ವಿವಿಧ ವೇಷಭೂಷಣ ನೊಂದಿಗೆ ಮತದಾರರ ಜಾಗೃತಿ ಜಾಥಾ ಅಭಿಯಾನ
ಭಟ್ಕಳ: ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಉತ್ತರಕನ್ನಡ ಕಾರವಾರ ಇವರ ಸಹಯೋಗದಲ್ಲಿ ಬುಧವಾರ ಮತದಾರರ ನೋಂದಣಿ ಜಾಗೃತಿ ಅಭಿಯಾನ ಮತ್ತು ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮವು ನಡೆಯಿತು.
ಇಲ್ಲಿನ ಅಂಜುಮನ್ ಆಂಗ್ಲೋ ಉರ್ದು ಮೈದಾನದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮತದಾನ ಜಾಗೃತಿ ಮೆರವಣಿಗೆಯು ಸಂಶುದ್ದೀನ್ ಸರ್ಕಲ್, ಬಂದರ್ ರೋಡ್, ಸೋನಾರಕೇರಿ ಮಾರ್ಗವಾಗಿ ಅಂಜುಮನ್ ಮೈದಾನಕ್ಕೆ ಹಿಂದಿರುಗಿ ಸಮಾಪ್ತಿಯಾಯಿತು. ತಹಸೀಲ್ದಾರ ಎನ್.ಬಿ.ಪಾಟೀಲ್, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ, ಸಿಪಿಐ ಕೆ.ಎಲ್.ಗಣೇಶ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮೂರ್ತಿರಾಜ ಭಟ್ ಮೊದಲಾದವರು ಉಪಸ್ಥಿತರಿದ್ದರು. ಸರಕಾರಿ ನೌಕರರು, ವಿದ್ಯಾರ್ಥಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಅಂಗವಿಕಲರು ಸೇರಿದಂತೆ ವಿವಿಧ ಕ್ಷೇತ್ರಗಳ ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯುದ್ಧಕ್ಕೂ ಮತದಾನದ ಹಕ್ಕಿನ ಕುರಿತು ಘೋಷಣೆಯನ್ನು ಕೂಗಲಾಯಿತು. ವಾದ್ಯ ಹಾಗೂ ವಿವಿಧ ವೇಷ ಭೂಷಣಗಳು ಮೆರವಣಿಗೆಗೆ ಹೆಚ್ಚಿನ ಮೆರುಗನ್ನು ನೀಡಿತು. ನಂತರ ಕಡ್ಡಾಯ ಮತದಾನದ ಬಗ್ಗೆ ಸಾಮೂಹಿಕವಾಗಿ ಪ್ರಮಾಣ ವಚನ ಸ್ವೀಕರಿಸಲಾಯಿತು.