ಪುರಸಭೆಯಿಂದ ಬೀದಿಬದಿ ವ್ಯಾಪರಸ್ಥರ ತೆರವು
ಭಟ್ಕಳ: ನಗರದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ವಾಹನ ಓಡಾಟಕ್ಕೂ ತೊಂದರೆಯಾಗುವಂತೆ ಹಾಕಿಕೊಂಡಿದ್ದ ಬೀದಿ ಬದಿಯ ವ್ಯಾಪಾರಿಗಳ ಹಲವು ಟೆಂಟ್ಗಳನ್ನು ಹಾಗೂ ಸಾಮಗ್ರಿಗಳನ್ನು ಪುರಸಭೆಯ ಅಧಿಕಾರಿಗಳು ತೆರವುಗೊಳಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಹೆದ್ದಾರಿಯ ಪಕ್ಕದಲ್ಲಿ ಕಳೆದ ಹಲವಾರು ತಿಂಗಳಿನಿಂದ ರಸ್ತೆ ಬದಿಯ ವ್ಯಾಪಾರಿಗಳಿಂದ ತೀವ್ರ ತೊಂದರೆಯಾಗುತ್ತಿತ್ತು. ಈ ಹಿಂದೆ ಹಲವು ಬಾರಿ ಪುರಸಭೆ ಎಚ್ಚರಿಸಿದ್ದರೂ ಕೂಡಾ ವ್ಯಾಪಾರಿಗಳು ಖಾಯಂ ಠಿಕಾಣಿ ಹೂಡಿದ್ದರಿಂದ ವಾಹನ ಓಡಾಟಕ್ಕೆ, ರಸ್ತೆ ಪಕ್ಕದಲ್ಲಿ ವಾಹಲ ನಿಲುಗಡೆಗೆ ತೀವ್ರ ತೊಂದರೆಯಾಗಿತ್ತು. ಅನೇಕ ಅಪಘಾತಗಳೂ ಕೂಡಾ ಸಂಭವಿಸಿದ್ದನ್ನು ಅನುಸರಿಸಿ ಪುರಸಭೆ ಎಲ್ಲಾ ಬೀದಿ ಬದಿಯ ವ್ಯಾಪಾರಿಗಳು ತೆರವುಗೊಳಸಬೇಕು ಎಂದು ಹೇಳಿತ್ತು.
ಹಲವು ಅಂಗಡಿಗಳನ್ನು ತೆರವುಗೊಳಿಸಿದ್ದರೂ ಇನ್ನೂ ಹಲವರು ಅಲ್ಲಿಯೇ ಇರುವುದರಿಂದ ಬೆಳಿಗ್ಗೆಯೇ ಕಾರ್ಯಾಚರಣೆಗಿಳಿದ ಪುರಸಭಾ ಅಧಿಕಾರಿಗಳು, ಪೌರ ಕಾರ್ಮಿಕರು, ಹಲವು ಕಡೆಗಳಲ್ಲಿ ರಸ್ತೆ ಪಕ್ಕಕ್ಕೆ ಇಟ್ಟಿರುವ ಸಾಮಗ್ರಿಗಳನ್ನು ವಶಪಡಿಸಿಕೊಂಡರು.
ವಿರೋಧ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಪಕ್ಕಾ ಟೆಂಟ್ ಹಾಕಿ ವ್ಯಾಪಾರ ಮಾಡುತ್ತಿದ್ದವರನ್ನು ಎಬ್ಬಿಸಲು ಪುರಸಭೆ ಅಧಿಕಾರಿಗಳು ಹಾಗೂ ಸ್ವತಹ ಪುರಸಭಾ ಅಧ್ಯಕ್ಷ ಸಾಧಿಕ್ ಮಟ್ಟಾ ಅವರು ಮುಂದಾಗಿರುವುದಕ್ಕೆ ಕೆಲವು ನಾಗರೀಕರು ವಿರೋಧ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಹೆದ್ದಾರಿ ಪಕ್ಕದಲ್ಲಿ ಖಾಯಂ ಠಿಕಾಣಿ ಹೂಡಿದವರನ್ನು ಎಬ್ಬಿಸಲೂ ಇವರು ತಕರಾರು ತೆಗಿದ್ದನ್ನು ಪ್ರಶ್ನಿಸಿದ ಪೌರಕಾರ್ಮಿಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಾರ್ವಜನಿಕ ಆಸ್ತಿಯಲ್ಲಿ ವಾಹನ ಓಡಾಟಕ್ಕೆ ತೊಂದರೆಯಾಗುತ್ತಿರುವುದನ್ನು ಕಂಡೂ ಕೂಡಾ ಖುಲ್ಲಾ ಪಡಿಸುವುದಕ್ಕೆ ತಕರಾರು ಮಾಡುವುದು ಸರಿಯಲ್ಲ ಎಂದು ಅವರಿಗೆ ಸಮಜಾಯಿಷಿ ನೀಡಿದ್ದು ಕಂಡು ಬಂತು.
ಸಾಗರ ರಸ್ತೆಯಲ್ಲು ಅತಿಕ್ರಮಣ: ಶಂಶುದ್ಧೀನ್ ಸರ್ಕಲ್ ನಿಂದ ಆರಂಭವಾಗುವ ಸಾಗರ ರಸ್ತೆಯಲ್ಲಿ ಕೂಡಾ ರಸ್ತೆಯನ್ನೇ ಕಬಳಿಸಿ ಕಂಬಗಳನ್ನು ಹಾಕಿ ತಾತ್ಕಾಲಿಕ್ ಶೆಡ್ ಮಾಡಿಕೊಂಡು ಅತಿಕ್ರಮಣ ಮಾಡಿದ್ದು ದಿನಾಲೂ ಓಡಾಡುವ ಸಾವಿರಾರು ವಿದ್ಯಾರ್ಥಿಗಳಿಗೆ ಇಲ್ಲಿ ತೊಂದರೆಯಾಗುತ್ತಿದ್ದು ತಕ್ಷಣ ಇಲ್ಲಿಯೂ ಖುಲ್ಲಾ ಮಾಡಬೇಕು ಎನ್ನುವ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ. ಸಾಗರ ರಸ್ತೆಯಿಂದ ಆನಂದ ಆಶ್ರಮ ಶಾಲೆಯ ತನಕ ದಿನಾಲೂ ಸಾವಿರಾರು ವಿದ್ಯಾರ್ಥಿಗಳು ಓಡಾಡುವುದಕ್ಕೆ ತೊಂದರೆಯಾಗುವುದನ್ನು ಪರಿಗಣಿಸಿ ಈ ಹಿಂದಿನ ಶಾಸಕ ಮಂಕಾಳ ವೈದ್ಯ ಅವರು ದ್ವಿಪದ ರಸ್ತೆಯನ್ನು ನಿರ್ಮಿಸಿ, ಪಾದಾಚಾರಿಗಳಿಗೆ ಫುಟ್ ಪಾತ್ ನಿರ್ಮಾಣ ಮಾಡಲು ಕೂಡಾ ಮಂಜೂರಿ ಮಾಡಿದ್ದರು. ದ್ವಿಪದ ರಸ್ತೆಯಾಗುತ್ತಲೇ ರಸ್ತೆಯ ಪಕ್ಕದಲ್ಲಿಯೇ ಟೆಂಟ್ಗಳನ್ನು ಕಟ್ಟಿ ವಿದ್ಯಾರ್ಥಿಗಳೂ ಮತ್ತೆ ರಸ್ತೆಯ ಮೇಲೆಯೇ ನಡೆಯುವುದು ಅನಿವಾರ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಮಾತು ಕೇಳಿ ಬಂದಿದೆ.