• ಶೀಘ್ರ ದುರಸ್ತಿಗಾಗಿ ಸ್ಥಳಿಯರ ಆಗ್ರಹ
ಭಟ್ಕಳ: ನಗರದ ಪುರಸಭಾ ವ್ಯಾಪ್ತಿಯ ಗೌಸೀಯಾ ಸ್ಟ್ರೀಟ್ ನಲ್ಲಿರುವ ಒಳಚರಂಡಿ ಶುದ್ದೀಕರಣ ಘಟಕವು ಪದೇ ಪದೇ ಹಾಳಾಗುತ್ತಿದ್ದು ಇದರಿಂದಾಗಿ ಈ ಭಾಗದ ನಿವಾಸಿಗಳ ಕುಡಿಯ ನೀರಿನ ಬಾವಿಗಳಲ್ಲಿ ಕಲೂಷಿತ ನೀರು ಸೇರ್ಪಡೆಗೊಂಡು ಆತಂಕ ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ಕೆಟ್ಟು ನಿಂತಿರುವ ಒಳಚರಂಡಿ ಘಟಕದ ಯಂತ್ರವನ್ನು ಕೂಡಲೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಸ್ಥಳಿಯರು ಪುರಸಭಾ ಮುಖ್ಯಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು.
ಕಳೆದ ಮೂರು ದಿನದಿಂದ ಒಳಚರಂಡಿ ಘಟಕದ ಶುದ್ದೀಕರಣ ಯಂತ್ರ ಕೆಟ್ಟು ಹೋಗಿರುವ ಪರಿಣಾಮ ಒಳಚರಂಡಿ ನೀರನ್ನು ಶರಾಬಿ ನದಿಗೆ ಹರಿಯಬಿಡಲಾಗುತ್ತಿದ್ದು ಇದರಿಂದಾಗಿ ಈ ಭಾಗದ ಸುಮಾರು 60ಕ್ಕೂ ಹೆಚ್ಚು ಕುಡಿಯುವ ನೀರಿನ ಬಾವಿಗಳಲ್ಲಿ ಕಲೂಷಿತ ಹೊಲಸು ನೀರು ಸೇರ್ಪಡೆಗೊಂಡಿದೆ ಎಂದು ಆರೋಪಿಸಿರುವ ಸ್ಥಳಿಯರು ಪುರಸಭೆಯ ಕೆಟ್ಟ ನಿರ್ವಹಣೆಯೇ ಇದಕ್ಕೆ ಕಾರಣ ಎಂದು ದೂರಿದ್ದಾರೆ. ಈ ಹಿಂದೆಯೂ ಹಲವು ಬಾರಿ ಶುದ್ದೀಕರಣ ಘಟಕದ ಪಂಪ್ ಹಾಳಾಗುತ್ತಿದ್ದು ಸರಿಯಾದ ನಿರ್ವಹಣೆಯಿಲ್ಲದೆ ಮತ್ತೇ ಮತ್ತೇ ಅದು ಹಾಳಾಗುತ್ತಲೆ ಇದೆ ಇಂತಹದ್ದೇ ಸ್ಥಿತಿ ಮುಂದುವರೆದರೆ ಈ ಭಾಗದ ಜನರು ಭಯಾನಕ ರೋಗಗಳಿಂದ ನರಳುವ ದಿನ ದೂರವಿಲ್ಲ ಎಂದು ಸ್ಥಳಿಯರು ಮಾಧ್ಯಮಗಳ ಮುಂದೆ ದೂರಿಕೊಂಡಿದ್ದಾರೆ.
ಪುರಸಭಾ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪಂಪ್ ಹಾಳಾಗುತ್ತಿದ್ದು ಮುಂದಿನ ದಿನಗಳಲ್ಲಿ ಹೀಗೆ ಆದರೆ ಭಾರಿ ಪ್ರತಿಭಟನೆಯನ್ನು ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.
ಈ ಸಂದರ್ಭಧಲ್ಲಿ ಮಾತನಾಡಿದ ಪುರಸಭಾ ಇಂಜೀಯನಿರ್ ವೆಂಕಟೇಶ್ ನಾವುಡಾ, ನಮ್ಮಲ್ಲಿ ಯಂತ್ರಗಳಿಗೆ ಕೊರತೆಯಿಲ್ಲ. ಕಟ್ಟು ಹೋಗಿರುವ ಯಂತ್ರವನ್ನು ಬದಲಿಸಲು ಸಯಮ ಬೇಕಾಗುತ್ತದೆ ಎಂದು ಹೇಳಿದರು. ಇದಕ್ಕೆ ಒಪ್ಪದ ಸ್ಥಳೀಯರು, ನೀವು ಸಮಯದ ಕುರಿತು ಮಾತನಾಡಬೇಡಿ ತ್ಯಾಜ್ಯ ನೀರನ್ನು ಹೊರಗೆ ಬಿಡದಂತೆ ಮೊದಲು ಕ್ರಮಕೈಗೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಗೌಸೀಯಾ ಸ್ಟ್ರೀಟ್ ನಿವಾಸಿಗಳಾದ ಮುಹಮ್ಮದ್ ಅಲಿ ಸಿದ್ದೀಬಾಪ, ಮೌಲಾ ಷರೀಫ್, ಅಸ್ಲಮ್ ಪಸ್ತರೆ, ಅಬ್ದುಲ್ ಮುಖೀಮ್, ತಾಹಿರ್ ಮತ್ತಿತರರು ಉಪಸ್ಥಿತರಿದ್ದರು.