ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ಜರಗಿಸಲಾಗುವುದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಭರವಸೆ ನೀಡಿದರು.
ಅವರು ಸೋಮವಾರ ಶಿರಾಲಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರ ದೂರುಗಳನ್ನು ಆಲಿಸಿ ನಂತರ ಮಾತನಾಡಿದರು.
ಶಿರಾಲಿ ಜನರ ಬೇಡಿಕೆಯಗಳು ನ್ಯಾಯಯುತವಾಗಿದ್ದು ಹೆದ್ದಾರಿಯನ್ನು 30 ರ ಬದಲು 45ಮೀಟರ್ ವಿಸ್ತರಿಸಲು ಪ್ರಯತ್ನಿಸುವುದಾಗಿ ತಿಳಿಸಿದ ಅವರು ಹೆದ್ದಾರಿ ಚಿಕ್ಕದಾಗಿರುವುದರಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆಗಳಿದ್ದು 45ಮೀಟರ್ ಅಗಲೀಕರಣಕ್ಕೆ ಭೂಸ್ವಾಧೀನ ಮಾಡಿಕೊಳ್ಳುವ ಅಧಿಕಾರ ರಾಜ್ಯಸರ್ಕಾರಕ್ಕಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಯಾವುದೆ ಕಾರಣಕ್ಕೂ ಹೆದ್ದಾರಿ ಅಗಲೀಕರಣದಲ್ಲಿ ಕಡಿತಗೊಳಿಸುವುದಿಲ್ಲ ಎಂದರು.
ಶಾಸಕ ಸುನಿಲ್ ನಾಯ್ಕ ಮಾತನಾಡಿ, ಶಿರಾಲಿ ಪ್ರದೇಶವು ದೇಶದಲ್ಲಿ ಖ್ಯಾತಿಯನ್ನು ಹೊಂದಿದ್ದು ಇಲ್ಲಿನ ಚಿತ್ರಾಪುರ ಮಠ ಹಾಗೂ ಅಳ್ವೆಕೋಡಿ ದೇವಸ್ಥಾನಕ್ಕೆ ನೂರಾರು ಭಕ್ತರು ಬರುತ್ತಾರೆ ಆದ್ದರಿಂದ ಈ ಭಾಗದಲ್ಲಿ ಹೆದ್ದಾರಿ ಚಿಕ್ಕದಾಗಿದ್ದರೆ ಮುಂದೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಅಪಘಾತಗಳು ಹೆಚ್ಚುವ ಸಂಭವವಿದೆ ಎಂದ ಅವರು ಅಧಿಕಾರಿಗಳು ಸಾರ್ವಜನಿಕರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಶಿರಾಲಿ ಪಂಚಾಯತ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಹಿರಿಯ ಕಾಂಗ್ರೇಸ್ ಮುಖಂಡ ರಾಮಾ ಮೊಗೇರ್,ಆರ್.ಕೆ.ನಾಯ್ಕ ಮುಂತಾದವರು ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸಚಿವರ ಮುಂದೆ ವಿವರಿಸಿದರು.
ಪಂಚಾಯತ್ ಉಪಾಧ್ಯಕ್ಷೆ ಸುನಿತಾ ಹೆರೂರಕರ್, ಸದಸ್ಯರಾದ ಮಾಲತಿ ದೇವಾಡಿಗ, ಬಿಜೆಪಿ ಅಧ್ಯಕ್ಷ ರಾಜೇಶ ನಾಯ್ಕ, ದಿನೇಶ ನಾಯ್ಕ ಮುಂಡಳ್ಳಿ, ಸುಬ್ರಾಯ ದೇವಾಡಿಗ, ಭಾಸ್ಕರ್ ದೈಮನೆ, ಮೋಹನ್ ದೇವಾಡಿಗ, ರವಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಮೀನುಗಾರರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ನೀಡಿದ ಸಚಿವ
ಭಟ್ಕಳ: ಕಳೆದ ಡಿಸೆಂಬರ್ 15ರಂದು ಮಹಾರಾಷ್ಟ್ರದ ಸಿಂಧುದುರ್ಗದಿಂದ ಹೊರಗೆ ಮೀನುಗಾರಿಕೆಯನ್ನು ಮಾಡುತ್ತಿರುವಾಗ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನಲ್ಲಿದ್ದು ನಾಪತ್ತೆಯಾಗಿದ್ದ ಅಳ್ವೇಕೋಡಿಯ ಹರೀಷ್ ಮೊಗೇರ ಹಾಗೂ ಬೆಳ್ನಿಯ ರಮೇಶ ಮೊಗೇರ ಅವರ ಮನೆಗೆ ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ ಹೆಗಡೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಮೀನಗಾರಿಕೆಗೆ ತೆರಳಿದ್ದ ಬೋಟು ನಾಪತ್ತೆಯಾಗಿರುವ ಸಂಗತಿ ತಿಳಿದೊಡನೆಯೇ ಕೇಂದ್ರದ ಸಚಿವರಿಗೆ ಪತ್ರ ಬರೆದು ತಕ್ಷಣದ ಕ್ರಮಕ್ಕೆ ಕೋರಿದ್ದೇನೆ. ದೆಹಲಿಯಲ್ಲಿ ಕೇಂದ್ರ ಸರಕಾರದ ವತಿಯಿಂದ ನಾಪತ್ತೆಯಾದ ಬೋಟನ್ನ ಹುಡುಕಲು ಎಲ್ಲಾ ರೀತಿಯ ಪ್ರಯತ್ನಗಳೂ ಸಾಗಿವೆ. ಈಗಾಗಲೇ ನೇವಿ, ಕೋಸ್ಟಗಾರ್ಡ ಸಹಾಯವನ್ನು ಕೂಡಾ ಪಡೆಯಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕವೂ ಹುಡುಕುವ ಪ್ರಯತ್ನ ಸಾಗಿದ್ದು ಎಲ್ಲಾ ವ್ಯವಸ್ಥೇಯನ್ನು ಕೇಂದ್ರ ಸರಕಾರ ಮಾಡಿದೆ ಎಂದರು.
ಸಿದ್ಧಗಂಗಾ ಮಠದ ಶ್ರೀಗಳ ನಿಧನಕ್ಕೆ ಸಂತಾಪ: ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಷರಾದ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು ಸ್ವಾಮೀಜಿಯವರು ಅನೇಕ ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಯಾವುದೇ ಜಾತಿ, ಮತ, ಪಂಥವೆನ್ನದೇ ತಮ್ಮ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದ ಅವರು ಲಕ್ಷಾಂತರ ಜನತೆಗೆ ದಾರಿ ದೀಪವಾಗಿದ್ದಾರೆ ಎಂದರು.
ಭಟ್ಕಳದಲ್ಲಿ ನಿಯೋಜಿತ ಕಾರ್ಯಕ್ರಮಗಳನ್ನು ರದ್ದು ಪಡಿಸಿ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ತಾವು ತುಮಕೂರಿಗೆ ತೆರಳುತ್ತಿರುವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ ಹೆಗಡೆ ಸುದ್ದಿಗಾರರಿಗೆ ತಿಳಿಸಿದರು.