಟೆಲ್ನಿಂದ ವೆಂಕಟಾಪುರ ಫ್ಯೂಯೆಲ್ ಸಿಟಿ ಪೆಟ್ರೊಲ್ ಪಂಪ್ವರೆಗಿನ 2.8ಕಿಮೀ. ವ್ಯಾಪ್ತಿಯಲ್ಲಿ 45ಮಿ. ಅಗಲದ ಬದಲಿಗೆ 30ಮೀ.ಗೆ ರಸ್ತೆಯನ್ನು ಸೀಮಿತಗೊಳಿಸುವುದು. ಈ 30ಮೀ.ನಲ್ಲಿ ಎರಡೂ ಕಡೆ ತಲಾ 8.75ಮೀ.ನಂತೆ ದ್ವಿಪಥ ನಿರ್ಮಿಸಿ ಹೆದ್ದಾರಿ ಇಕ್ಕೆಲಗಳಲ್ಲಿ 1.25ಮೀ. ಅಳತೆಯ ಚರಂಡಿ, 3.25 ಅಳತೆಯ ಸರ್ವೀಸ್ ರೋಡ್, 1.25 ಅಳತೆಯ ಫೂಟ್ಪಾತ್ ನಿರ್ಮಿಸುವುದು. ಉಳಿದ 0.5ಮೀ.ನಲ್ಲಿಯೇ ದ್ವಿಭಾಜಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಿರಾಲಿಯಲ್ಲಿಯೂ ಹೆದ್ದಾರಿಯ ಅಗಲವನ್ನು 30ಮೀ.ಗೆ ಇಳಿಸಲಾಗಿದೆ. ಉಳಿದೆಡೆ ಯಥಾ ಪ್ರಕಾರ ಹೆದ್ದಾರಿಯ ಅಗಲ 45ಮೀ. ಇರಲಿದೆ. ಇದರಿಂದ ಭಟ್ಕಳ ಸಂಶುದ್ದೀನ್ ಸರ್ಕಲ್ನಲ್ಲಿ ಹೆಚ್ಚಿನ ಭೂಸ್ವಾಧಿನದ ಆತಂಕ ದೂರವಾಗಿದೆ. ಇದರೊಂದಿಗೆ ಭಟ್ಕಳದಲ್ಲಿ ಫ್ಲೈ ಓವರ್, ಅಂಡರ್ ಪಾಸ್ ಪ್ರಸ್ತಾವನೆಗಳೂ ಮೂಲೆ ಸೇರಿದ್ದು, ಮುಂದೆ ಪ್ರಾಧಿಕಾರ ಮತ್ತೆ ಯಾವ ಲೆಕ್ಕಾಚಾರ ಹಾಕುತ್ತದೆಯೋ ಕಾದು ನೋಡಬೇಕಾಗಿದೆ.
ಕೈಯಾಡಿಸಿದ ದೇಶಪಾಂಡೆ: ಹೆದ್ದಾರಿ ಅಗಲೀಕರಣದ ವಿಷಯದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಕೈಯಾಡಿಸಿದ್ದು, ಹೆದ್ದಾರಿ ಅಗಲೀಕರಣ ಹೊಸ ರೂಪ ಪಡೆಯಲು ಕಾರಣ ಎಂದು ಹೇಳಲಾಗಿದೆ. ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳ ಶಹರ ವ್ಯಾಪ್ತಿಯಲ್ಲಿ ವಿಶೇಷವಾಗಿ ಅಂಗಡಿಕಾರರು ದೊಡ್ಡ ಮಟ್ಟದ ನಷ್ಟ ಅನುಭವಿಸುವ ಬಗ್ಗೆ ಸಚಿವರ ಮೇಲೆ ಒತ್ತಡ ಹೇರಲಾಗಿತ್ತು. ಹೆದ್ದಾರಿ ಕಾಮಗಾರಿಯನ್ನು ತಡೆಯುವುದು ಅಸಾಧ್ಯವೆನ್ನಿಸಿದ ಹಿನ್ನೆಲೆಯಲ್ಲಿ ಕನಿಷ್ಠ ಹೆದ್ದಾರಿ ಅಗಲೀಕರಣವನ್ನು 45ಮೀ.ನಿಂದ 30ಮೀ.ಗೆ ಇಳಿಸಿ ಹಾನಿಯ ಪ್ರಮಾಣವನ್ನು ತಗ್ಗಿಸುವಂತೆಯೂ ಸಚಿವರಿಗೆ ವಿನಂತಿಸಲಾಗಿತ್ತು. ನಂತರ ಕೆಲ ಅಂಗಡಿಕಾರರು ದೇಶಪಾಂಡೆಯವರ ಶಿಫಾರಸ್ಸನ್ನು ಹಿಡಿದುಕೊಂಡೇ ಕೇಂದ್ರ ಹೆದ್ದಾರಿ ಅಭಿವೃದ್ಧಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದು, ಕೇಂದ್ರ ಸಚಿವರು ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶಿರಾಲಿಯಲ್ಲಿ ಜಟಾಪಟಿ: ತಾಲೂಕಿನ ಶಿರಾಲಿಯಲ್ಲಿ ಅಲ್ಲಿನ ಗ್ರಾಮ ಪಂಚಾಯತ ಹಾಗೂ ಸಾರ್ವಜನಿಕರು ಭವಿಷ್ಯದ ಶಿರಾಲಿಯನ್ನು ಗಮನದಲ್ಲಿಟ್ಟುಕೊಂಡು ಹೆದ್ದಾರಿಯ ಅಗಲವನ್ನು ಯಾವುದೇ ಕಾರಣಕ್ಕೂ 30ಮಿ.ಗೆ ಇಳಿಸುವುದು ಬೇಡ ಎಂದು ಪಟ್ಟು ಹಿಡಿದಿದ್ದು, ಜಟಾಪಟಿಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾಮಗಾರಿಗೆ 2 ಬಾರಿ ತಡೆಯೊಡ್ಡಲಾಗಿದ್ದು, ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಮಾತುಕತೆಯ ನಂತರವೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ನಮ್ಮ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸದೇ ಇದ್ದರೆ ಹೋರಾಟದ ಹಾದಿ ಹಿಡಿಯುವುದಾಗಿಯೂ ಎಚ್ಚರಿಸಲಾಗಿದೆ.