ಭಟ್ಕಳ: ತಾಲೂಕಿನ ಬಯೋಮೆಟ್ರಿಕ್ ಪಡಿತರ ವ್ಯವಸ್ಥೆಯಿಂದ ತಾಲೂಕಿನ ಬಡವರು ಹಾಗೂ ಕೂಲಿಕಾರರಿಗೆ ತೊಂದರೆಯಾಗುತ್ತಿದ್ದು, ಇದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಭಟ್ಕಳ ತಾಲೂಕು ಸಮಿತಿಯ ಸದಸ್ಯರು ಶುಕ್ರವಾರ ಸಂಜೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಬಯೋಮೆಟ್ರಿಕ್ ಜಾರಿಯಿಂದಾಗಿ ಜನರು ಕೆಲಸ ಕಾರ್ಯಗಳನ್ನು ಬಿಟ್ಟು ಸರತಿ ಸಾಲಿನಲ್ಲಿ ನಿಲ್ಲುವುದಲ್ಲದೇ ಅವರ ಹೆಬ್ಬೆರಳ ಗುರುತು ತಾಂತ್ರಿಕ ಕಾರಣಗಳಿಂದಾಗಿ ಸರಿಯಾಗಿ ಹೊಂದಿಕೊಳ್ಳದೇ ಹೋದರೆ ವಾಪಸ್ಸು ಬರಬೇಕಾದ ಸ್ಥಿತಿ ಇದೆ. ಇದು ಕೆಲವೊಮ್ಮೆ 2-3 ಬಾರಿ ಪುನರಾವರ್ತನೆಯಾಗುತ್ತಿದೆ. ಪ್ರತಿನಿತ್ಯ ಕೂಲಿ ಕೆಲಸವನ್ನು ಜೀವನಕ್ಕೆ ಆಧಾರವಾಗಿ ಇರಿಸಿಕೊಂಡವರಿಗೆ ಪಡಿತರ ಅಂಗಡಿಗೆ ಅಲೆದಾಟದಿಂದಾಗಿ ಸಂಬಳ ಸಿಗದೇ ಇರುವುದು ಒಂದು ಕಡೆಯಾದರೆ ಪಡಿತರ ಸಾಮಾನು ನಿಗದಿತ ಸಮಯದಲ್ಲಿ ಸಿಗದಂತಾಗಿದೆ. ಭಟ್ಕಳದಲ್ಲಿ ಈ ಪದ್ದತಿಯನ್ನು ಕೈ ಬಿಡಬೇಕು. ಅಲ್ಲದೇ ತಾಲೂಕಿನ ಹಲವೆಡೆ ರೈತರು ಅರಣ್ಯ ಭೂಮಿಯನ್ನು ಅತಿಕ್ರಮಿಸಿಕೊಂಡು ಮನೆಯನ್ನು ಕಟ್ಟಿಕೊಂಡಿದ್ದು, ಯಾವುದೇ ಕಾರಣಕ್ಕೂ ಅವರನ್ನು ತೆರವುಗೊಳಿಸಬಾರದು. ಮನೆಯನ್ನು ದುರಸ್ತಿ ಪಡಿಸಿಕೊಂಡು ವಾಸಿಸಲು ಅವಕಾಶ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಸಂಘಟನೆಯ ಸದಸ್ಯರು ಆಗ್ರಹಿಸಿದರು.
ತಹಸೀಲ್ದಾರ ವಿ.ಎನ್.ಬಾಡ್ಕರ್ ಮನವಿ ಪತ್ರವನ್ನು ಸ್ವೀಕರಿಸಿದರು. ಗೀತಾ ನಾಯ್ಕ, ಪುಂಡಲೀಕ ನಾಯ್ಕ, ಸುಧಾ ಭಟ್ಟ, ಪುಷ್ಪಾವತಿ ನಾಯ್ಕ, ಗಜೇಂದ್ರ ಶಿರಾಲಿ, ಚಂದ್ರಕಲಾ ನಾಯ್ಕ, ಅನುರಾಧಾ ಡಿಕೋಸ್ತಾ ಮೊದಲಾದವರು ಉಪಸ್ಥಿತರಿದ್ದರು.