ಪುಲ್ವಾಮ ಆತ್ಮಾಹುತಿ ಉಗ್ರದಾಳಿಗೆ ತಂಝೀಮ್ ತೀವ್ರ ಖಂಡನೆ
ಭಟ್ಕಳ: ಪುಲ್ವಾಮದಲ್ಲಿ 40 ಮಂದಿ ಸೈನಿಕರ ಮೇಲೆ ನಡೆದ ಭಯೋತ್ಪಾದನಾ ಧಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಶನಿವಾರ ತಹಸಿಲ್ದಾರರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದು ಉಗ್ರರಿಗೆ ತಕ್ಕ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ನಮ್ಮ ದೇಶದ ಐಕ್ಯತೆಗಾಗಿ ನಾವು ನಮ್ಮ ಪ್ರಾಣವನ್ನು ನೀಡಲು ಸಿದ್ದರಿದ್ದು ಗಡಿಯಲ್ಲಿ ಯೋಧರೊಂದಿಗೆ ನಾವು ದೇಶರಕ್ಷಣೆಯ ಕಾರ್ಯಕ್ಕೂ ಸಿದ್ದರಿದ್ದೇವೆ ಎಂದರು.
ಸಾಮಾಜಿಕ ಕಾರ್ಯಕರ್ತ ಡಾ.ಮುಹಮ್ಮದ್ ಹನಿಫ್ ಶಬಾಬ್ ಮಾತನಾಡಿ ನಮ್ಮ ದೇಶದ ರಕ್ಷಣೆಗಾಗಿ ಮುಸ್ಲಿಮರು ಸದಾರಿದ್ದು ದೇಶದ್ರೋಹಿಗಳಿಗೆ ತಕ್ಕ ಉತ್ತರ ನೀಡುವುದಾಗಿ ತಿಳಿಸಿದರು.
ಪತ್ರಕರ್ತ ಮುಹಮ್ಮದ್ ರಝಾ ಮಾನ್ವಿ ಮಾತನಾಡಿ, ಶುಕ್ರವಾರದ ಪ್ರಾರ್ಥನೆಯಲ್ಲಿ ದೇಶದ ಮುಸ್ಲಿಮರು ಹುತಾತ್ಮ ಯೋಧರಿಗಾಗಿ ಪ್ರಾರ್ಥಿಸಿದ್ದಾರೆ. ಮೃತ ಯೋಧರ ಜೀವವಂತೋ ಮರಳಿ ಕೊಡಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬಕ್ಕೆ ಸಾಂತ್ವಾನ ಹೇಳುವುದರ ಮೂಲಕ ನಾವು ನಿಮ್ಮೊಂದಿಗೆ ಇದ್ದೇವೆ. ದೇಶಕ್ಕಾಗಿ ಪ್ರಾಣ ನೀಡಿಯಾದರೂ ಶತ್ರುಗಳನ್ನು ಸೆದೆಬಡೆಯುತ್ತೇವೆ ಎಂದರು.
ತಂಝೀಮ್ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಕಾರ್ಯದರ್ಶಿ ಮೌಲಾನ ಯಾಸಿರ್ ಬರ್ಮಾವರ್ ನದ್ವಿ, ಇಮ್ರಾನ್ ಲಂಕಾ, ಜಾಲಿ ಪ.ಪಂ ಅಧ್ಯಕ್ಷ ಆದಂ ಪಣಂಬೂರು, ಅಂಜುಮನ್ ಕಾರ್ಯದರ್ಶಿ ಮೊಹಸಿನ್ ಶಾಬಂದ್ರಿ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ತಹಸಿಲ್ದಾರ್ ವಿ.ಎನ್.ಬಾಡ್ಕರ್ ಮನವಿ ಪತ್ರ ಸ್ವೀಕರಿಸಿದರು.