ಭಟ್ಕಳ, ಮಾ ೨೩: ಇಲ್ಲಿನ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದಲ್ಲಿ ‘ಕಾನೂನು ಸಾಕ್ಷರತಾ ಶಿಬಿರ’ ಎನ್ನುವ ವಿನೂತನ ಕಾನೂನು ಮಾಹಿತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಶ್ರೀ ರಾಘವೇಂದ್ರ ಡಿ. ಮಾತನಾಡಿ “ಹುಟ್ಟುವ ಪೂರ್ವದಿಂದ, ಸಾಯುವವರೆಗೆ ಕಾನೂನಿನ ಚೌಕಟ್ಟಿದ್ದು, ಹುಟ್ಟುವದಕ್ಕಿಂತ ವೊದಲು ಲಿಂಗಪತ್ತೆ, ನಂತರ ಜನನ ಪ್ರಮಾಣ ಪತ್ರ, ಜಾಗನೋಂದಣ , ಮರಣ ಪ್ರಮಾಣಪತ್ರ ಮುಂತಾದವುಗಳ ರೂಪದಲ್ಲಿ ಕಾನೂನು ನಮಗೆ ಅತ್ಯವಶ್ಯಕ” ಎಂದರು. ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ಇಂದಿರಾ ನಾಯ್ಕ ಸಹಾಯಕ ಸರಕಾರಿ ಅಭಿಯೋಜಕರು, ಭಟ್ಕಳ ನ್ಯಾಯಾಲಯ ಇವರು ವಿದ್ಯಾರ್ಥಿಗಳಿಗೆ POCSO ACT-2012 ರ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭಟ್ಕಳದ ಪ್ರಧಾನ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಶ್ರೀ ಹನುಮಂತ ರಾವ್ ಆರ್. ಕುಲಕರ್ಣಿ ಮಾತನಾಡಿ ಸಮಾಜದಲ್ಲಿ ಇರುವ ಜನರಿಗೆ ಕಾನೂನಿನ ಅರಿವು ನೀಡಬೇಕು ಎಂಬ ಉದ್ಧೇಶದಿಂದ ಇಂತಹ ಕಾರ್ಯಕ್ರಮವನ್ನು ಕೈಗೊಂಡಿದ್ದೇವೆ, ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಉಪಯೋಗಕ್ಕೆ ಬರುವಂತಹ ಕಾನೂನುಗಳ ಮಾಹಿತಿಯನ್ನು ಹೊಂದಿರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಟ್ಕಳ ವಕಿಲರ ಸಂಘದ ಅಧ್ಯಕ್ಷರಾದ ಶ್ರೀ ಧನ್ಯಕುಮಾರ ಜೈನ ಮಾತನಾಡಿ ಕಾನೂನಿನ ಅರಿವಿನ ಕೊರತೆಯು ತಪ್ಪಿತಸ್ತನಿಗೆ ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವದಿಲ್ಲ ಎಂದು ನ್ಯಾಯಾಲಯದಲ್ಲಿ ನಡೆಯುವ ಕಾನೂನು ಪ್ರಕ್ರಿಯೆಗಳ ಸಂಪೂರ್ಣ ಮಾಹಿತಿಯನ್ನು ನೀಡಿದರು. ಪ್ರಾಂಶುಪಾಲ ವೀರೇಂದ್ರ ಶಾನಭಾಗ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ನಾಗೇಶ ಪ್ರಭು ನಿರೂಪಿಸಿ ವಂದಿಸಿದರು.