ಭಟ್ಕಳ: ನಗರದ ಮಾರಿಗುಡಿಯಲ್ಲಿ ಮಾರಿ ಮೂರ್ತಿ ಸ್ಥಾಪಿಸಿ ಪ್ರಥಮ ಪೂಜೆಯನ್ನು ನೆರವೇರಿಸುವ ಮೂಲಕ ಎರಡು ದಿನಗಳ ಮಾರಿ ಜಾತ್ರೆಗೆ ಬುಧವಾರ ಬೆಳಗಿನಜಾವ ಅದ್ದೂರಿ ಚಾಲನೆ ದೊರೆತಿದೆ.
ಬೆಳಿಗ್ಗೆ ಮಣ್ಕುಳಿಯ ಮಾರುತಿ ಆಚಾರಿ ಅವರ ಮನೆಯಲ್ಲಿ ಅದ್ಧೂರಿಯ ಪೂಜೆ, ಮಂಗಳಾರತಿ ಸಲ್ಲಿಸುವ ಮೂಲಕ ತಮ್ಮ ಕುಟುಂಬದ ವತಿಯಿಂದ ಮಾರಿ ಮೂರ್ತಿಯನ್ನು ಬಿಟ್ಟುಕೊಟ್ಟ ನಂತರ ವಾದ್ಯ ಘೋಷದೊಂದಿಗೆ ಬೃಹತ್ ಮೆರವಣಿಗೆಯ ಮೂಲಕ ಮಾರಿ ಉತ್ಸವ ಮೂರ್ತಿಯನ್ನು ತಂದು ಮಾರಿಗುಡಿಯಲ್ಲಿ ಸಂಪ್ರದಾಯ ಮತ್ತು ಧಾರ್ಮಿಕ ವಿಧಿ ವಿಧಾನಗಳಂತೆ ಪ್ರತಿಷ್ಠಾಪಿಸಲಾಯಿತು.
ಮಾರಿ ಜಾತ್ರೆಯಲ್ಲಿ ಹಿಂದೆ ಪಾಲಿಸಿಕೊಂಡು ಬಂದ ಸಂಪ್ರದಾಯದಂತೆ ಪೂಜೆಯನ್ನು ಆರಂಭಿಸಲಾಯಿತು. ಮಾರಿ ಜಾತ್ರೆಯ ಸಂದರ್ಭದಲ್ಲಿ ಮೊದಲ ದಿನದಂದು ನಗರ ಪ್ರದೇಶದ ಹೊರಗಿನ ಜನರು ಬಂದು ಪೂಜೆ ಹರಿಕೆ, ಕಾಣಿಕೆ ಸಲ್ಲಿಸುವುದು ವಾಡಿಕೆ. ಎರಡನೇ ದಿನದಂದು ನಗರ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಜನರು ಬಂದು ಪೂಜೆ, ಹರಿಕೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಭಕ್ತರು ತಮಗೊದಗಿ ಬಂದ ಕಷ್ಟ ಕಾರ್ಪಣ್ಯಗಳಿಗಾಗಿ ಮಾರಿಗೆ ಹರಿಕೆಯನ್ನು ಹೊತ್ತು ಅವುಗಳನ್ನು ಈ ಎರಡು ದಿನಗಳ ಅವಧಿಯಲ್ಲಿ ತೀರಿಸುವುದು ವಾಡಿಕೆ. ನಂತರದ ದಿನಗಳಲ್ಲಿ ಮಾರಿಗುಡಿಯಲ್ಲಿ ಪ್ರತಿಷ್ಟಾಪಿಸಿ ಪೂಜಿಸಲ್ಪಡುವ ಮಾರಿಕಾಂಬಾ ದೇವಿಗೆ ಹರಿಕೆ, ಕಾಣಿಕೆಗಳನ್ನು ಸಲ್ಲಿಸುತ್ತಾರಾದರೂ ಹಿಂದಿನ ಸಂಪ್ರದಾಯದಂತೆ ಮಾರಿ ಹಬ್ಬದಂದು ಸಲ್ಲಿಸುವ ಹರಿಕೆ, ಕಾಣಿಕೆಗಳನ್ನು ಈ ಎರಡು ದಿನಗಳ ಕಾಲ ಭಕ್ತರು ಸಲ್ಲಿಸುವುದು ವಾಡಿಕೆ.
ಮಾರಿ ಜಾತ್ರೆಗೆ ಭಟ್ಕಳ ತಾಲೂಕು ಮಾತ್ರವಲ್ಲ, ಜಿಲ್ಲೆಯ ಹಾಗೂ ನೆರೆ ಜಿಲ್ಲೆಯ ಭಕ್ತರೂ ಕೂಡಾ ಆಗಮಿಸಿ ಹರಿಕೆ ಕಾಣಿಕೆಯನ್ನು ಸಲ್ಲಿಸುತ್ತಾರೆ. ಪ್ರತಿ ಜಾತ್ರೆಯ ಸಂದರ್ಭದಲ್ಲಿಯೂ ಕೂಡಾ ಹೂವಿನ ಪೂಜೆ, ತೊಟ್ಟಿಲು ಹರಿಕೆ, ಕಣ್ಣು, ಹೂವಿನ ಟೋಪಿ ಇತ್ಯಾದಿಗಳನ್ನು ಹರಿಕೆಯ ರೂಪದಲ್ಲಿ ಸಲ್ಲಿಸಲಾಗುತ್ತದೆ.
ಮಾರಿ ಜಾತ್ರೆಯು ವರ್ಷದಿಂದ ವರ್ಷಕ್ಕೆ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದ್ದು ದೇವರಲ್ಲಿ ಬರುವ ಭಕ್ತರ ಸಂಖ್ಯೆಯೂ ಕೂಡಾ ಗಣನೀಯವಾಗಿ ಹೆಚ್ಚುತ್ತಿದ್ದು ಪ್ರತಿ ವರ್ಷವೂ ಕೂಡಾ ಜಾತ್ರೆಯ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಎರ್ಪಡಿಸಲಾಗುತ್ತಿದ್ದು ಭಕ್ತಾದಿಗಳಿಗೆ ಸರಾಗವಾಗಿ ಮಾರಿಯ ದರ್ಶನ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತಿದೆ.
ದೇವಸ್ಥಾನದಲ್ಲಿ ಮಾರಿಕಾಂಬಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಪರಮೇಶ್ವರ ನಾಯ್ಕ, ಉಪಾಧ್ಯಕ್ಷ ರಘುವೀರ ಬಾಳಗಿ, ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯ್ಕ ಆಸರಕೇರಿ, ಸದಸ್ಯರಾದ ನರೇಂದ್ರ ನಾಯಕ, ಮಾದೇವ ಮೊಗೇರ ಸೇರಿದಂತೆ ಪ್ರಮುಖರಾದ ಶಂಕರ ಶೆಟ್ಟಿ, ಶ್ರೀಪಾದ ಕಂಚುಗಾರ, ಗುರು ಸಾಣಿಕಟ್ಟೆ, ಗೋಪಾಲ ಕೋಡಿಯಾ ಹಾಗೂ ನೂರಾರು ಜನರು ಪಾಲ್ಗೊಂಡಿದ್ದರು.