ತಹಸಿಲ್ದಾರ್ ಕಚೇರಿ ಹಾಗೂ ನೆಮ್ಮದಿ ಕೇಂದ್ರಕ್ಕೆ ಶಾಸಕ ಸುನಿಲ್ ನಾಯ್ಕ ದಿಢೀರ್ ಭೇಟಿ
ಭಟ್ಕಳ: ಇಲ್ಲಿನ ತಹಸಿಲ್ದಾರ್ ಕಚೇರಿ ಆವರಣದಲ್ಲಿರುವ ನೆಮ್ಮದಿ ಕೇಂದ್ರಕ್ಕೆ ಶಾಸಕ ಸುನಿಲ್ ನಾಯ್ಕ ದಿಢೀರ್ ಬೇಟಿ ನೀಡುವುದರ ಮೂಲಕ ನೆಮ್ಮದಿ ಕೇಂದ್ರದ ಸಿಬ್ಬಂದಿಗಳ ಚಳಿಯನ್ನು ಬಿಡಿಸಿದ ಘಟನೆ ಗುರುವಾರ ನಡೆದಿದೆ.
ನೆಮ್ಮದಿ ಕೇಂದ್ರದ ಕುರಿತಂತೆ ಸಾರ್ವಜನಿಕರು ಹಲವಾರು ಬಾರಿ ಶಾಸಕರನ್ನು ದೂರಿದ ಹಿನ್ನಲೆಯಲ್ಲಿ ಈ ದಿಢೀರ್ ಬೇಟಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ, ಸಾರ್ವಜನಿಕರ ಕೆಲಸಗಳು ವಿಳಂಬಿತವಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ನೆಮ್ಮದಿ ಕೇಂದ್ರ, ತಹಸಿಲ್ದಾರ್ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ತಹಸಿಲ್ದಾರ ಕಚೇರಿಯಲ್ಲಿ ತಹಸಿಲ್ದಾರ್, ಉಪ ತಹಸಿಲ್ದಾರ್ ಹಾಗೂ ಅನೇಕ ಸಿಬಂದ್ಧಿ ವರ್ಗ ಕಚೇರಿಯಲ್ಲಿ ಸರಿಯಾದ ಸಮಯಕ್ಕೆ ಹಾಜರಾಗದೆ ಇರುವ ಕುರಿತು ನನ್ನ ಗಮನಕ್ಕೆ ಬಂದಿದ್ದು ಈ ಕುರಿತು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದ್ದೇನೆ. ಅವರು ಒಂದು ವಾರದೊಳಗೆ ಎಲ್ಲ ಸರಿಯಾಗುವಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾಗಿ ತಿಳಿಸಿದರು. ಹುಚ್ಚು ನಾಯಿ ಕಡಿತಕ್ಕೆ ಆಸ್ಪತ್ರೆಯಲ್ಲಿ ಔಷಧ ಲಭ್ಯವಿದೆ. ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಪುರಸಭೆ ಅಧಿಕಾರಿಗಳಿಗೆ ಅವಶ್ಯಕ ಕ್ರಮ ಜರಗಿಸಲು ತಿಳಿಸಿದ್ದೇನೆ. ಮರಳು(ರೇತಿ) ಸಮಸ್ಯೆ ಕುರಿತಂತೆ ಮುಖ್ಯಮಂತ್ರಿ ಕುಮಾರ್ ಸ್ವಾಮಿಯವರ ಗಮನಕ್ಕೆ ತಂದಿದ್ದೇನೆ. ಮುಂದಿನಗಳಲ್ಲಿ ರೇತಿ(ಮರಳು ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಮಂಡಳ ಅಧ್ಯಕ್ಷ ರಾಜೇಶ್ ನಾಯ್ಕ, ಮುಖಂಡರಾದ ಕೃಷ್ಣ ನಾಯ್ಕ್ ಆಸಾರಕೇರಿ, ಸುಬ್ರಾಯ ದೇವಾಡಿಗ, ಭಾಸ್ಕರ್ ದೈಮನೆ, ಹನುಮಂತ್ ನಾಯ್ಕ, ಮೋಹನ್ ನಾಯ್ಕ, ಲಕ್ಷ್ಮೀ ನಾರಾಯಣ ನಾಯ್ಕ ಮತ್ತಿತರರು ಉಪಸ್ಥಿತಿದ್ದರು.