ಭಟ್ಕಳ: ಮಕ್ಕಳಲ್ಲಿ ಉತ್ತಮ ಸಂಸ್ಕಾರ,ಗುಣ ನಡೆತೆ ಬೆಳೆಯಲು ಮಾತೆಯಂದಿರ ಪಾತ್ರ ಬಹುಮುಖ್ಯವಾಗಿದ್ದು ಅವರು ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕಾಗಿದೆ ಎಂದು ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಕೃಷ್ಣ ಭಟ್ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊನ್ನಾವರ ಭಟ್ಕಳ ಕಾರ್ಯಕ್ಷೇತ್ರದ ಬೆಳಕೆ ಒಕ್ಕೂಟದ ವತಿಯಿಂದ ಎರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಶಿಶು ಸಂರಕ್ಷಣಾ ದಿನಾಚಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಬೆಳವಣಿಗೆಯನ್ನು ತಾಯಂದಿರು ಹಂತ ಹಂತವಾಗಿ ಗುರುತಿಸುತ್ತಾ ಅವರಿಗೆ ಉತ್ತಮ ಸಂಸ್ಕಾರ, ಗುಣ ನಡೆತೆ ದೊರೆಯುವಂತೆ ಜಾಗೃತೆ ವಹಿಸಬೇಕು. ಮಕ್ಕಳು ಹರೆಯಕ್ಕೆ ಬಂಗಾಗ ಅವರ ಕುರಿತು ಹೆಚ್ಚು ಕಾಳಜಿವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಕೆ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ ನಾಯ್ಕ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಸಂತೋಷ್ ಮಾತನಾಡಿ ಮಗು ಜನನದಿಂದ 28 ದಿನಗಳ ಕಾಲ ನವಜಾತ ಶಿಶುವಿನ ಪಾಲನೆ ಪೋಷಣೆ ಮುಖ್ಯ. ಮಗು ಜನಿಸಿದ ತಕ್ಷಣ ಹೊಸ ಬಟ್ಟೆಯನ್ನು ಉಪಯೋಗಿಸಬಾರದು. ಶುದ್ಧವಾಗಿ ತೊಳೆದ ಶುಭ್ರ ಬಟ್ಟೆಯನ್ನು ಉಪಯೋಗಿಸಿ ಮಗುವಿನ ಮೈಯನ್ನು ಸ್ವಚ್ಚಗೊಳಿಸಬೇಕು. ಶಿಶುವು ಜನಿಸಿದ ತಕ್ಷಣ ಮಗುವನ್ನು ತಾಯಿಯ ಮಡಿಲಲ್ಲಿ ಇಟ್ಟಲ್ಲಿ ಬಾಂಧವ್ಯ ಹೆಚ್ಚುವುದು ಎಂದು ಹೇಳಿದರಲ್ಲದೇ, ಚಿಕ್ಕ ಮಕ್ಕಳ ಆರೋಗ್ಯದಲ್ಲಿನ ಎರುಪೇರುಗಳನ್ನು ಸದಾ ತಾಯಿ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮಗುವಿನ ಆರೈಕೆಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ಹೊನ್ನಾವರ ಭಟ್ಕಳ ಯೋಜನಾಧಿಕಾರಿ ಎಂ. ಎಸ್. ಈಶ್ವರ ಮಾತನಾಡಿ ತಾಯಿ ಸದಾ ಕರುಣಾಮಯಿಯಾಗಿದ್ದು ತಾಯಿಯ ಸ್ಥಾನವು ದೊಡ್ಡದು. ಮಗುವಿನ ಬೆಳವಣಿಗೆಗೆ ಮನೆಯ ವಾತಾವರಣ ಅತೀ ಮುಖ್ಯವಾಗುವುದು. ಮಕ್ಕಳು ವಿದ್ಯಾವಂತರಾಗುವುದು ಕೇವಲ ನೌಕರಿ ಮಾಡಲಿಕ್ಕೆ ಮಾತ್ರವಲ್ಲ, ಸಮಾಜದಲ್ಲಿ ವ್ಯವಹಾರ ಮಾಡಲೂ ಕೂಡಾ ವಿದ್ಯೆ ಅತೀ ಅವಶ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸಿ.ಡಿ.ಪಿ.ಓ. ಸುಶೀಲಾ ಮಾತನಾಡ ಶಿಶು ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ದೊರೆಯುವ ಎಲ್ಲಾ ಸೌಲಭ್ಯಗಳನ್ನು ವಿವರಿಸಿದರು. ಸರಕಾರ ಹೊಸ ಯೋಜನೆಯಾದ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮ ಎಲ್ಲರೂ ಯಶಸ್ವೀಗೊಳಿಸಬೇಕು ಎಂದು ಕರೆ ನೀಡಿದರು. ಒಕ್ಕೂಟದ ಅಧ್ಯಕ್ಷೆ ಶಾಂತಿ ಜಗದೀಶ ಮೊಗೇರ ಉಪಸ್ಥಿತರಿದ್ದರು.
ಯೋಜನೆಯ ಉಡುಪಿ ಪ್ರಾದೇಶಿಕ ಕಚೇರಿಯ ಮುಖ್ಯ ಸಮನ್ವಯಾಧಿಕಾರಿ ಅನಿತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಕೆ ವಲಯದ ಮೇಲ್ವಿಚಾರಕಿ ರೇಶ್ಮಾ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ನಿರೂಪಿಸಿದರು. ವಿಮಲಾ ವಂದಿಸಿದರು. ಕಾರ್ಯಕ್ರಮದಲ್ಲಿ 6 ತಿಂಗಳ ಬಾಣಂತಿಯರನ್ನು ಗೌರವಿಸಿ ನೆನಪಿನ ಕಾಣಿಕೆ ನಿಡಲಾಯಿತು.