ದೇಶದ ಕೋಟ್ಯಾಂತರ ಯುವಕರ ಕನಸುಗಳಿಗೆ ಜೀವ ತುಂಬುವ ಕೆಲಸವಾಗಬೇಕಿದೆ-ಅನಂತ್
ಭಟ್ಕಳ: ದೇಶ ದಯಾನೀಯ ಸ್ಥಿತಿಯಲ್ಲಿದ್ದು ಉತ್ತರಭಾರತ, ಈಶಾನ್ಯ ಭಾರತ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನರು ಒಂದೊಂದು ರೊಟ್ಟಿಗೂ ಹಪಹಪಿಸುತ್ತಿದ್ದಾರೆ ದೇಶದ ಕೋಟ್ಯಾಂತರ ಯುವಕರ ಕನಸುಗಳಿಗೆ ಜೀವ ತುಂಬುವ ಕೆಲಸವಾಗಬೇಕಿದೆ ಎಂದು ಕೇಂದ್ರದ ಕೌಶಲ್ಯಾಭಿವೃದ್ದಿ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ಅವರು ಭಟ್ಕಳ ಬಿಜೆಪಿ ಮಂಡಳ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ದೇಶದ ಪ್ರಧಾನಿ ನನ್ನನ್ನು ಕರೆದು ನಿನಗೆ ಒಂದು ಜವಾಬ್ದಾರಿಯನ್ನು ನೀಡುತ್ತಿಲ್ಲ ಬದಲಿಗೆ ಚಾಲೆಂಜ್ ನೀಡುತ್ತಿದ್ದೇನೆ ಎಂದಾಗ ನನಗೆ ಚಾಲೆಂಜ್ ಅಂದರೆ ಅದನ್ನು ಸ್ವೀಕರಿಸದೆ ಇರಲು ಆಗುತ್ತದಯೇ? ಈಗ ನನ್ನ ಹೆಗಲ ಮೇಲೆ ದೇಶದ ಕೋಟ್ಯಾಂತರ ಯುವಕರ ಕನಸುಗಳಿಗೆ ಜೀವ ತುಂಬುವ ಕೆಲಸ ನೀಡಲಾಗಿದೆ. ನಾನು ಇದನ್ನು ಸವಾಲನ್ನಾಗಿ ಸ್ವೀಕರಿಸಿದ್ದೇನೆ. ಮುಂದಿನ ಒಂದು ವರ್ಷದ ಅವಧಿಯೊಳಗಾಗಿ ನನಗೆ ನೀಡಿರುವ ಟಾಸ್ಕನ್ನು ಪೂರ್ತಿಗೊಳಿಸುತ್ತೇನೆ ಎಂಬ ವಿಶ್ವಾಸ ನನಗಿದೆ. ಅದು ಆಗಿಲ್ಲ ಎಂದಾದರೆ ನಾನೊಬ್ಬ ನಾಲಾಯಕ್ಕು ಎಂದು ಜನ ನನ್ನನ್ನು ಆಡಿಕೊಳ್ಳುತ್ತಾರೆ. ರಾಜಕೀಯದ ಸಹವಾಸ ಬೇಡವೆಂದು ರಾಜಕೀಯದಿಂದ ಹೊರಗಿದ್ದೆ ಬೇಕಂತಲೆ ಕ್ಷೇತ್ರದ ಕಡೆ ಮುಖ ತಿರುಗಿಸಿಲ್ಲ. ಜನ ನನ್ನನ್ನು ಬೈಯ್ದುಕೊಳ್ಳಬೇಕೆಂದೇ ಹಾಗೆ ಮಾಡಿದೆ. ಆದರೆ ಈಗ ದೇಶ ನನಗೆ ಆದೇಶ ನೀಡಿದೆ ಅದನ್ನು ಪೂರ್ತಿಗೊಳಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದ ಅವರು ಇದೊಂದು ಮೊದಿಯವರ ಕಲ್ಪನೆಗಳಿಂದ ಹುಟ್ಟಿಕೊಂಡ ಕೂಸು ಕೌಶಲ್ಯಾಭಿವೃದ್ದಿ ಎಂಬ ಮಂತ್ರಾಲಯ ಹುಟ್ಟಿಕೊಂಡಿದ್ದೆ ಕಳೆದ ಮೂರು ವರ್ಷಗಳ ಹಿಂದೆ. ಇದರ ಯೋಜನೆಗಳು ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಹೊರಬರಲಿದ್ದು ತನ್ನತನವನ್ನು ಕಳೆದುಕೊಂಡವರು ಸಮಾಜದಲ್ಲಿ ಎದ್ದು ನಿಲ್ಲುವಂತಾಗಬೇಕು ಎನ್ನುವುದೇ ಕೌಶಲ್ಯಾಭಿವೃದ್ಧಿ ಇಲಾಖೆಯ ಗುರಿಯಾಗಿದೆ. ಒಬ್ಬ ಮೀನುಗಾರ, ಬಡಗಿ, ಕಮ್ಮಾರ, ಕಲ್ಲು ಕೆತ್ತುವವನಲ್ಲಿದ್ದಷ್ಟು ಕೌಶಲ್ಯಗಳು ಬಿ.ಎ, ಎಂ.ಎ, ಇಂಜಿನೀಯರಿಂಗ್ ಪದವಿ ಪಡೆದ ವ್ಯಕ್ತಿಯಲ್ಲಿ ಇರಲ್ಲ. ಅವರಲ್ಲಿ ಕೇವಲ ಪ್ರಮಾಣಪತ್ರ ಇದೆ. ಆದರೆ ಕೌಶಲ್ಯ ಇರುವುದು ತಳಮಟ್ಟದ ಕೆಲಸಗಾರರಲ್ಲಿ ಅವರನ್ನು ಗುರುತಿಸಿ ವಿಶ್ವವಿದ್ಯಾಲಯ ಮಟ್ಟದ ಪ್ರಮಾಣಪತ್ರವನ್ನು ನೀಡುವ ಯೋಜನೆಯಿದೆ. ಇದು ಕೇವಲ ಭಾಷಣದಲ್ಲಿ ಹೇಳುತ್ತಿಲ್ಲ ಮಾಡಿ ತೋರಿಸುತ್ತೇನೆ. ಭಾಷಣ ಮಾಡುವ ಜಯಾಮಾನದವನಲ್ಲ ಈ ಅನಂತ್ ಹೇಳಿದ್ದನ್ನು ಮಾಡಿ ತೋರಿಸುತ್ತಾನೆ ಎಂದರು. ಭಾರತದ ವಿಶ್ವಾಸದಿಂದ ತಲೆ ನಿಲ್ಲಬೇಕು, ಇದಕ್ಕಾಗಿ ಐಎಎಸ್, ಐಪಿಎಸ್ ಮಾದರಿಯಲ್ಲಿ ಐಎಸ್ಡಿಎಸ್ ಇಂಡಿಯನ್ ಸ್ಕಿಲ್ ಡೆವಲಪ್ಮೆಂಟ್ ಸರ್ವಿಸ್ ಎಂಬ ಇಲಾಖೆಯನ್ನು ಸೃಷ್ಟಿಸಿ ಅದರ ಮೂಲಕ ಕೌಶಲ್ಯಾಧಾರಿತ ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಲಾಗುವುದು, ಶ್ರಮವಿಲ್ಲದ ಬದುಕು ಲಾಟರಿ ಟಿಕೇಟ್ ಇದ್ದಂತೆ ಅದು ಹೊಡೆಯಿತು ಬದುಕು ಉತ್ತಮ ಇಲ್ಲವಾದರೆ ಬದುಕು ನರಕವಾಗುತ್ತದೆ. ಶ್ರಮಪಟ್ಟು ನಾವು ಬದುಕುವುದನ್ನು ಕಲಿಯಬೇಕು ಎಂದರು.
ಅಭಿವೃದ್ಧಿಯೆಂದರೆ ನಾವು ಕೇವಲ ರಸ್ತೆ, ನೀರು, ಚರಂಡಿ, ಬೆಳಕು ಎಂದುಕೊಂಡಿದ್ದೇವೆ. ಅದು ನಮ್ಮ ಮನಸ್ಥಿತಿ ಮಾತ್ರ, ಆದರೆ ನಿಜವಾದ ಭಾರತದ ಅಭಿವೃದ್ಧಿಯೆಂದರೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಅಭಿವೃದ್ಧಿಯಾಗಿದೆ. ಕಳೆದ ೨೦ ವರ್ಷಗಳಿಂದ ಅವುಗಳನ್ನು ಪ್ರತಿ ಹಂತದಲ್ಲಿಯೂ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಾ ಬಂದಿದ್ದೇನೆ. ಅನೇಕ ಕಾರ್ಯಗಳನ್ನು ಆ ನಿಟ್ಟಿನಲ್ಲಿ ಮಾಡಿದ್ದೇನೆ ಎಂದ ಅವರು ಕೌಶಲ್ಯ ಅಭಿವೃದ್ಧಿಯೊಂದು ದೊಡ್ಡ ಸವಾಲಾಗಿ ಸ್ವೀಕರಿಸಿದ್ದೇನೆ ಎಂದರು.
ಮೋದಿಜೀಯವರ ಯಂಗ್ ಇಂಡಿಯಾಕ್ಕೊಂದು ರೂಪು ಕೊಡುವ ಮಂತ್ರಾಯಲ ಇದಾಗಿದೆ. ಹೊಣೆಗಾರಿಕೆಯನ್ನು ಜವಾಬ್ದಾರಿಯಿಂದ ನಿಭಾಯಿಸಿ ಯಂಗ್ ಇಂಡಿಯಾಕ್ಕೆ ಹೊಸ ರೂಪ ಕೊಡಲು ಬಯಸಿದ್ದೇನೆ. ಈಗಾಗಲೇ ಹೊಸ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಅವುಗಳ ಮೂಲಕ ಜನತೆಯ ವಿಶ್ವಾಸವನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡಿ ಸ್ವತಹ ಜನರೇ ಮುಂದೆ ಬರುವಂತೆ ಮಾಡುವುದು ನನ್ನ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಆರ್. ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ ಮತ್ತಿತರರು ಮಾತನಾಡಿದರು.
ಭಟ್ಕಳ ಮಂಡಲ ಅಧ್ಯಕ್ಷ ರಾಜೇಶ್ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಭ್ರಾಯ ದೇವಾಡಿಗ ಸ್ವಾಗತಿಸಿದರು. ಧನ್ಯಕುಮಾರ್ ಜೈನ್ ನಿರೂಪಿಸಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಜೆ.ಡಿ.ನಾಯ್ಕ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ್ ಹೆಗಡೆ, ಪರಮೇಶ್ವರ ದೇವಾಡಿಗ, ನಾಗಮ್ಮ ಗೊಂಡ, ಕಿಶನ್ ಬಲ್ಸೆ, ಗಣೇಶ್ ನಾಯ್ಕ, ಲಕ್ಷ್ಮಣ ನಾಯ್ಕ, ಗಣಪತಿ ಉಳ್ಮಣ, ತಿಮ್ಮಪ್ಪ ಹೊನ್ನೆಮನೆ, ಎನ್.ಎಸ್. ಹೆಗಡೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತಿದ್ದರು.
ಕುರ್ಚಿ ಬದಲಾಗಿದೆ ಅನಂತ್ ಬದಲಾಗಿಲ್ಲ
ನನಗೆ ಕೇಂದ್ರ ಮಂತ್ರಿ ಸಿಕ್ಕಿದ್ದರಿಂದ ಈಗೇನು ಅನಂತ್ ಕುಮಾರ್ ಬದಲಾಗುತ್ತಾರೆ ಎಂದು ಕೆಲವರು ಭಾವಿಸಿದ್ದು ‘ನನ್ನ ಕುರ್ಚಿ ಬದಲಾಗಿದೆ ಹೊರತು ಈ ಅನಂತ್ ಬದಲಾಗಿಲ್ಲ. ಅನಂತ್ ನ ದೇಹದಲ್ಲಿ ಅದೇ ರಕ್ತ ಹರಿಯುತ್ತಿದೆ. ನಾನು ಎಂದಿಗೂ ಬದಲಾಗುವುದಿಲ್ಲ ಎಂದು ತಮ್ಮ ಮಾತಿನ ವರಸೆಯನ್ನು ಬೀಸಿದ ಕೇಂದ್ರ ಸಚಿವ ಅನಂತ್ ತನ್ನ ತೀಕ್ಷ್ಣ ಹಾಗೂ ಹರಿತ ಮಾತುಗಾರಿಕೆಯಿಂದ ಕಾರ್ಯಕರ್ತರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ಗ್ರಾಮಪಂಚಾಯತ್ ಚುನಾವಣೆಯಲ್ಲಿ ನಿಂತು ಗೆಲ್ಲುವ ಆರ್ಹತೆಯಿಲ್ಲದ ನನಗೆ ಡಾ.ಚಿಂತರಂಜನ್ ರು ನನ್ನನ್ನು ಲೋಕಸಭೆಗೆ ಪರಿಚಯಿಸಿದರು. ನಿಮ್ಮ ಪ್ರೀತಿ ಅಭಿಮಾನದಿಂದಾಗಿ ನಾನು ಇಂದು ಈ ಎತ್ತರಕ್ಕೆ ಬೆಳೆದಿದ್ದೇನೆ. ನಾನು ಸಂಪ್ರದಾಯವಾದಿಯಲ್ಲ, ಅಸಂಪ್ರಾದಾಯವಾದುದನ್ನೇ ಮಾಡುತ್ತೇನೆ. ಇದನ್ನು ಪತ್ರಕರ್ತರು ಹೇಗಾದರೂ ಅರ್ಥೈಸಿಕೊಳ್ಳಲಿ, ನಾನು ಯಾರು ಮಾಡದ್ದನ್ನೇ ಮಾಡುತ್ತೇನೆ.ಯಾರೋ ನಡೆದ ದಾರಿಯಲ್ಲಿ ನಾನು ನಡೆಯಲ್ಲ, ಈ ದೇಶ, ಈ ಧರ್ಮ, ಈ ಜನರನ್ನು ಸ್ವೀಕಾರ ಮಾಡಿದ್ದೇನೆ. ದೇಶಕೊಟ್ಟ ದೀಕ್ಷೆಯನ್ನು ಸವಾಲೆಂದು ಸ್ವೀಕರಿದ್ದೇನೆ. ಮುಂದಿನ ವರ್ಷ ತಮ್ಮ ಮುಂದೇ ಹಾಜರಾಗುತ್ತೇನೆ. ಎಂದಿನಂತೆ ನನ್ನನ್ನು ಆಶೀರ್ವದಿಸಿರಿ ಎಂದು ಕೇಳಿಕೊಂಡರು.