ಮೀನುಗಾರಿಕಾ ಬೋಟ್ ಅವಘಡ; ೩೦ ಮಂದಿ ಪಾರು
ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ಕುಂದಾಪುರ ತಾಲೂಕಿನ ರಾಮಾ ಖಾರ್ವಿ ಹಾಗೂ ಪ್ರಭಾಕರ್ ಖಾರ್ವಿಯವರ ಬೋಟ್ ನ ಫ್ಯಾನ್ ತುಂಡಾಗಿ ಮುಳುಗಡೆಯ ಭೀತಿ ಎದುರಿಸುತ್ತಿದ್ದು ಅದರಲ್ಲಿ ಮೂವತ್ತು ಮಂದಿ ಪ್ರಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ತಡರಾತ್ರಿ ಭಟ್ಕಳ ತಾಲೂಕಿನ ಮುಂಡಳ್ಳಿಯ ನಸ್ತಾರ ಸಮುದ್ರ ತೀರದಲ್ಲಿ ಜರಗಿದೆ.
‘ಯಕ್ಷೇಶ್ವರಿ’ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಇಲ್ಲಿನ ಬಂದರ್ ದಕ್ಕೆಯಿಂದ ಮೀನುಗಾರಿಗೆ ತೆರಳಿ ಭಟ್ಕಳ ಬಂದರ್ ಗೆ ಮರಳುವಾಗಿ ಅದರ ಫ್ಯಾನ್ ತುಂಡಾಗಿ ಕಾರ್ಯವನ್ನು ಸ್ಥಗಿತಗೊಳಿಸಿತು ಎಂದು ಹೇಳಲಾಗಿದ್ದು ಮುಳುಗುವ ಭೀತಿ ಎದುರಿಸುತ್ತಿದೆ ಎಂದು ತಿಳಿದುಬಂದಿದೆ.
ಆಗ ಬೇರೆ ಬೋಟ್ಗಳಿಂದ ಹಗ್ಗದ ಸಹಾಯ ಪಡೆದು ಮುಳುಗುತ್ತಿದ್ದ ಬೋಟ್ ಎಳೆಯಲು ಪ್ರಯತ್ನಿಸಿದ್ದು ಅದು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಜೋರಾಗಿ ಬೀಸುತ್ತಿರುವ ಗಾಳಿ ಮಳೆ ಹಾಗೂ ಸಮುದ್ರದ ರಭಸದ ಅಲೆಗಳಿಗೆ ಸಿಲುಕಿದ ಬೋಟ್ ಮುಂಡಳ್ಳಿಯ ನಸ್ತಾರ ಸಮುದ್ರ ತೀರಕ್ಕೆ ಬಂದು ತಲುಪಿದೆ. ಬೋಟ್ನ ತಳಭಾಗ ಸಂಪುರ್ಣ ಒಡೆದು ಸಮುದ್ರದ ನೀರು ಸೇರಿ ಉಸುಕು ತುಂಬಿ ಸಮುದ್ರದ ದಡದಲ್ಲಿಯೇ ಸಿಲುಕಿಕೊಂಡಿತು. ರಾತ್ರಿ ಇಡೀ ಹರಸಾಹಸ ಪಟ್ಟು ಸಮುದ್ರವನ್ನು ಮೇಲ್ದಡೆಗೆ ಎಳೆಯಲು ಸಾಧ್ಯವಾಗದೇ ಇಲ್ಲಿನ ಸ್ಥಳಿಯರು ಹಾಗೂ ಮೀನುಗಾರರು ವಿಫಲರಾದರು. ಬೋಟ್ ಸಂಪೂರ್ಣ ಹಾನಿಯಾಗಿದ್ದು, ೧.೫ ಕೋಟಿಗೂ ಅಧಿಕ ಮೌಲ್ಯ ರೂ. ಹಾನಿಯಾದ ಬಗ್ಗೆ ಅಂದಾಜಿಸಲಾಗಿದೆ. ಬೋಟ್ನಲ್ಲಿದ್ದ ಒಟ್ಟು ೫೦೦೦ಲೀ. ಡೀಸೆಲ್ ಸಹ ಹಾನಿಯಾಗುವುದರೊಂದಿಗೆ ಸಮುದ್ರಕ್ಕೆ ಸೇರಿದೆ.
ಸ್ಥಳಕ್ಕೆ ಕರಾವಳಿ ಪೋಲೀಸ್ ಪಡೆ ಹಾಗೂ ಗ್ರಾಮೀಣ ಪೋಲೀಸ್ರು ಬಂದಿದ್ದು, ಸದ್ಯ ಕ್ರೇನ್ ಮೂಲಕ ಬೋಟ್ ಸಮುದ್ರ ದಡದಿಂದ ಮೇತ್ತಲಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.