ಭಟ್ಕಳ: ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ವಿರುದ್ಧ ರಾಜ್ಯ ಬಿಜೆಪಿ ನೀಡಿರುವ ಕರ್ನಾಟಕ ಬಂದ್ಗೆ ಸಹಕಾರ ನೀಡುವಂತೆ ಭಟ್ಕಳ ಬಿಜೆಪಿ ಘಟಕ ವಿನಂತಿಸಿಕೊಂಡಿದೆ.
ಈ ಕುರಿತು ಭಟ್ಕಳ ಬಿಜೆಪಿ ಘಟಕದ ಮುಖಂಡರು ಶನಿವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಜೆಡಿಎಸ್ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ಚುನಾವಣೆಯ ನಂತರ ಜೆಡಿಎಸ್ ಮರೆತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದು, ಇದೀಗ ಸಮ್ಮಿಶ್ರ ಸರಕಾರದ ನೆಪ ಹೇಳಿಕೊಂಡು ಕೊಟ್ಟ ಮಾತಿನಿಂದ ಹಿಂದಕ್ಕೆ ಸರಿಯುವ ಪ್ರಯತ್ನ ನಡೆಸಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸೋಮವಾರ ಭಟ್ಕಳದ ರೈತರು, ವ್ಯಾಪಾರಿಗಳು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬಂದ್ ನಡೆಸುವ ಮೂಲಕ ಸಹಕಾರ ನೀಡಬೇಕು. ಸೋಮವಾರ ಶಾಸಕ ಸುನಿಲ್ ನಾಯ್ಕ ನೇತೃತ್ವದಲ್ಲಿ ಭಟ್ಕಳ ಬಿಜೆಪಿ ಕಚೇರಿಯಿಂದ ಸಹಾಯಕ ಆಯುಕ್ತರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ನಾಯ್ಕ ಆಸರಕೇರಿ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಪರಮೇಶ್ವರ ದೇವಡಿಗ, ಭಟ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಭಾಸ್ಕರ ದೈಮನೆ, ಗೋವರ್ಧನ ನಾಯ್ಕ, ಮೋಹನ ನಾಯ್ಕ, ದಿನೇಶ ನಾಯ್ಕ, ದಾಸ ನಾಯ್ಕ ತಲಗೋಡ ಮೊದಲಾದವರು ಉಪಸ್ಥಿತರಿದ್ದರು.