ರಾಜಕೀಯ ಒತ್ತಡಕ್ಕೆ ಮಣಿಯದ ಭಟ್ಕಳ ಪೊಲೀಸರು
ಭಟ್ಕಳ ಪುರಸಭೆ ಕಟ್ಟಡಕ್ಕೆ ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ, ದೊಂಬಿ, ದರೋಡೆ ಪ್ರಕರಣ ಇದುವರೆಗೆ ೧೩ ಜನರ ಬಂಧನ
ಭಟ್ಕಳ: ಯಾವುದೇ ಕಾರಣಕ್ಕೂ ಇಲ್ಲಿನ ಬಿಜೆಪಿ ಮುಖಂಡ ಕಳೆದ ಬಾರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಲನ್ನು ಕಂಡ ಗೋವಿಂದ ನಾಯ್ಕ ರನ್ನು ಬಂಧಿಸಕೂಡದು ಎಂದು ಸಂಸದೆ ಶೋಭಾ ಕರಂದ್ಲಾಜೆ ಇಲ್ಲಿನ ಡಿವೈಎಸ್ಪಿ ಶಿವಕುಮಾರ್ ಗೆ ತಾಕೀತು ಮಾಡಿದ ಬೆನ್ನಲ್ಲೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದ ಪೊಲೀಸರು ಹನುಮಾನ ನಗರದ ಗೋವಿಂದ ನಾಯ್ಕ ರನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದ್ದು ನ್ಯಾಯ್ಯಾಲಯದ ಮುಂದೆ ಹಾಜರು ಪಡಿಸಿದ್ದು ನ್ಯಾಯಾಲಯ ವರನ್ನು ಅಕ್ಟೋಬರ್ ೩ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಅಲ್ಲದೆ ಆಸರಕೇರಿ ಕೃಷ್ಣ ನಾಯ್ಕ, ಮಂಜುನಾಥ್ ನಾಯ್ಕ ಜಾಲಿ, ಹಾಗೂ ಆನಂದ ನಾಯ್ಕ ರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಭಟ್ಕಳದಲ್ಲಿ ಪುರಸಭೆ ಅಂಗಡಿ ಕಬ್ಜಾ ಪಡೆಯುವ ಸಂದರ್ಭದಲ್ಲಿ ಅಂಗಡಿಕಾರನೊಬ್ಬ ಸೀಮಿಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನು ಬಲವಾಗಿ ಪ್ರತಿರೋಧಿಸಿ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಸೇರಿ ಪುರಸಭೆ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸುವುದರ ಮೂಲಕ ಪುರಸಭೆ ಅಪಾರ ನಷ್ಟವನ್ನುಂಟು ಮಾಡಿದ್ದರು. ಅಲ್ಲದೆ ಕರ್ತವ್ಯದಲ್ಲಿದ್ದ ಪೊಲೀಸರನ್ನು ಎಳೆದಾಡಿ ಅವರ ಹಲ್ಲೆಗೂ ಮುಂದಾಗಿದ್ದರು ಎಂದು ನಗರಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.
ಈ ದೂರಿನ ಹಿನ್ನೆಲೆಯಲ್ಲಿ ಪ್ರತಿಭಟನೆ ಹಾಗೂ ಕಲ್ಲುತೂರಾಟದ ದೃಶ್ಯವಳಿಯನ್ನು ಮುಂದಿಟ್ಟುಕೊಂಡಿರುವ ಪೊಲೀಸರು ಸುಮಾರು ೬೪ಕ್ಕೂ ಹೆಚ್ಚು ಕಲ್ಲು ತೂರಾಟಗಾರರ ಮೇಲೆ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಆರೋಪಿಗಳಿಗಾಗಿ ಬೇಟೆ ನಡೆಸಿದ ಪೊಲೀಸರು ಇದುವರೆಗೂ ೧೩ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಭಟ್ಕಳಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಡಿವೈಎಸ್ಪಿ ಶಿವಕುಮಾರನ್ನು ಠಾಣೆಯಲ್ಲಿ ಭೇಟಿಯಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದೀರಿ. ಅದನ್ನು ಕೈಬಿಡಬೇಕು. ಇಲ್ಲಿಯವರೆಗೆ ಬಂಧನ ಮಾಡಿದ ಕಾರ್ಯಕರ್ತರ ಮೇಲೆ ಸಣ್ಣಪುಟ್ಟ ಕೇಸು ದಾಖಲಿಸಬೇಕು. ಮುಖಂಡ ಗೋವಿಂದ ನಾಯ್ಕನನ್ನು ಯಾವುದೇ ಕಾರಣಕ್ಕೂ ಬಂಧಿಸಬಾರದು ಒಂದು ವೇಳೆ ಬಂಧಿಸಿದರೆ ಪರಿಣಾಮ ನೆಟ್ಟಗಿರಲ್ಲ ನಾನೇ ಸ್ವತಃ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದೂ ತಾಕೀತು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಎಸ್ಪಿ ಶಿವಕುಮಾರ್, ಕಳೆದ ಒಂದು ವರ್ಷದಿಂದ ನಾವು ಬಿಜೆಪಿಯವರಿಗೆ ಸಹಕರಿಸುತ್ತ ಬಂದಿದ್ದೇವೆ. ಕಳೆದ ಗುರುವಾರ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನಮ್ಮ ಸಿಬ್ಬಂಧಿಗಳ ಮುಬೈಲ್ , ಕ್ಯಾಮರಾವನ್ನು ಕಿತ್ತುಕೊಂಡಿದ್ದಾರೆ ಇದರ ದಾಖಲೆಯೂ ನಮ್ಮ ಬಳಿ ಇದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಸಂಸದರ ಬೆದರಿಕೆಯ ಮಾತುಗಳಿಗೆ ಮಣಿಯದ ಪೊಲೀಸರು ಮಂಗಳವಾರ ರಾತ್ರಿಯೊಳಗೆ ಗೋವಿಂದ ನಾಯ್ಕ, ಕೃಷ್ಣ ನಾಯ್ಕ, ಮಂಜುನಾಥ್ ನಾಯ್ಕ ಜಾಲಿ, ಹಾಗೂ ಆನಂದ ನಾಯ್ಕ ರನ್ನು ಬಂಧಿಸಿದ್ದು ಇದುವರೆಗೂ ಬಂಧಿತರ ಸಂಖ್ಯೆ ೧೩ಕ್ಕೇರಿದೆ.