ಭಟ್ಕಳ: ಡಿ.6 ರಂದು ರಾಜ್ಯದ ಮುಖ್ಯಂತ್ರಿ ಸಿದ್ಧರಾಮಯ್ಯ ಭಟ್ಕಳಕ್ಕೆ ಆಗಮಿಸುತ್ತಿದ್ದು ವಿವಿಧ 1200ಕೋ. ರೂ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದು 131 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರ ಎಂದು ಶಾಸಕ ಮಾಂಕಾಳ್ ವೈದ್ಯ ಹೇಳಿದರು.
ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತಕನ್ನಡ ಜಿಲ್ಲಾ ಭೇಟಿ ಕಾರ್ಯಕ್ರಮದ ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸುತ್ತ ಈ ವಿಷಯ ತಿಳಿಸಿದರು.
ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಹರಿದು ಬಂದ ಅನುದಾನದ ಲೆಕ್ಕ ಮಾಡುವ ಅವಕಾಶವನ್ನು ವಿರೋಧಿಗಳು ಮಾಡಿಕೊಟ್ಟಿದ್ದು, ಲೆಕ್ಕದ ಪ್ರಕಾರ ರು.1200ಕೋ. ಅಧಿಕ ಅನುದಾನ ಕ್ಷೇತ್ರಕ್ಕೆ ಸಿಕ್ಕಿರುವುದು ತೃಪ್ತಿ ತಂದಿದೆ ಎಂದು ಶಾಸಕರು, ಕ್ಷೇತ್ರಕ್ಕೆ ಲಭಿಸಿರುವ ಅನುದಾನದಲ್ಲಿ ರು.100ಕೋ. ಅಧಿಕ ಮೊತ್ತದ ವಸತಿ ಯೋಜನೆಗಳಿವೆ. ಭಟ್ಕಳ ಹೊನ್ನಾವರದ 1000 ಅನಾರೋಗ್ಯಪೀಡಿತರಿಗೆ ಸರಿಸುಮಾರು ರು.3ಕೋ. ನೆರವು ಲಭಿಸಿದೆ. ಕೆಲವೇ ದಿನಗಳಲ್ಲಿ ಅನುದಾನದ ಮೊತ್ತ ರು.1500 ಕೋಟಿ ತಲುಪುವ ನಿರೀಕ್ಷೆ ಇದೆ. ಇದೆಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪೂರ್ಣ ಸಹಕಾರವೇ ಕಾರಣವಾಗಿದೆ. ನನ್ನ ಯಾವುದೇ ಮನವಿ ಪತ್ರವನ್ನೂ ಅವರು ತಿರಸ್ಕರಿಸದೇ ಜನರ ಬೇಡಿಕೆಗಳಿಗೆ ಸ್ಪಂದನೆ ನೀಡಿದ್ದಾರೆ. ಡಿ.6ರಂದು ನಮ್ಮೆಲ್ಲರ ಒತ್ತಾಸೆಯ ಮೇರೆಗೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಲಿದ್ದು, ಭಟ್ಕಳದಲ್ಲಿ ಬೆಳಿಗ್ಗೆ 11 ಗಂಟೆಗೆ 131 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ನೂರಾರು ಕಾಮಗಾರಿಗಳಿಗೆ ಶಂಕುಸ್ಥಾಪನೆಯ ಕೆಲಸವನ್ನೂ ಅವರೇ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿಗಳ ಜೊತೆಗೆ ಸಚಿವರಾದ ಆರ್.ವಿ.ದೇಶಪಾಂಡೆ, ಮಹಾದೇವಪ್ಪ, ಹೆಚ್.ಕೆ.ಪಾಟೀಲ್ ಸೇರಿದಂತೆ 10 ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದೇ ರು. 1200ಕೋ. ಅನುದಾನದ ಚಿತ್ರಣ ಭಟ್ಕಳ ಹೊನ್ನಾವರದ ಜನತೆಗೆ ಸಿಗಲಿದೆ. ಮುಂದಿನ 5-6 ತಿಂಗಳ ಒಳಗೆ ಶಂಕುಸ್ಥಾಪನೆಗೊಂಡ 75% ಕಾಮಗಾರಿಗಳು ಮುಗಿಯುವ ವಿಶ್ವಾಸ ಇದೆ ಎಂದು ವಿವರಿಸಿದರು. ನಾನು ಶಾಸಕನಾಗುವ ಮೊದಲು ಜನರಿಗೆ ನನ್ನ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ. ಶಾಸಕನಾದ ನಂತರ ನಾನು ಏನು ಕೆಲಸ ಮಾಡಿದ್ದೇನೆ ಎನ್ನುವುದು ಕ್ಷೇತ್ರದ ಜನರ ಅರಿವಿಗೆ ಬಂದಿದೆ ಎಂದುಕೊಳ್ಳುತ್ತೇನೆ.
ಡಿ.6ರಂದು ಭಟ್ಕಳದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮವಾಗಿದ್ದು, ಪಕ್ಷದ ಕಾರ್ಯಕ್ರಮವಲ್ಲ. ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರೂ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಜನರು ಪಕ್ಷಭೇದ ಮರೆತು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ವಿನಂತಿಸಿಕೊಂಡರು.
ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಅಧ್ಯಕ್ಷ ಈಶ್ವರ ನಾಯ್ಕ, ಪುರಸಭಾ ಅಧ್ಯಕ್ಷ ಸಾದೀಕ್ ಮಟ್ಟಾ, ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷ ಅಬ್ದುರ್ರಹೀಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕ, ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ವಿಷ್ಣು ದೇವಡಿಗ, ಎಪಿಎಮ್ಸಿ ಅಧ್ಯಕ್ಷ ಗೋಪಾಲ ನಾಯ್ಕ, ಶಿರಾಲಿ ಗ್ರಾಪಂ ಅಧ್ಯಕ್ಷ ವೆಂಕಟೇಶ ನಾಯ್ಕ, ಪುರಸಭಾ ಉಪಾಧ್ಯಕ್ಷ ಕೆ.ಎಮ್.ಆಶ್ಪಾಕ್, ತಾಪಂ ಸದಸ್ಯ ಮಹಾಬಲೇಶ್ವರ ನಾಯ್ಕ, ಸುರೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.