ಭಟ್ಕಳ: ಪುರಸಭೆ ವಾಣಿಜ್ಯ ಮಳಿಗೆ ವ್ಯಾಪಾರಿ ಆತ್ಮಹತ್ಯೆಗೆ ಯತ್ನ; ಆಕ್ರೋಷಿತರಿಂದ ಕಲ್ಲುತೂರಾಟ
· ಭಟ್ಕಳ ಉದ್ವಿಗ್ನ, ಶಾಲಾಕಾಲೇಜು ಬಂದ್, ಜಿಲ್ಲಾಧಿಕಾರಿ ಭೇಟಿ
ಭಟ್ಕಳ: ಭಟ್ಕಳ ಪುರಸಭೆ ವ್ಯಾಪ್ತಿಯ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾದ ವೇಳೆ ವ್ಯಾಪಾರಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ವಿಗ್ವ ವಾತಾವರಣ ನಿರ್ಮಾಣವಾಗಿದೆ.
ಅಂಗಡಿಗಳನ್ನು ಖಾಲಿ ಮಾಡಿ ಬೀಗ ಹಾಕಲು ಪುರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಬೆಳಗ್ಗೆ ೪.೩೦ಕ್ಕೇ ಕಚೇರಿಗೆ ಬಂದಿರುವುದನ್ನು ಹಾಗೂ ಕೆಲವು ಅಂಗಡಿಗಳಿಗೆ ಬೀಗ ಹಾಕಿರುವುದನ್ನು ಕಂಡ ಈತ ತಕ್ಷಣ ತಮ್ಮ ಅಂಗಡಿಯಲ್ಲಿಯೇ ಇದ್ದ ಸೀಮೆ ಎಣ್ಣೆ ಹಾಗೂ ಕತ್ತಿಯನ್ನು ಹಿಡಿದುಕೊಂಡು ಪುರಸಭಾ ಕಚೇರಿಗೆ ತೆರಳಿದ್ದಾರೆ. ಅಲ್ಲಿದ್ದ ಕೆಲವರು ತಡೆಯಲು ಬಂದರಾದರೂ ಬೆದರಿಸಿದ ಈತ ಅವರ ಎದುರಿನಲ್ಲಿಯೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ವಿಷಯ ತಿಳಿದು ಈತನ ಸಹೋದರ ಧಾವಿಸಿ ಬಂದು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದನಾದರೂ ಆಗಲೇ ದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು ಎನ್ನಲಾಗಿದ್ದು ರಕ್ಷಣೆಗೆ ಧಾವಿಸಿದ ಈಶ್ವರ ನಾಯ್ಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಅಂಗಡಿಗಳ ತೆರವು ಕ್ರಮವನ್ನು ವಿರೋಧಿಸಿ ಹಾಗೂ ರಾಮಚಂದ್ರ ನಾಯ್ಕರ ಆತ್ಮಹತ್ಯೆ ಯತ್ನವನ್ನು ಖಂಡಿಸಿ ನಗರದಲ್ಲಿ ವ್ಯಾಪಾರಿಗಳು ಬಂದ್ ಮಾಡಿದ್ದಾರೆ. ಕೆಲವೆಡೆ ಟಯರ್ಗಳಿಗೆ ಬೆಂಕಿ ಹಚ್ಚಲಾಗಿದೆ. ಕಲ್ಲು ತೂರಾಟ ಕೂಡಾ ನಡೆದಿದೆ ಎಂದು ತಿಳಿದುಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ನಗರದ ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದೆ.
ನಗರದಲ್ಲಿರುವ ಭಟ್ಕಳ ಪುರಸಭಾ ಅಧೀನದ ೧೦೬ ಮಳಿಗೆಗಳು ಇತ್ತೀಚೆಗೆ ಹರಾಜಾಗಿತ್ತು. ಈ ಪೈಕಿ ಹರಾಜು ಆಗಿದ್ದರೂ ತೆರವುಗೊಳಿಸಲು ಒಪ್ಪದ ೩೪ ಅಂಗಡಿಗಳನ್ನು ತೆರವುಗೊಳಿಸಲು ನಿಗದಿಪಡಿಸಿದ್ದ ಅವಧಿ ಮುಗಿದಿದ್ದ ಕಾರಣ ಅವುಗಳನ್ನು ತೆರವುಗೊಳಿಸಲು ಇಂದು ಪುರಸಭಾ ಅಧಿಕಾರಿಗಳು ಆಗಮಿಸಿದ್ದರು. ಇಂದು ಬೆಳಗ್ಗೆ ೫ ಗಂಟೆ ಸುಮಾರಿಗೆ ಅಂಗಡಿಗಳನ್ನು ತೆರವುಗೊಳಿಸಲು ಪುರಸಭಾ ಮುಖ್ಯಾಧಿಕಾರಿಯ ನೇತೃತ್ವದಲ್ಲಿ ತಂಡವು ಆಗಮಿಸಿತ್ತು. ಪೊಲೀಸ್ ರಕ್ಷಣೆಯೊಂದಿಗೆ ಆಗಮಿಸಿದ ತಂಡ ತೆರವು ಕಾರ್ಯಾಚರಣೆಗೆ ಸಿದ್ಧವಾಗುತ್ತಿತ್ತು. ಈ ವೇಳೆ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ರಾಮಚಂದ್ರ ನಾಯ್ಕ ಅಸರಕ್ಕೇರಿ ಒಮ್ಮೆಲೆ ಮೈಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪರಿಸರದ ಅಂಗಡಿಗಳು ಮುಚ್ಚಲ್ಪಟ್ಟಿವೆ. ಪುರಸಭೆ ಕಾರ್ಯಾಲಯದ ಮೇಲೆ ಕಲ್ಲು ತೂರಾಟ ಕೂಡಾ ನಡೆದಿದ್ದು ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಪರಿಸ್ಥಿತಿಯ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಸಾರಲಾಗಿದೆ.
ಘಟನೆಯ ಹಿನ್ನೆಲೆ: ಪುರಸಭೆಯ ೧೫೦ ಕ್ಕೂ ಅಧಿಕ ಅಂಗಡಿ ಮಳಿಗೆಗಳಲ್ಲಿ ೧೦೨ ಅಂಗಡಿಗಳಿಗೆ ಕಳೆದ ವರ್ಷ ಅಗಷ್ಟ ೨೦, ೨೦೧೬ ರಂದು ಅಂಗಡಿ ಕಬಜಾ ಪಡೆಯದೇ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಹರಾಜು ಪ್ರಕ್ರಿಯೆಯಲ್ಲಿ ಕೆಲವು ಅಂಗಡಿಕಾರರು ಭಾಗವಹಿಸಿ ಅಂಗಡಿಗಳನ್ನು ಹೆಚ್ಚಿನ ಭಾಡಿಗೆಗೆ ಪಡೆದಿದ್ದಾರೆ, ಕೆಲವರು ಹರಾಜಿನಲ್ಲಿ ಭಾಗವಹಿಸಿದ್ದರೂ ೧೦೦, ೧೦೦೦ ಪಟ್ಟು ಭಾಡಿಗೆ ಹೆಚ್ಚಾಗಿದ್ದರಿಂದ ಪಡೆಯಲು ಸಾಧ್ಯವಾಗಿಲ್ಲವಾಗಿತ್ತು. ಇನ್ನೂ ಕೆಲವರು ಹರಾಜಿನಲ್ಲಿ ಪಾಲ್ಗೊಳ್ಳದೇ ಉಳಿದರು. ಅಂದೇ ಹರಾಜು ಪ್ರಕ್ರಿಯೆ ಅವೈಜ್ಞಾನಿಕವಾಗಿ ನಡೆದಿದೆ ಎನ್ನುವ ಮಾತುಗಳೂ ಕೂಡಾ ಕೇಳಿ ಬಂದಿತ್ತು.
ಪುರಸಭೆಯವರು ಅಂಗಡಿ ಕಬ್ಜಾ ಕೊಡುವಂತೆ ನೋಟೀಸು ನೀಡಿದ ಹಿನ್ನೆಲೆಯಲ್ಲಿ ಹಲವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ಹರಾಜಿನ ಪ್ರಕ್ರಿಯೆಯಲ್ಲೂ ಭಾಗವಹಿಸದೇ, ನ್ಯಾಯಾಲಯಕ್ಕೂ ಹೋಗದ ೩೪ ಜನರಿಗೆ ಸೆ. ೬ ರಂದು ಅಂಗಡಿ ಕಬ್ಜಾ ಕೊಡುವಂತೆ ಪುರಸಭೆ ತಿಳಿಸಿತ್ತು. ಅಂದು ಅಂಗಡಿಕಾರರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಜಿಲ್ಲಾಡಳಿತ ಕಬ್ಜಾ ನೀಡಲು ಐದು ದಿನಗಳ ಗಡುವು ವಿಧಿಸಿತ್ತು. ನಿಗದಿ ಪಡಿಸಿದ ಗಡುವಿನಂತೆ ಗುರುವಾರ ಬೆಳಿಗ್ಗೆ ೬ ಗಂಟೆಗೆ ಸಹಾಯಕ ಕಮೀಷನರ್ ಎಂ. ಎನ್. ಮಂಜುನಾಥ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಶಂಕರಪ್ಪ ಹಾಗೂ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು ೩೪ ಅಂಗಡಿಗಳನ್ನು ಕಬ್ಜಾ ಪಡೆಯಲು ಅಂಗಡಿಗಳಿಗೆ ಬೀಗ ಹಾಕಿ ಸೀಲ್ ಮಾಡಲು ಹೊರಟಿದ್ದರು. ಅಧಿಕಾರಿಗಳು ಅಂಗಡಿಗಳನ್ನು ಕಬ್ಜಾ ಪಡೆಯುತ್ತಿರುವುದನ್ನು ಕಂಡು ಕಂಗಾಲಾದ ಅಂಗಡಿಕಾರ ರಾಮಚಂದ್ರ ನಾಗಪ್ಪ ನಾಯ್ಕ ಕಬ್ಜಾ ಪ್ರಕ್ರಿಯೆ ಬಗ್ಗೆ ಒಮ್ಮೇಲೆ ಆಕ್ರೋಶಗೊಂಡು ಕತ್ತಿ, ಸೀಮೆ ಎಣ್ಣೆ ಸಹಿತ ಪುರಸಭೆ ಕಚೇರಿಯ ಆಡಳಿತ ವಿಭಾಗದ ಮುಂದೆ ಅಂಗಡಿಗಳ ಕಬ್ಜಾ ಪಡೆಯದಂತೆ ಆಗ್ರಹಿಸಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಪುರಸಭೆ ಸಿಬ್ಬಂದಿಗಳು, ಪೊಲೀಸರು ಹಾಗೂ ಕೆಲ ಅಂಗಡಿಕಾರರು ತಕ್ಷಣ ಸ್ಥಳಕ್ಕೆ ಬಂದು ಗಂಭೀರ ಸುಟ್ಟುಕೊಂಡಿದ್ದ ಆತನನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಒಯ್ದಿದ್ದಾರೆ.
ಜಿಲ್ಲಾಧಿಕಾರಿ ಭೇಟಿ: ಇಂದಿನ ಘಟನೆಗೆ ಸಂಬಂಧಿಸಿದಂತೆ ಕೂಡಲೆ ಜಿಲ್ಲಾಧಿಕಾರಿಗಳು ಭಟ್ಕಳಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ಸಾರ್ವಜನಿಕರ ಆಗ್ರಹದ ಮೇರೆ ಭಟ್ಕಳಕ್ಕೆ ಬಂದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅಂಗಡಿಕಾರರೊಂದಿಗೆ ಮಾತನಾಡಿದ್ದು ಇದು ಸರ್ಕಾರದ ಆದೇಶವಾಗಿದೆ. ನಿಮಗೆ ಅಂಗಡಿ ತೆರವುಗೊಳಿಸಲು ಬಹಳಷ್ಟು ಸಮಯ ನೀಡಿದ್ದಾಗ್ಯೂ ಯಾವುದೇ ಕಾನೂನು ರೀತಿ ಅದನ್ನು ಬಗೆಹರಿಸಿಕೊಳ್ಳಬಹುದಿತ್ತು. ಈಗ ಕಾಲ ಮಿಂಚಿದೆ ನನ್ನ ಮಟ್ಟದಲ್ಲಿ ನಿಮಗೆ ಏನೆಲ್ಲ ಸಹಾಯ ಮಾಡಲು ಸಾಧ್ಯವಾಗುತ್ತೋ ಅದನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.