ಗೋ ಸಾಗಾಟ ಲಾರಿ ತಡೆದು ಹಲ್ಲೆ ಮಾಡಿದ ಪ್ರಕರಣ; ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಭಟ್ಕಳ: ಗೋವುಗಳನ್ನು ರಕ್ಷಣೆ ಮಾಡಲು ಹೋಗಿ ಲಾರಿ ಚಾಲಕರಿಗೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಬಂಧಿತರಾಗಿರುವ ಬಸ್ತಿಯ 13 ಜನರ ಆರೋಪಿಗಳನ್ನು ಇಂದು ಇಲ್ಲಿನ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ಕೋರ್ಟಿನಲ್ಲಿ ಹಾಜರು ಪಡಿಸಲಾಯಿತು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಎಲ್ಲಾ ಆರೋಪಿಗಳಿಗೂ ಕೂಡಾ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶ ನೀಡಿದರು.
ಘಟನೆ ಹಿನ್ನೆಲೆ: ಮೇ.21, 2018 ರಂದು ತಾಲೂಕಿನ ಮುರ್ಡೇಶ್ವರ ಬಸ್ತಿಯಲ್ಲಿ ದ.ಕ.ಜಿಲ್ಲೆಯ ಶಾಸಕರ ಸಹೋದರನಿಗೆ ಸೇರಿದ್ದು ಎನ್ನಲಾದ ಹೈನೋದ್ಯಮಕ್ಕಾಗಿ ಗುಜರಾತಿನಿಂದ ಎರಡು ಲಾರಿಗಳಲ್ಲಿ ಕೇರಳದ ಹಾಲಿನ ಡೈರಿಗೆ ಸಾಗಾಟವಾಗುತ್ತಿದ್ದ 14 ಗೋವುಗಳು ಹಾಗು 14 ಕರುಗಳನ್ನು ತಡೆದು, ಗೋವುಗಳನ್ನು ಹಾಗೂ ಕರುಗಳನ್ನು ಲಾರಿಯಿಂದ ಕೆಳಕ್ಕಿಳಿಸಿದ್ದಲ್ಲದೇ ಗೋವು ಸಾಗಾಟ ಮಾಡುತ್ತಿದ್ದ ಲಾರಿಯ ಚಾಲಕರಿಗೆ ಹಲ್ಲೆ ನಡೆಸಿದ್ದರು. ಚಾಲಕರಲ್ಲಿದ್ದ ಕೆಲವು ವಸ್ತುಗಳು ಕೂಡಾ ಇದೇ ಸಂದರ್ಭದಲ್ಲಿ ನಾಪತ್ತೆಯಾಗಿದ್ದವು. ಇದಕ್ಕೆ ಸಂಬಂಧ ಪಟ್ಟಂತೆ ಲಾರಿಯ ಚಾಲಕರು ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಪೊಲೀಸರು 13 ಜನರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದರು. ಅಂದಿನಿಂದ ಎಲ್ಲಾ 13 ಆರೋಪಿಗಳು ಕಾರವಾರದ ಜೈಲಿನಲ್ಲಿದ್ದು ಜಾಮೀನು ಅರ್ಜಿ ತಿರಸ್ಕøತಗೊಂಡಿತ್ತು. ಆ ಎಲ್ಲ 13 ಆರೋಪಿಗಳನ್ನು ಇಲ್ಲಿನ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ಕೋರ್ಟಿನಲ್ಲಿ ಹಾಜರುಪಡಿಸಲಾಗಿದ್ದು ನ್ಯಾಯಾಲವು ಆರೋಪಿಗಳಿಗೆ ನ್ಯಾಯಾಂಗ ಬಂಧವನ್ನು ವಿಸ್ತರಿಸಿ ಆದೇಶಿಸಿದ್ದಾರೆ.