• ಪತ್ರಿಕಾಗೋಷ್ಟಿಯಲ್ಲಿ ಮೊಗೇರ್ ಸಮಾಜದ ಮುಖಂಡ ಕೆ.ಎಂ.ಕರ್ಕಿ
ಭಟ್ಕಳ: ಪರಿಶಿಷ್ಠ ಜಾತಿಗೆ ಸೇರಿದ ಮೊಗೇರ್ ಸಮಾಜವನ್ನು ಕಳೆದ ಒಂದು ದಶಕದಿಂದ ತಡೆಹಿಡಿಯಲಾಗಿದ್ದು ಈ ಸಮಾಜಕ್ಕೆ ಸಿಗಬೇಕಾಗಿದ್ದ ನ್ಯಾಯಯುತ ಬೇಡಿಕೆಯನ್ನು ಆಗ್ರಹಿಸಿ ಆ.13 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಭಟ್ಕಳ ತಾಲೂಕು ಮೊಗೇರ್ ಸಮಾಜದ ಅಧ್ಯಕ್ಷ ಕೆ.ಎಂ.ಕರ್ಕಿ ತಿಳಿಸಿದ್ದಾರೆ.
ಅವರು ಸೋಮವಾರ ಇಲ್ಲಿನ ಸತ್ಕಾರ್ ಹೊಟೇಲ್ ನಲ್ಲಿ ಪತ್ರಿಕಾಗೋಷ್ಟಿಯನ್ನು ನಡೆಸಿದ್ದು ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲಾಗುವುದು ಎಂದರು.
ಮೊಗೇರ್ ಸಮಾಜಕ್ಕೆ ಪ.ಜಾ ಪ್ರಮಾಣ ಪತ್ರ ನೀಡಿಕೆ ಸಂಬಂಧ ದೇಶದ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ರಾಷ್ಟ್ರೀಯ ಪರಿಶಿಷ್ಠ ಜಾತಿ ಆಯೋಗದ ನಿರ್ಣಯವನ್ನು ಒತ್ತಿ ಹೇಳಲಾಗಿದ್ದು ಕರ್ನಾಟಕ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದೆ. ಆದರೆ ಇಲ್ಲಿಯ ತನಕ ತೀರ್ಪನ್ನು ಅನುಷ್ಠಾನಗೊಳಿಸಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಮೀನಾಮೀಷ ಎಣಿಸುತ್ತಿದ್ದು ಇದರಿಂದಾಗಿ ಮೊಗೇರ್ ಸಮಾಜ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ ಎಂದ ಅವರು ಕಳೆದ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಅಂದಿನ ಅಡ್ವಕೇಟ್ ಜನರಲ್ ಮೊಗೇರ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಸರ್ಕಾರಕ್ಕೆ ಅಭಿಪ್ರಾಯವನ್ನು ತಿಳಿಸಿದ್ದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಇದನ್ನು ನಿರ್ಲಕ್ಷಿಸಿ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಈ ನಿಟ್ಟಿನಲ್ಲಿ ಆಗಷ್ಟ್ 13 ರಂದು ತಾಲೂಕಿನ ಮೊಗೇರ್ ಸಮಾಜದ ಸುಮಾರು 5000ಕ್ಕೂ ಮಂದಿ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಭಾಸ್ಕರ್ ಮೊಗೇರ್, ಪುಂಡಲಿಕ್ ಹೆಬಳೆ, ಅಣ್ಣಪ್ಪ ಮೊಗೇರ್ ಮುಂತಾದವರು ಉಪಸ್ಥಿತರಿದ್ದರು.