ಭಟ್ಕಳ: ಐದು ಬಾರಿ ಸಂಸದರಾಗಿದ್ದು ಈಗ ಕೇಂದ್ರ ಸಚಿವರಾಗಿರುವ ಅನಂತಕುಮಾರ ಹೆಗಡೆ ತನ್ನ 25 ವರ್ಷದ ಅವಧಿಯಲ್ಲಿ ಒಂದು ಕಿ.ಮೀ.ರಸ್ತೆಯನ್ನು ಅಭಿವೃದ್ಧಿ ಮಾಡಿದ್ದರೆ ಅದರ ಲೆಕ್ಕ ಕೊಡಲಿ ಎಂದು ಮಾಜಿ ಶಾಸಕ ಮಾಂಕಾಳ್ ವೈದ್ಯ ಬಹಿರಂಗ ಸವಾಲೆಸೆದಿದ್ದಾರೆ.
ಅವರು ಗುರುವಾರ ಭಟ್ಕಳ ಬ್ಲಾಕ್ ಕಾಂಗ್ರೇಸ್ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ರಾಹುಲ್ ಗಾಂಧಿಯ ಕುರಿತು ನಮ್ಮ ಕ್ಷೇತ್ರದ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಯವರ ಬಗ್ಗೆ ಅತೀ ಹಗುರವಾಗಿ ಮಾತನಾಡುವ ಅವರು ಮನಸ್ಥಿತಿಯನ್ನೊಮ್ಮೆ ಸರಿಪಡಿಸಿಕೊಳ್ಳಬೇಕಾಗಿದೆ ಎಂದ ಅವರು ರಾಹುಲ್ ಗಾಂಧಿ ಯಾರು ಅನ್ನುವುದು ದೇಶದ ಜನತೆಗೇ ಗೊತ್ತಿದೆ. ಅವರ ಅಜ್ಜಿಯ ಇತಿಹಾಸ ತಿಳಿದವರಿಗೆ ಅವರ ಕುರಿತು ಹಗುರವಾಗಿ ಮಾತನಾಡುವ ಮನಸ್ಸು ಬರಲಿಕ್ಕಿಲ್ಲ. ಆರ್. ವಿ. ದೇಶಪಾಂಡೆಯವರ ಕುರಿತು ಅವರು ಮಾತನಾಡಿರುವುದು ಅವರ ಅನುಭವದ ಮಾತಾಗಿರಬೇಕು ಎಂದ ಮಂಕಾಳ ವೈದ್ಯ ಈ ಹಿಂದೆ ನಾನು ಹಾಕಿದ್ದ ಬ್ಯಾನರ್, ಪೋಸ್ಟರ್ಗಳು ಅಭಿವೃದ್ಧಿಯಲ್ಲ ಎಂದ ಅನಂತಕುಮಾರ್ ಪಕ್ಷದ ಶಾಸಕರು ಇಂದು ಗುದ್ದಲಿಪೂಜೆ, ಉದ್ಘಾಟನೆ ಮಾಡುತ್ತಿರುವುದೆಲ್ಲವೂ ನನ್ನ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳು. ಇಲ್ಲಿಯ ತನಕ ಒಂದಾದರು ಕಾಮಗಾರಿ ತಂದಿದ್ದರೆ ಅವರು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಪ್ರತಿ ಬಾರಿಯೂ ಚುನಾವಣೆ ಬಂದ ತಕ್ಷಣ ಬೇಕಾಬಿಟ್ಟಿ ನಾಲಿಗೆ ಹರಿಬಿಡುವ ಇವರು ಸಾಹಿತಿಗಳು, ಪತ್ರಕರ್ತರ ಕುರಿತೂ ಹಗುರವಾಗಿ ಮಾತನಾಡಿದ್ದನ್ನು ಜನ ಮರೆತಿಲ್ಲ ಎಂದರು. ರಾಜ್ಯಾಧ್ಯಕ್ಷ ದಿನೇಶ ಗುಂಡೂರಾವ್ ಅವರ ಕುರಿತೂ ವಯಕ್ತಿಕವಾಗಿ ಮಾತನಡಿದ ಇವರಿಗೆ ಕಾನೂನು ಹಾಗೂ ಸಂವಿಧಾನದ ಬೆಲೆ ತಿಳಿದಿಲ್ಲ. ಇದೇ ರೀತಿಯಾಗಿ ತಮ್ಮ ವರಸೆಯನ್ನು ಹರಿಬಿಟ್ಟರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುವುದು ಎಂದೂ ಹೇಳಿದರು.
ಅಂದು ಪರೇಶ ಮೇಸ್ತನ ಕುರಿತು ಚುನಾವಣಾ ಲಾಭಕ್ಕಾಗಿ ಬೊಬ್ಬೆ ಹೊಡೆದ ಇವರು ಇಂದು 7 ಜನ ಹಿಂದೂ ಮೀನುಗಾರರು ಸಮುದ್ರದಲ್ಲಿ ನಾಪತ್ತೆಯಾಗಿ ಒಂದೂವರೆ ತಿಂಗಳು ಕಳೆದರೂ ಚಕಾರ ಎತ್ತುತ್ತಿಲ್ಲ. ಮೇಲಾಗಿ ಕಡಲ್ಗಳ್ಳರು ಅಪಹರಿಸಿದ್ದಾರೆ ಎನ್ನುತ್ತಾರೆ. ಮೋದಿಜೀವರ ಅಚ್ಚೇದಿನ್ ಇದುವೇ ಸಮುದ್ರಕ್ಕೆ ಹೋದವರು ವಾಪಾಸು ಬರದೇ ಇರುವುದು ಎಂದು ವ್ಯಂಗವಾಡಿದರು. ಕಡಲ್ಗಳ್ಳರು ನಮ್ಮವರ ಬೋಟನ್ನು ಅಪಹರಿಸಿದ್ದಾರೆ ಎಂದಾದರೆ ಅದು ಕೇಂದ್ರ ಸರಕಾರದ ವೈಫಲ್ಯವಲ್ಲವೇ, ಅಂತಹ ಕೃತ್ಯ ಆಗಿದ್ದೇ ಆದಲ್ಲಿ ಕೇಂದ್ರ ಸರಕಾರ ನಿದ್ದೆ ಮಾಡುತ್ತಿದೆಯೇ ಎಂದು ಪ್ರಶ್ನಿಸಿದ ವೈದ್ಯ ಅಂತಹ ಅಪಹರಣವಾಗಿದ್ದೇ ಆದಲ್ಲಿ ಪತ್ತೆಹಚ್ಚುವಲ್ಲಿ ಇನ್ನೂ ಸಾಧ್ಯವಾಗದಿರುವುದಕ್ಕೆ ಕೇಂದ್ರ ಸರಕಾರವೇ ಹೊಣೆಯಲ್ಲವೇ ಎಂದೂ ಪ್ರಶ್ನಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ ಓರ್ವ ಮಹಿಳೆಯಾಗಿ ಅನಂತ ಕುಮಾರ ಹೆಗಡೆ ಅವರು ಮಹಿಳೆಯರ ಕುರಿತು ಆಡಿದ ಮಾತುಗಳನ್ನು ಖಂಡಿಸುತ್ತೇನೆ. ಇಂತಹ ಹೇಳಿಕೆಯನ್ನು ಕೊಡುವ ಪೂರ್ವದಲ್ಲಿ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಅವರು ಯೋಚಿಸಬೇಕಿತ್ತು. ಹಿಂದೂ ಮಹಿಳೆಯರು ಆಟದ ಸರಕಲ್ಲ ಎನ್ನುವುದು ಹೆಗಡೆಯವರಿಗೆ ತಿಳಿದಿರಲಿ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಆಲ್ಬರ್ಟ ಡಿಕೋಸ್ತ ಮಾತನಾಡಿ ಅನಂತ ಕುಮಾರ್ ಹೆಗಡೆವರು ತಮ್ಮ ನಾಲಗೆಯನ್ನು ಬಿಗಿ ಹಿಡಿದಿಟ್ಟುಕೊಳ್ಳಬೇಕು. ಈ ಹಿಂದೆ ಅಲ್ಪಸಂಖ್ಯಾತರ ಮತಗಳೇ ಬೇಡಾ ಎನ್ನುವ ಮಾತನಾಡಿ ಅವರು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿದ್ದನ್ನು ನೆನಪಿಸಿದ ಅವರು ಕೀಳು ಪ್ರಚಾರಕ್ಕೆ ಬಿದ್ದರೆ ಎನು ಮಾತನಾಡುತ್ತಿದ್ದೇನೆ ಎನ್ನುವ ಪರಿವೇ ಅರಿವಿರುವುದಿಲ್ಲ ಎಂದರು.
ನ್ಯಾಯವಾದಿ ಸಂತೋಷ ನಾಯ್ಕ ಮಾತನಾಡಿ ಅನಂತ ಕುಮಾರ್ ಹೆಗಡೆ ಅವರ ಮಾತು ಅತ್ಯಂತ ಕೀಳು ಸಂಸ್ಕøತಿಯನ್ನು ಬಿಂಬಿಸುತ್ತದೆ. ಅವರ ಕೈ ಕಡಿಯಿರಿ, ಇವರ ಕೈ ಕಡಿಯಿರಿ ಎನ್ನುವ ಇವರು ಮೊದಲು ತಾವು ಆ ಕೆಲಸ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾ ತಾ.ಪಂ.ಅಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ತಾ.ಪಂ.ಉಪಾಧ್ಯಕ್ಷೆ ರಾಧಾ ವೈದ್ಯ, ಸದಸ್ಯೆ ಜಯಲಕ್ಷ್ಮೀ ಗೊಂಡ, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅದಂ ಪಣಂಬೂರ್, ಮಾಜಿ ಅಧ್ಯಕ್ಷ ಅಬ್ದುರ್ ರಹೀಮ್, ಪ್ರಮುಖರಾದ ಕೆ.ಜೆ.ನಾಯ್ಕ, ಮಹಾಬಲೇಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.